

ನವದೆಹಲಿ: ದೇಶದಲ್ಲಿ ತಯಾರಾದ ಅಥವಾ ಆಮದು ಮಾಡಿಕೊಳ್ಳುವ ಎಲ್ಲಾ ಮೊಬೈಲ್ಗಳಲ್ಲಿ ಸಂಚಾರ ಸಾಥಿ ಆ್ಯಪ್ ಅಳವಡಿಕೆ (ಇನ್ಸ್ಟಾಲ್) ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿರುವುದರ ವಿರುದ್ಧ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸೈಬರ್ ವಂಚನೆ ವರದಿ ಮಾಡುವ ಕಾರ್ಯವಿಧಾನದ ಅಗತ್ಯತೆ ಇದೆ. ಆದರೆ, ಮೊಬೈಲ್ಗಳಲ್ಲಿ ‘ಸಂಚಾರ ಸಾಥಿ’ ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸುವಿಕೆಯಿಂದ ಬಳಕೆದಾರರ ಗೌಪ್ಯತೆ ಉಲ್ಲಂಘಿಸುವ ಸಾಧ್ಯತೆ ಹೆಚ್ಚಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಇದು ಕೇವಲ ಒಂದು ವಿಷಯ ಮಾತ್ರವಲ್ಲ, ಬದಲಾಗಿ ಬಿಜೆಪಿ ನಾಯಕರು ದೇಶವನ್ನು ಸರ್ವಾಧಿಕಾರ ರಾಷ್ಟ್ರವನ್ನಾಗಿ ಪರಿವರ್ತಿಸುತ್ತಿದ್ದಾರೆ. ಸಂಸತ್ತು ಏಕೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ನೀವು ಪ್ರತಿದಿನ ನನ್ನನ್ನು ಕೇಳುತ್ತೀರಿ.
ಏಕೆಂದರೆ ಆಡಳಿತ ಪಕ್ಷದ ನಾಯಕರು ಯಾವುದರ ಬಗ್ಗೆಯೂ ಮಾತನಾಡಲು ನಿರಾಕರಿಸುತ್ತಿದ್ದಾರೆ. ವಿಪಕ್ಷದವರನ್ನು ದೂಷಿಸುವುದು ತುಂಬಾ ಸುಲಭ. ಆದರೆ, ವಾಸ್ತವವೆಂದರೆ ಅವರು ಯಾವುದರ ಬಗ್ಗೆಯೂ ಚರ್ಚೆ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.
ಸೈಬರ್ ಭದ್ರತೆಯ ಕುರಿತು ಈಗಾಗಲೇ ವ್ಯಾಪಕ ಚರ್ಚೆ ನಡೆದಿದೆ. ವಂಚನೆ ಕುರಿತು ವರದಿ ಮಾಡುವುದಕ್ಕೆ ಸರಿಯಾದ ವ್ಯವಸ್ಥೆ ಅವಶ್ಯಕತೆಯಿದೆ. ಸಂಚಾರ ಸಾಥಿ ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸಿರುವ ಕೇಂದ್ರದ ನಿಯಮವು ಮೊಬೈಲ್ ಬಳಕೆದಾರರ ಗೌಪ್ಯತೆ ಉಲ್ಲಂಘಿಸಿದಂತಾಗುತ್ತದೆ ಎಂದೂ ಅವರು ಕಿಡಿಕಾರಿದ್ದಾರೆ.
ನಮ್ಮ ಪಕ್ಷವು (ಕಾಂಗ್ರೆಸ್) ಸಭೆ ನಡೆಸಿ ಈ ವಿಷಯದ ಬಗ್ಗೆ ಹೋರಾಟ ನಡೆಸಲು ತೀರ್ಮಾನಿಸಲಿದೆ ಎಂದೂ ಅವರು ಹೇಳಿದ್ದಾರೆ. ಗೌಪ್ಯತೆಯ ಹಕ್ಕು ಎಂಬುದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಒಂದು ಆಂತರಿಕ ಅಂಶವಾಗಿದೆ ಎಂದಿದ್ದಾರೆ. ಆರೋಗ್ಯಕರ ಪ್ರಜಾಪ್ರಭುತ್ವವು ಚರ್ಚೆಗಳನ್ನು ಬಯಸುತ್ತದೆ, ಪ್ರತಿಯೊಬ್ಬರ ಅಭಿಪ್ರಾಯಗಳಿವೆ, ನೀವು ಅವರ ಮಾತನ್ನು ಕೇಳುತ್ತೀರಿ" ಎಂದು ಗಾಂಧಿ ಹೇಳಿದರು.
Advertisement