
ಶ್ರೀನಗರ: ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಬೆನ್ನಲ್ಲೇ ಉಗ್ರರಿಗಾಗಿ ಭಾರತೀಯ ಸೇನಾಪಡೆ ತೀವ್ರ ಶೋಧ ನಡೆಸುತ್ತಿದ್ದು, ಇದರ ಬೆನ್ನಲ್ಲೇ ಮತ್ತಷ್ಟು ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಗುಪ್ತಚರ ದಳಗಳು ಎಚ್ಚರಿಕೆ ನೀಡಿವೆ.
ಗುಪ್ತಚರ ದಳಗಳ ಎಚ್ಚರಿಕೆ ಹಿನ್ನೆಲೆಯಲ್ಲಿ ಕಾಶ್ಮೀರದ 48 ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಪಹಲ್ಗಾಮ್ ದಾಳಿಯ ನಂತರ ಕಣಿವೆ ಪ್ರದೇಶದಲ್ಲಿ ಉಗ್ರರ ಸ್ಲೀಪರ್ ಸೆಲ್ ಸಕ್ರಿಯವಾಗಿದ್ದು, ಮತ್ತಷ್ಟು ದಾಳಿಗೆ ಸಂಚು ರೂಪಿಸಿವೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆ ತೀವ್ರಗೊಳಿಸುವಂತೆ ಗುಪ್ತಚರ ದಳಗಳು ಮಾಹಿತಿ ನೀಡಿವೆ ಎಂದು ವರದಿಗಳು ತಿಳಿಸಿವೆ.
ಮೂಲಗಳ ಪ್ರಕಾರ, ಭಯೋತ್ಪಾದಕ ಸಂಘಟನೆಗಳು ಮುಂಬರುವ ದಿನಗಳಲ್ಲಿ ಭದ್ರತಾ ಪಡೆ ಮತ್ತು ಸ್ಥಳೀಯರಲ್ಲದ ನಿವಾಸಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿವೆ ಎಂದು ತಿಳಿದುಬಂದಿದೆ.
ಸ್ಥಳೀಯೇತರ ಜನರು, ಸಿಐಡಿ ಅಧಿಕಾರಿಗಳು, ಕಾಶ್ಮೀರಿ ಪಂಡಿತರು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಐಎಸ್ ಐ ಸಂಚು ರೂಪಿಸಿರುವುದಾಗಿ ಗುಪ್ತಚರ ದಳ ಮುನ್ನೆಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
Advertisement