
ನವದೆಹಲಿ: 2008ರ ಮುಂಬೈ ಭಯೋತ್ಪಾದಕ ದಾಳಿಗೆ ದುರ್ಬಲ, ಅಸಮರ್ಥ ಕೇಂದ್ರ ಸರ್ಕಾರವೇ ಕಾರಣ ಎಂದು ಬಿಜೆಪಿ ಅಂದು ಪತ್ರಿಕೆಗಳಲ್ಲಿ ದೊಡ್ಡ ಜಾಹೀರಾತು ಪ್ರಕಟಿಸಿತ್ತು. ಭಯೋತ್ಪಾದನೆ ವಿರುದ್ಧ ಹೋರಾಡಲು ಬಿಜೆಪಿಗೆ ಮತ ನೀಡಿ ಎಂದು, ದೇಶದ ಐಕ್ಯತೆಯನ್ನು ಬದಿಗಿರಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಿತ್ತು ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಇಂದು ಪಹಲ್ಗಾಮ್ ಉಗ್ರ ದಾಳಿಯ ವಿಚಾರದಲ್ಲಿ ಕೇಂದ್ರ ಸರ್ಕಾರದ ವೈಫಲ್ಯವನ್ನು ಪ್ರಶ್ನಿಸುತ್ತಿರುವವರನ್ನು ದೇಶದ್ರೋಹಿಗಳೆಂದು ದೂರುತ್ತಿರುವ ಬಿಜೆಪಿ ಅಂದು ಮಾಡಿದ್ದೇನು? ಎಂದು ಕಾಂಗ್ರೆಸ್ ಮೋದಿ ಸರ್ಕಾರವನ್ನು ಖಾರವಾಗಿಯೇ ಪ್ರಶ್ನಿಸಿದೆ.
2008ರ ಮುಂಬೈ ದಾಳಿ ನಡೆದು ಕೇವಲ ಎರಡು ದಿನಗಳ ನಂತರ, ಅಂದು ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ನಡೆಸಿದ್ದ ಸುದ್ದಿಗೋಷ್ಠಿ ಮತ್ತು ಯುಪಿಎ ಸರ್ಕಾರವನ್ನು ಗುರಿಯಾಗಿಸಿಕೊಂಡು ಬಿಜೆಪಿ ನೀಡಿದ್ದ "ಭಯಾನಕ" ಜಾಹೀರಾತನ್ನು ಕಾಂಗ್ರೆಸ್ ಬುಧವಾರ ತನ್ನ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಂಚಿಕೊಂಡಿದೆ. ಆದರೆ "ಈ ಅತ್ಯಂತ ಸೂಕ್ಷ್ಮ ಸಮಯದಲ್ಲಿ ನಾವು ಈಗ ಒಗ್ಗಟ್ಟಿನಿಂದ ಇರೋಣ" ಎಂದು ಪ್ರತಿಪಾದಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಮುಂಬೈ ದಾಳಿ ಕುರಿತು ಪ್ರಕಟವಾದ ಸುದ್ದಿ ಮತ್ತು ಅದೇ ಪುಟದಲ್ಲಿ ಬಿಜೆಪಿ ನೀಡಿದ್ದ ಜಾಹೀರಾತಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
"ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ ದಿನವೇ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸರ್ವಪಕ್ಷ ಸಭೆ ಕರೆಯುವಂತೆ ಒತ್ತಾಯಿಸಿತು. ಎರಡು ದಿನಗಳ ನಂತರ ಸಭೆ ನಡೆಯಿತು. ಆದರೆ ಪ್ರಧಾನಿ ಭಾಗವಹಿಸಲಿಲ್ಲ. ಏಪ್ರಿಲ್ 24 ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ನಿರ್ಣಯವು ಸಂಪೂರ್ಣವಾಗಿ ಸ್ಪಷ್ಟವಾಗಿದೆ" ಎಂದು ಅವರು X ನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ದಾಳಿಯ ಬಗ್ಗೆ ಚರ್ಚಿಸಲು ಮತ್ತು ಸಾಮೂಹಿಕ ಸಂಕಲ್ಪವನ್ನು ಪ್ರದರ್ಶಿಸಲು ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕರೆಯುವಂತೆ ಆಗ್ರಹಿಸಿವೆ ಎಂದು ಹಿರಿಯ ನಾಯಕ ಹೇಳಿದ್ದಾರೆ.
"ಆದರೆ ನವೆಂಬರ್ 28, 2008 ರಂದು - ಮುಂಬೈನಲ್ಲಿ ಮಾರಕ ಭಯೋತ್ಪಾದಕ ದಾಳಿ ನಡೆದು ಕೇವಲ ಎರಡು ದಿನಗಳ ನಂತರ - ಬಿಜೆಪಿ ಏನು ಮಾಡಿತು? ಆಗಿನ ಗುಜರಾತ್ ಮುಖ್ಯಮಂತ್ರಿ ಮುಂಬೈಗೆ ಹೋಗಿ ಸುದ್ದಿಗೋಷ್ಠಿ ನಡೆಸಿದರು" ಎಂದು ರಮೇಶ್ ತಿರುಗೇಟು ನೀಡಿದ್ದಾರೆ.
ಬಿಜೆಪಿ ಅದೇ ದಿನ ಪತ್ರಿಕೆಗಳಲ್ಲಿ "ಭಯಾನಕ" ಜಾಹೀರಾತನ್ನು ಬಿಡುಗಡೆ ಮಾಡಿತು ಮತ್ತು ಈ ಉಗ್ರ ದಾಳಿಗೆ ದುರ್ಬಲ, ಅಸಮರ್ಥ ಸರ್ಕಾರ ಕಾರಣ. ಉಗ್ರರ ವಿರುದ್ಧ ಹೋರಾಡಲು ಬಿಜೆಪಿ ಮತ ಹಾಕಿ ಎನ್ನವು ಜಾಹೀರಾತು ನೀಡುತ್ತಿತ್ತು ಎಂದು ಹೇಳಿದರು.
"ಆದರೆ ಇದು ಇತಿಹಾಸ. ಈ ಅತ್ಯಂತ ಸೂಕ್ಷ್ಮ ಸಮಯದಲ್ಲಿ ನಾವು ಈಗ ಒಗ್ಗಟ್ಟಿನಿಂದ ಇರೋಣ. ದೇಶ ಪ್ರತೀಕಾರದ ನಿರೀಕ್ಷೆಯಲ್ಲಿದೆ" ಎಂದು ಜೈರಾಮ್ ರಮೇಶ್ ಬರೆದಿದ್ದಾರೆ.
Advertisement