
ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರಿಗೆ ವರುಣಾಘಾತ ಎದುರಾಗಿದ್ದು, ಕೇವಲ 8 ಗಂಟೆಗಳಲ್ಲಿ ಬರೊಬ್ಬರಿ 177 ಮಿ.ಮೀ ಮಳೆಯಾಗಿದ್ದು, ವಾಣಿಜ್ಯ ನಗರಿ ಅಕ್ಷರಶಃ ಸ್ತಬ್ಧವಾಗಿದೆ.
ಮುಂಬೈ ಮತ್ತು ನೆರೆಯ ಪ್ರದೇಶಗಳಲ್ಲಿ ಸೋಮವಾರ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿ, ಐಎಂಡಿ 'ರೆಡ್ ಅಲರ್ಟ್' ಘೋಷಿಸಿದ್ದು, ನಗರ ಪಾಲಿಕೆ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಸತತ ಮೂರನೇ ದಿನವೂ ಸುರಿದ ಭಾರೀ ಮಳೆಯ ನಂತರ ಹಲವಾರು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡವು. ಅಂಧೇರಿ ಸಬ್ವೇ ಮತ್ತು ಲೋಖಂಡ್ವಾಲಾ ಕಾಂಪ್ಲೆಕ್ಸ್ನಂತಹ ಕೆಲವು ತಗ್ಗು ಪ್ರದೇಶಗಳಲ್ಲಿ ಕೆಲವು ಸ್ಥಳಗಳಲ್ಲಿ ನೀರು ಸಂಗ್ರಹವಾಗಿದ್ದು, ಸಂಚಾರದ ಮೇಲೆ ಪರಿಣಾಮ ಬೀರಿತು. ಮಹಾನಗರದ ಜೀವನಾಡಿ ಎಂದು ಪರಿಗಣಿಸಲಾದ ಸ್ಥಳೀಯ ರೈಲುಗಳು 8 ರಿಂದ 10 ನಿಮಿಷಗಳ ಕಾಲ ತಡವಾಗಿ ಓಡುತ್ತಿದ್ದವು ಮತ್ತು ಸೇವೆಗಳನ್ನು ಸ್ಥಗಿತಗೊಳಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
8 ಗಂಟೆಗಳಲ್ಲಿ 177ಮಿ.ಮೀ ಮಳೆ
ಸೋಮವಾರ ಮುಂಬೈನಲ್ಲಿ 6-8 ಗಂಟೆಗಳ ಅವಧಿಯಲ್ಲಿ 177 ಮಿಲಿಮೀಟರ್ ಮಳೆಯಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಅಂತೆಯೇ ಹೆಚ್ಚಿನ ಭಾರಿ ಗಾಳಿ ಜೊತೆಗೆ ದಿನವಿಡೀ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದ್ದು ನಾಗರಿಕರು ಎಲ್ಲಾ ಮುನ್ನೆಚ್ಚರಿಕೆಗಳನ್ನು ಗಮನಿಸುವಂತೆ ಕೇಳಿಕೊಂಡಿದ್ದಾರೆ.
ಮುಂಬೈಗೆ ರೆಡ್ ಅಲರ್ಟ್
ಇನ್ನು ಭಾರಿ ಮಳೆಗೆ ತತ್ತರಿಸಿಹೋಗಿರುವ ಮುಂಬೈನಲ್ಲಿ ಮಂಗಳವಾರವೂ ಭಾರಿಮಳೆಯಾಗುವ ಸಾಧ್ಯತೆ ಇದ್ದು, ಹೀಗಾಗಿ ಇಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಉಳಿದಂತೆ ರತ್ನಗಿರಿ ಜಿಲ್ಲೆಗೆ ಕೆಂಪು ಎಚ್ಚರಿಕೆ ನೀಡಿದ್ದು, ಸೋಮವಾರ ಮತ್ತು ಮಂಗಳವಾರ ಸಿಂಧುದುರ್ಗಕ್ಕೆ ಆರೆಂಜ್ ಅಲರ್ಟ್ ನೀಡಿದೆ.
ಮುಂಬೈ ಮಹಾನಗರ, ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಕೇವಲ ಒಂದು ಗಂಟೆಯಲ್ಲಿ ಕ್ರಮವಾಗಿ 37 ಮಿಮೀ, 39 ಮಿಮೀ ಮತ್ತು 29 ಮಿಮೀ ಸರಾಸರಿ ಮಳೆಯಾಗಿದೆ. ಪೂರ್ವ ಉಪನಗರಗಳ ಚೆಂಬೂರಿನಲ್ಲಿ ಒಂದು ಗಂಟೆಯ ಅವಧಿಯಲ್ಲಿ ಅತಿ ಹೆಚ್ಚು 65 ಮಿಮೀ ಮಳೆಯಾಗಿದ್ದು, ಶಿವಾಜಿ ನಗರದಲ್ಲಿ 50 ಮಿಮೀ ಮಳೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳಲ್ಲಿ, ಮುಂಬೈ ನಗರದಲ್ಲಿ ಸರಾಸರಿ 54.58 ಮಿಮೀ ಮಳೆಯಾಗಿದ್ದು, ಪೂರ್ವ ಉಪನಗರಗಳಲ್ಲಿ 72.61 ಮಿಮೀ ಮಳೆಯಾಗಿದ್ದರೆ, ಪಶ್ಚಿಮ ಉಪನಗರಗಳಲ್ಲಿ 65.86 ಮಿಮೀ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅವಧಿಯಲ್ಲಿ ಹಲವಾರು ಪ್ರದೇಶಗಳಲ್ಲಿ 100 ಮಿಮೀಗಿಂತ ಹೆಚ್ಚು ಮಳೆಯಾಗಿದೆ ಎಂದು ಅವರು ಹೇಳಿದರು.
ಮಳೆ ಪರಿಣಾಮ ಕಾರ್ಮಿಕರಿಗೆ ಸಂಜೆ 4 ಗಂಟೆಗೆ ಮನೆಗೆ ಹೋಗಲು ಅವಕಾಶ ನೀಡುವಂತೆ ಕಚೇರಿಗಳಿಗೆ ತಿಳಿಸಲಾಗಿದೆ. ಸಂಜೆ 6.30 ರ ನಂತರ, ಭಾರಿ ಮಳೆಯಾಗುವ ಕುರಿತು ನಿರೀಕ್ಷಿಸಲಾಗಿದೆ. ಮಂಗಳವಾರ ಶಾಲೆಗಳನ್ನು ಮುಚ್ಚುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ನಾಗರಿಕರು ಕಾರಣವಿಲ್ಲದೆ ಹೊರಗೆ ಹೋಗಬಾರದು. ಅಂತೆಯೇ ರಾಜ್ಯಾದ್ಯಂತ 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಬೆಳೆಗಳು ಬಾಧಿತವಾಗಿವೆ ಮತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು.
ವಿಮಾನ ಸೇವೆ ಅಸ್ತವ್ಯಸ್ಥ
ಭಾರಿ ಮಳೆ ಮತ್ತು ರನ್ ವೇ ಮೇಲೆ ನೀರು ನಿಂತ ಪರಿಣಾಮ ವಿಮಾನ ನಿಲ್ದಾಣದ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ. ಮುಂಬೈ ವಿಮಾನ ನಿಲ್ದಾಣದ ವಕ್ತಾರರು, ಒಂಬತ್ತು ವಿಮಾನಗಳು ಅಂತಿಮವಾಗಿ ಇಳಿಯುವ ಮೊದಲು ಆಗಸದಲ್ಲಿ ಕೆಲಸುತ್ತು ಚಲಿಸಿದವು, ಆದರೆ ಒಂದು ವಿಮಾನವನ್ನು ಭಾರೀ ಮಳೆಯಿಂದಾಗಿ ಮಧ್ಯಾಹ್ನ 12 ಗಂಟೆಗೆ ಸೂರತ್ಗೆ (ಗುಜರಾತ್ನಲ್ಲಿ) ತಿರುಗಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನಿವಾಸಿಗಳು ಅಗತ್ಯವಿದ್ದರೆ ಮಾತ್ರ ಹೊರಹೋಗುವಂತೆ ಮನವಿ ಮಾಡಿದ್ದು, ಐಎಂಡಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದೆ. ಬಂದರು ಮಾರ್ಗದ ಕೆಲವು ತಗ್ಗು ಪ್ರದೇಶಗಳಲ್ಲಿ ಹಳಿಗಳ ಮೇಲೆ ನೀರು ಸಂಗ್ರಹವಾಗಿದ್ದರಿಂದ ಮತ್ತು ಕುರ್ಲಾ ಮತ್ತು ತಿಲಕ್ ನಗರ ನಿಲ್ದಾಣಗಳ ನಡುವೆ ಹಳಿ ಬದಲಾಯಿಸುವ ಸ್ಥಳಗಳು ವಿಫಲವಾದ ಕಾರಣ ಕೇಂದ್ರ ರೈಲ್ವೆ ಮಾರ್ಗದಲ್ಲಿನ ಉಪನಗರ ಸೇವೆಗಳ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆ ಸಂಚಾರ ಅಸ್ತವ್ಯಸ್ಥ
ಇನ್ನು ಭಾರಿ ಮಳೆಯಿಂದಾಗಿ ಮುಂಬೈ ನಗರದ ಕೆಲವು ಭಾಗಗಳಲ್ಲಿ ನೀರು ನಿಂತ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ಥವಾಗಿತ್ತು. ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ಸಂಸ್ಥೆಯ ಬಸ್ ಸೇವೆಗಳ ಯಾವುದೇ ಮಾರ್ಗಗಳನ್ನು ಬದಲಾಯಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರವೂ ಭಾರಿಮಳೆ ಸಾಧ್ಯತೆ
ಇನ್ನು ಈಗಾಗಲೇ ಮಳೆಯಿಂದಾಗಿ ತತ್ತರಿಸಿಹೋಗಿರುವ ಮುಂಬೈ ಜನತೆ ನಾಳೆ ಕೂಡ ಭಾರಿ ಮಳೆಗೆ ಸಿದ್ಧರಾಗಬೇಕಿದೆ. ಬೆಳಿಗ್ಗೆಯಿಂದ ನಿರಂತರ ಮಳೆಯ ನಡುವೆ ವಿದ್ಯಾರ್ಥಿಗಳ ಸುರಕ್ಷತೆಯನ್ನು ಉಲ್ಲೇಖಿಸಿ, ಮಧ್ಯಾಹ್ನದ ಅವಧಿಗೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಡುತ್ತವೆ ಎಂದು ಬಿಎಂಸಿ ಆಯುಕ್ತ ಭೂಷಣ್ ಗಗ್ರಾಣಿ ಘೋಷಿಸಿದ್ದಾರೆ. ತುರ್ತು ಸಂದರ್ಭಗಳಲ್ಲಿ ಅಥವಾ ಅಧಿಕೃತ ನವೀಕರಣಗಳಿಗಾಗಿ ನಿವಾಸಿಗಳು ತಮ್ಮ ವಿಪತ್ತು ನಿಯಂತ್ರಣ ಸಹಾಯವಾಣಿ 1916 ಅನ್ನು ಸಂಪರ್ಕಿಸುವಂತೆ ಅದು ಮನವಿ ಮಾಡಿದೆ.
ಕರ್ನಾಟಕಕ್ಕೂ ಅಪಾಯ
ಮಳೆ ಮಳೆಯಿಂದಾಗಿ ಮಹಾರಾಷ್ಟ್ರದಾದ್ಯಂತ ಡ್ಯಾಂಗಳಿಗೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ಪ್ರಮುಖವಾಗಿ ಆಲಮಟ್ಟಿ ಡ್ಯಾಂಗೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದ್ದು ಮುಂಜಾಗ್ರತಾ ಕ್ರಮವಾಗಿ ರಾಜ್ಯದಿಂದ ಆಲ್ಮಟ್ಟಿ ಅಣೆಕಟ್ಟಿನ ನೀರನ್ನು ಹೊರಹಾಕುವ ಬಗ್ಗೆ ಕರ್ನಾಟಕದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.
Advertisement