
ಮುಂಬೈ: ಕೆನರಾ ಬ್ಯಾಂಕ್ ಸಮೂಹದಿಂದ ಸಾಲ ಪಡೆದು ಸುಮಾರು 55 ಕೋಟಿ ರು. ವಂಚಿಸಿದ ಪ್ರಕರಣದಲ್ಲಿ ವಜ್ರೋದ್ಯಮಿ ಮೆಹುಲ್ ಚೋಕ್ಸಿ ವಿರುದ್ಧ ಮುಂಬಯಿ ನ್ಯಾಯಾಲಯವೊಂದು ಜಾಮೀನು ರಹಿತ ವಾರಂಟ್ ಹೊರಡಿಸಿದೆ. ವಾರಂಟ್ ಕುರಿತ ವರದಿಗಾಗಿ ಜೂನ್ 2 ಕ್ಕೆ ಪ್ರಕರಣವನ್ನು ಮುಂದೂಡಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ನ ಬಹುಕೋಟಿ ಹಣ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚೋಕ್ಸಿಯನ್ನು ಭಾರತೀಯ ತನಿಖಾ ಸಂಸ್ಥೆಗಳು ಹಸ್ತಾಂತರ ಕೋರಿದ ನಂತರ ಏಪ್ರಿಲ್ 12 ರಂದು ಬೆಲ್ಜಿಯಂನಲ್ಲಿ ಬಂಧಿಸಲಾಗಿತ್ತು.
ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆರ್.ಬಿ ಠಾಕೂರ್ ಅವರು ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ. ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರವು ಬೆಜೆಲ್ ಜ್ಯುವೆಲ್ಲರಿಗೆ ಒಕ್ಕೂಟ ಒಪ್ಪಂದದ ಅಡಿಯಲ್ಲಿ ಕಾರ್ಯ ಬಂಡವಾಳ ಸೌಲಭ್ಯಗಳಾಗಿ ಕ್ರಮವಾಗಿ 30 ಕೋಟಿ ಮತ್ತು 25 ಕೋಟಿ ರೂ.ಗಳನ್ನು ಮಂಜೂರು ಮಾಡಿವೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಆರೋಪಿಸಿದೆ.
ಚಿನ್ನ ಮತ್ತು ವಜ್ರ-ಖಚಿತ ಆಭರಣಗಳ ತಯಾರಿಕೆ ಮತ್ತು ಮಾರಾಟಕ್ಕಾಗಿ ಸಾಲವನ್ನು ನೀಡಲಾಯಿತು, ಆದರೆ ಕಂಪನಿಯು ಅದನ್ನು ಆ ಉದ್ದೇಶಗಳಿಗಾಗಿ ಬಳಸಲಿಲ್ಲ ಎಂದು ಸಿಬಿಐ ತಿಳಿಸಿದೆ. ಅಲ್ಲದೆ, ಕಂಪನಿಯು ಸಾಲವನ್ನು ಮರುಪಾವತಿಸಲಿಲ್ಲ, ಇದರಿಂದಾಗಿ ಒಕ್ಕೂಟಕ್ಕೆ 55.27 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಸಂಸ್ಥೆ ಆರೋಪಿಸಿದೆ.
Advertisement