ನಮ್ಮ ಸೈನಿಕರು ಉಗ್ರರನ್ನು ಅವರ ಧರ್ಮದ ಆಧಾರದ ಮೇಲೆ ಕೊಂದಿಲ್ಲ: ರಾಜನಾಥ್ ಸಿಂಗ್
ಜೋಧಪುರ: ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಸೇನಾಪಡೆಗಳು ಪಾಕಿಸ್ತಾನಕ್ಕೆ "ತಕ್ಕ ಪ್ರತ್ಯುತ್ತರ" ನೀಡಿವೆ ಮತ್ತು "ನಮ್ಮ ಸೈನಿಕರು ಭಯೋತ್ಪಾದಕರನ್ನು ಅವರ ಧರ್ಮದ ಆಧಾರದ ಮೇಲೆ ಕೊಂದಿಲ್ಲ, ಬದಲಿಗೆ ಅವರ ಅಮಾನವೀಯ ಕೃತ್ಯಕ್ಕಾಗಿ ಕೊಂದಿದ್ದಾರೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದ್ದಾರೆ.
ಇಂದು ಜೋಧಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸೇಡು ತೀರಿಸಿಕೊಳ್ಳಲು ನಡೆದ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಆಡಳಿತ ಮತ್ತು ಸಶಸ್ತ್ರ ಪಡೆಗಳನ್ನು ಬೆಂಬಲಿಸಿದ್ದಕ್ಕಾಗಿ ಗಡಿ ಪ್ರದೇಶಗಳ ಜನರನ್ನು ಶ್ಲಾಘಿಸಿದರು.
''ಪಹಲ್ಗಾಮ್ ದಾಳಿಯ ನಂತರ, ಮೂರು ಸೇನಾ ಮುಖ್ಯಸ್ಥರನ್ನು ಕರೆದು ಕಾರ್ಯಾಚರಣೆಗೆ ಸಿದ್ಧರಿದ್ದೀರಾ? ಎಂದು ಕೇಳಿದೆ. ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರು ಸರ್ವಾನುಮತದಿಂದ 'ನಾವು ಯಾವುದೇ ಕಾರ್ಯಾಚರಣೆಗೆ ಸಿದ್ಧರಿದ್ದೇವೆ' ಎಂದು ಉತ್ತರಿಸಿದರು. ಇದು ಭಾರತ. ಪ್ರಧಾನಿ ಮೋದಿ ಅಗತ್ಯ ನಿರ್ದೇಶನಗಳನ್ನು ನೀಡಿದರು" ಎಂದು ಅವರು ಹೇಳಿದರು.
"ನಿರ್ಧಿಷ್ಟಪಡಿಸಿದ ಗುರಿಯನ್ನು ಯೋಜಿಸಿದಂತೆ ನಿಖರವಾಗಿ ಹೊಡೆಯಲಾಯಿತು. ಆಪರೇಷನ್ ಸಿಂಧೂರ್ ಸಮಯದಲ್ಲಿ, ನಮ್ಮ ಪಡೆಗಳು ಎಲ್ಲಾ ಗಡಿ ಪ್ರದೇಶಗಳಿಂದ ಸಂಪೂರ್ಣ ಬೆಂಬಲ ಪಡೆದವು. ಭಾರತ ತನ್ನ ಗಡಿಯೊಳಗಿನ ಜನರನ್ನು ಮಾತ್ರ ತನ್ನ ಸದಸ್ಯರೆಂದು ಪರಿಗಣಿಸುವುದಿಲ್ಲ, ಪ್ರಪಂಚದಾದ್ಯಂತ ಇರುವ ಜನರನ್ನು ಸಹ ತನ್ನ ಕುಟುಂಬದ ಭಾಗವೆಂದು ಪರಿಗಣಿಸುತ್ತದೆ, ವಸುದೈವ ಕುಟುಂಬಕಂ ಸಂದೇಶವನ್ನು ಹರಡುತ್ತದೆ" ಎಂದರು.
"ಭಾರತ ಜಾತಿ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ.ಆದರೆ ಭಯೋತ್ಪಾದಕರು, ಜನರ ಧರ್ಮವನ್ನು ಕೇಳಿ ಕೊಂದರು. ನಮ್ಮ ಸೈನಿಕರು ಧರ್ಮದ ಆಧಾರದ ಮೇಲೆ ಭಯೋತ್ಪಾದಕರನ್ನು ಕೊಂದಿಲ್ಲ, ಬದಲಿಗೆ ಅವರ ಕೃತ್ಯಗಳ ಕಾರಣದಿಂದಾಗಿ ಕೊಂದರು" ಎಂದು ರಕ್ಷಣಾ ಸಚಿವರು ಹೇಳಿದರು.
ಏಪ್ರಿಲ್ 22ರ ಪಹಲ್ಗಾಮ್ ಉಗ್ರ ದಾಳಿಯ ನಂತರ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ್ ಅಡಿಯಲ್ಲಿ, ಭಾರತ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ನೆಲೆಗಳ ನಿಖರವಾದ ದಾಳಿ ನಡೆಸಿತು. ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಮಾಡುವುದು ಮತ್ತು ಪ್ರಮುಖ ಉಗ್ರರನ್ನು ತಟಸ್ಥಗೊಳಿಸುವ ಈ ಕಾರ್ಯಾಚರಣೆಯ ಗುರಿಯಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ