
ನವದೆಹಲಿ: ಸದನದ ಬಾವಿಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ( CISF)ಸಿಬ್ಬಂದಿ ನಿಯೋಜನೆ ವಿರುದ್ಧ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜನ ಖರ್ಗೆ ಶುಕ್ರವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಚಾರಗಳನ್ನು ಪ್ರಸ್ತಾಪಿಸದಂತೆ ವಿಪಕ್ಷಗಳ ಸಂಸದರನ್ನು ತಡೆಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ರಾಜ್ಯಸಭೆಯ ಕಲಾಪಕ್ಕೆ ಅಡ್ಡಿಪಡಿಸಲು ಕೆಲವು ಸಂಸದರು ಆಕ್ರಮಣಕಾರಿಯಾಗಿ ವರ್ತಿಸಿದ್ದರಿಂದ ಅವರನ್ನು ಮಾರ್ಷಲ್ ಗಳಿಂದ ತಡೆಗಟ್ಟಬೇಕಾಯಿತು. ಇದು ಸರ್ಕಾರದ ಕ್ರಮವಲ್ಲ. ಉಭಯ ಸದನಗಳ ಅಧ್ಯಕ್ಷರು ತೆಗೆದುಕೊಂಡ ನಿರ್ಧಾರವಾಗಿದೆ ಎಂದು ಹೇಳಿದರು.
ಇಬ್ಬರು ಅಪರಿಚಿತರು ಲೋಕಸಭೆಗೆ ನುಗ್ಗಿ ಸಂಸದರತ್ತ ಹೊಗೆ ಸಿಡಿಸಿದ ಘಟನೆ ನಂತರ CISF ಸಿಬ್ಬಂದಿ ಭದ್ರತೆಯ ಭಾಗವಾಗಿದ್ದಾರೆ. ಸಂಸದರು ಸದನದೊಳಗೆ ಸೆಕ್ರೆಟರಿಯೇಟ್ ಮೇಜಿನ ಮೇಲೂ ಜಿಗಿದ ಪ್ರಕರಣಗಳಿವೆ ಎಂದರು.
ನಿರ್ದಿಷ್ಟವಾಗಿ ಏನಾಯಿತು ಎಂಬುದರ ಕುರಿತು ರಾಜ್ಯಸಭೆಯಿಂದ ಮಾಹಿತಿ ಪಡೆಯುತ್ತಿದ್ದೇನೆ. ವಿರೋಧ ಪಕ್ಷಗಳಿಗೆ ಯಾವುದೇ ಸಮಸ್ಯೆಯಿದ್ದರೆ ಸಭಾಧ್ಯಕ್ಷರೊಂದಿಗೆ ಸಮಾಲೋಚಿಸುವುದಾಗಿ ಭರವಸೆ ನೀಡಿದರು. ಕೆಲವು ಸಂಸದರು ಕಲಾಪಕ್ಕೆ ಅಡ್ಡಿಪಡಿಸಲು ತಮ್ಮ ಸ್ಥಾನಗಳಿಂದ ಆಕ್ರಮಣಕಾರಿಯಾಗಿ ವರ್ತಿಸಿ ಹೊರಬಂದ ಬಗ್ಗೆ ಮಾಹಿತಿ ಇರುವುದಾಗಿ ಸಚಿವರು ಹೇಳಿದರು.
ಸಂಸದರು ತಮ್ಮ ಹಕ್ಕು ಬಳಸಿಕೊಳ್ಳುವ ಹಾದಿ ಅಥವಾ ಅವರು ಪ್ರಶ್ನೆ ಕೇಳುವುದಕ್ಕೆ ಅಡ್ಡಿಯಾಗುವಂತೆ ಏನನ್ನೂ ಮಾಡಲಾಗುವುದಿಲ್ಲ. ಆದರೆ ಇತರರು ಮಾತನಾಡುವುದನ್ನು ತಡೆಯುವ ಮತ್ತು ಇತರ ಸದಸ್ಯರ ಹಕ್ಕುಗಳನ್ನು ಕಸಿದುಕೊಳ್ಳುವ ಹಕ್ಕು ಅವರಿಗೆ ಇಲ್ಲ. ಸಂಸತ್ತಿನ ಭದ್ರತೆಯು ಗಂಭೀರ ಸಮಸ್ಯೆಯಾಗಿದ್ದು, ಅಧ್ಯಕ್ಷರು ಮೇಲ್ವಿಚಾರಣೆ ಮಾಡುತ್ತಾರೆಯೇ ಹೊರತು ಸರ್ಕಾರವಲ್ಲ ಎಂದು ತಿಳಿಸಿದರು.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ನಿಯೋಜನೆ ಕುರಿತು ಖರ್ಗೆ ಆಕ್ಷೇಪಕ್ಕೆ ಉತ್ತರಿಸಿದ ಕಿರಣ್ ರಿಜಿಜು, ಡಿಸೆಂಬರ್ 2023 ರಲ್ಲಿ ಅಪರಿಚಿತರು ಲೋಕಸಭೆಗೆ ನುಗ್ಗಿದ ನಂತರ ಎಲ್ಲಾ ಭದ್ರತಾ ವ್ಯವಸ್ಥೆಯಲ್ಲಿ ಕೇಂದ್ರ ಸಶಸ್ತ್ರ ಪಡೆಗಳಲ್ಲಿ ಒಂದಾದ ಸಿಐಎಸ್ ಎಫ್ ನಿಯೋಜಿಸಲಾಗಿದೆ. ಸಂಸತ್ತಿನ ಆವರಣದೊಳಗಿನ ಆಡಳಿತ ಕಾರ್ಯವಿಧಾನ ಕೇಂದ್ರ ಸರ್ಕಾರದ ಅಡಿಯಲ್ಲಿಲ್ಲ ಆದ್ದರಿಂದ ನಾನು ಏನು ಮಾಡಬೇಕು ಎಂಬುದರ ಕುರಿತು ನಿಖರವಾಗಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರಿಗೆ ಪತ್ರ ಬರೆದಿರುವ ಖರ್ಗೆ, ಸದಸ್ಯರು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕೇಳುತ್ತಿರುವಾಗ ಸದನದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಕಂಡು ಆಘಾತ ಮತ್ತು ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ.
Advertisement