
ಲಖನೌ: ಉತ್ತರ ಪ್ರದೇಶ ಸರ್ಕಾರ ಕೊನೆಯ ಪಾಕಿಸ್ತಾನಿ ಪ್ರಜೆಯನ್ನು ಗಡೀಪಾರು ಮಾಡಲು ಕೇವಲ ಒಂದು ದಿನ ಬಾಕಿ ಇರುವಾಗ, ಇಸ್ಲಾಮಾಬಾದ್ ಮೂಲದ ಮರಿಯಮ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ತನ್ನ ಭಾರತೀಯ ಪತಿಯೊಂದಿಗೆ ರಾಜ್ಯದಲ್ಲಿಯೇ ಇರಲು ಮನವಿ ಮಾಡಿದ್ದಾರೆ.
ಅಲ್ಪಾವಧಿಯ ವೀಸಾ ಹೊಂದಿರುವ ಮರಿಯಮ್, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕೇಂದ್ರದ ಆದೇಶದ ಮೇರೆಗೆ "ಹೊರಹಾಕಲ್ಪಟ್ಟ", ಉತ್ತರ ಪ್ರದೇಶದಲ್ಲಿ ಉಳಿದಿರುವ ಏಕೈಕ ಪಾಕಿಸ್ತಾನಿಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅಧಿಕೃತ ಹೇಳಿಕೆಯ ಪ್ರಕಾರ, ಉತ್ತರ ಪ್ರದೇಶ ಸರ್ಕಾರ 24 ಗಂಟೆಗಳ ಒಳಗೆ ಪಾಕಿಸ್ತಾನಿ ಪ್ರಜೆಗಳ ಬಹುತೇಕ ಶೇ. 100 ರಷ್ಟು ವಾಪಸಾತಿಯನ್ನು ಸಾಧಿಸಿದ ಮೊದಲ ರಾಜ್ಯವಾಗಿದೆ ಮತ್ತು ಒಬ್ಬರನ್ನು ಮಾತ್ರ ಗಡೀಪಾರು ಮಾಡುವುದು ಬಾಕಿ ಇದೆ ಎಂಬ ಸಮಯದಲ್ಲಿ ಮರಿಯಮ್ ಅವರ ಮನವಿ ಬಂದಿದೆ.
ರಾಜ್ಯ ಸರ್ಕಾರವು ವಾಪಸ್ ಕಳುಹಿಸಲಾದ ಪಾಕಿಸ್ತಾನಿ ನಾಗರಿಕರ ನಿಖರ ಸಂಖ್ಯೆ ಅಥವಾ ಅವರ ವೀಸಾ ವಿವರಗಳನ್ನು (ಅಲ್ಪಾವಧಿಯ ಅಥವಾ ದೀರ್ಘಾವಧಿಯ) ಉಲ್ಲೇಖಿಸಿಲ್ಲ. ಏಪ್ರಿಲ್ 30 ರಂದು ಗಡೀಪಾರು ಮಾಡಲು ಉಳಿದಿರುವ ಕೊನೆಯ ಪಾಕಿಸ್ತಾನಿ ಪ್ರಜೆ ಯಾರೆಂದು ಅದು ನಿರ್ದಿಷ್ಟಪಡಿಸಿಲ್ಲ. ಮರಿಯಮ್ ಮೂರು ವರ್ಷಗಳ ಹಿಂದೆ ಬುಲಂದ್ಶಹರ್ ಜಿಲ್ಲೆಯ ಖುರ್ಜಾ ನಿವಾಸಿ ಅಮೀರ್ ಅವರನ್ನು ವಿವಾಹವಾಗಿದ್ದು, ಎರಡು ತಿಂಗಳ ಹಿಂದೆ ಅಲ್ಪಾವಧಿ ವೀಸಾ ಪಡೆದಾಗಿನಿಂದ ಖುರ್ಜಾದಲ್ಲಿ ವಾಸಿಸುತ್ತಿದ್ದಾರೆ.
"ನಾನು ಇಸ್ಲಾಮಾಬಾದ್ನವಳು, ಆದರೆ ನಾನು ಇಲ್ಲಿಗೆ ಮದುವೆಯಾಗಿ ಬಂದಿದ್ದೇನೆ. ನನ್ನ ದೇಶವನ್ನು ಬಿಟ್ಟು ನಾನು ಈ ದೇಶಕ್ಕೆ ಬಂದಿದ್ದೇನೆ. ಈಗ ಇದು ನನ್ನ ದೇಶ. ನಾನು ಹಿಂತಿರುಗಲು ಬಯಸುವುದಿಲ್ಲ" ಎಂದು ಮರಿಯಮ್ ಹೇಳಿದ್ದಾರೆ.
ಮರಿಯಮ್ ಅವರು ಭಾರತಕ್ಕೆ ಬಂದ ತಕ್ಷಣ ತಮ್ಮ ಪತಿಯೊಂದಿಗೆ ದೇಶದಲ್ಲಿ ಉಳಿಯಲು ದೀರ್ಘಾವಧಿಯ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದಾರೆ.
"ಇದು ನನ್ನ ಪತಿ ವಾಸಿಸುವ ಸ್ಥಳ, ಇದು ನನ್ನ ಮನೆ. ನಾನು ಅವರೊಂದಿಗೆ ಇಲ್ಲಿಯೇ ಇರಲು ಬಯಸುತ್ತೇನೆ" ಎಂದು ಮರಿಯಮ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ(ಗ್ರಾಮೀಣ) ತೇಜ್ವೀರ್ ಸಿಂಗ್, ಮರಿಯಮ್ ಅರ್ಜಿ ಸಲ್ಲಿಸಿದ್ದಾರೆ. ಉನ್ನತ ಅಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಕೇಂದ್ರದ ಆದೇಶದ ಮೇರೆಗೆ ಅಲ್ಪಾವಧಿಯ ವೀಸಾದಲ್ಲಿ ಬುಲಂದ್ಶಹರ್ನಲ್ಲಿದ್ದ ನಾಲ್ವರು ಪಾಕಿಸ್ತಾನಿ ಮಹಿಳೆಯರನ್ನು ಈಗಾಗಲೇ ತಾಯ್ನಾಡಿಗೆ ವಾಪಸ್ ಕಳುಹಿಸಲಾಗಿದೆ.
Advertisement