Mumbai Rain: ಎರಡು ನಿಲ್ದಾಣಗಳ ನಡುವೆ ಸಿಲುಕಿಕೊಂಡ ಮೊನೊರೈಲು; ಗಾಜು ಕತ್ತರಿಸಿ ಪ್ರಯಾಣಿಕರ ರಕ್ಷಣೆ, Video!
ಮುಂಬೈನಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆಯ ನಡುವೆ ಮೈಸೂರು ಕಾಲೋನಿ ಮತ್ತು ಭಕ್ತಿ ಪಾರ್ಕ್ ನಿಲ್ದಾಣಗಳ ನಡುವೆ ಮೋನೊರೈಲ್ (Monorail) ರೈಲು ಸಿಲುಕಿಕೊಂಡಿದೆ. ಅಗ್ನಿಶಾಮಕ ಇಲಾಖೆ ಮತ್ತು ಇತರ ಸಂಸ್ಥೆಗಳು ಕ್ರೇನ್ಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಎತ್ತರದ ಹಳಿಯಲ್ಲಿ ಚಲಿಸುವ ಈ ರೈಲು ಕನಿಷ್ಠ ಒಂದು ಗಂಟೆಯಿಂದ ಸಿಲುಕಿಕೊಂಡಿದೆ. ರೈಲಿನಲ್ಲಿ ವಿದ್ಯುತ್ ಸರಬರಾಜಿನಲ್ಲಿ ಸಣ್ಣ ಸಮಸ್ಯೆ ಇದೆ ಎಂದು ಮುಂಬೈ ಮೊನೊರೈಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂಬೈ ಅಗ್ನಿಶಾಮಕ ಇಲಾಖೆಯ ಮೂರು ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಿಟಕಿ ಗಾಜು ಕತ್ತರಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಮಹಾನಗರದಲ್ಲಿ ಸಾಮಾನ್ಯ ಜೀವನ ಅಸ್ತವ್ಯಸ್ತವಾಗಿದೆ. ವರದಿಯ ಪ್ರಕಾರ, ರಕ್ಷಣಾ ಕಾರ್ಯಕರ್ತರು ಮೊದಲು ಈ ನಾಲ್ಕು ಬೋಗಿಗಳ ಮೊನೊರೈಲ್ ಅನ್ನು (ಇದು ಮೈಸೂರು ಕಾಲೋನಿ ಬಳಿಯ ಎತ್ತರದ ಹಳಿಯ ತಿರುವಿನಲ್ಲಿ ಸಿಲುಕಿಕೊಂಡಿತ್ತು) ಮತ್ತೊಂದು ಮೋನೊರೈಲ್ ಸಹಾಯದಿಂದ ಹತ್ತಿರದ ನಿಲ್ದಾಣಕ್ಕೆ ಎಳೆಯಲು ಪ್ರಯತ್ನಿಸಿದರು. ಆದರೆ ಬ್ರೇಕ್ ಜಾಮ್ನಿಂದಾಗಿ ಅದು ಸಾಧ್ಯವಾಗಲಿಲ್ಲ.
ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಜಂಟಿ ಆಯುಕ್ತ ಆಸ್ತಿಕ್ ಪಾಂಡೆ ಮಾತನಾಡಿ, ಮೋನೋರೈಲ್ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆ ಬಿದ್ದಿತ್ತು. ಮೋನೋರೈಲಿನ ಸಾಮರ್ಥ್ಯ 109 ಮೆಟ್ರಿಕ್ ಟನ್. ಮಂಗಳವಾರ ಜನದಟ್ಟಣೆಯಿಂದಾಗಿ ಅದು ಓವರ್ಲೋಡ್ ಆಗಿತ್ತು. ಒಂದು ತಿರುವಿನಲ್ಲಿ ಯಾಂತ್ರಿಕ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇದರ ನಂತರ ತುರ್ತು ಬ್ರೇಕ್ ಹಾಕಲಾಯಿತು. ಇದರಿಂದಾಗಿ ರೇಕ್ ಕೆಲಸ ಮಾಡುವುದನ್ನು ನಿಲ್ಲಿಸಿತು. ಈ ವಿಷಯವನ್ನು ತನಿಖೆ ಮಾಡಲಾಗುವುದು ಎಂದು ರಾಜ್ಯ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದರು.
ಚೆಂಬೂರ್ ಮತ್ತು ಭಕ್ತಿ ಪಾರ್ಕ್ ನಡುವೆ ಸಂಜೆ 6:15 ರಿಂದ ಮೋನೋರೈಲ್ ಸೇವೆಯನ್ನು ಮುಚ್ಚಲಾಗಿದೆ. ಅನೇಕ ಪ್ರಯಾಣಿಕರು ತಕ್ಷಣದ ಸಹಾಯಕ್ಕಾಗಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತುರ್ತು ಸಂಖ್ಯೆ 1916 ಅನ್ನು ಸಂಪರ್ಕಿಸಿದರು. ಅಗ್ನಿಶಾಮಕ ದಳವು ಮೂರು ಸ್ನಾರ್ಕೆಲ್ ವಾಹನಗಳ ಸಹಾಯದಿಂದ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಕ್ರೇನ್ ಮೂಲಕ ಪ್ರಯಾಣಿಕರನ್ನು ಹೊರತರಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ