

ನವದೆಹಲಿ: 'ವಂದೇ ಮಾತರಂ' ಗೀತೆಯ 150ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ 'ವಂದೇ ಮಾತರಂ' ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಜನರ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ವಂದೇ ಮಾತರಂ ಕುರಿತು ಚರ್ಚೆ ನಡೆಸುತ್ತಿದೆ. ಈಗಿನ ಹಾಗೂ ಭವಿಷ್ಯವನ್ನು ನೋಡಲು ಬಯಸದ ಕಾರಣ ಭೂತಕಾಲದ ಬಗ್ಗೆ ಅಧ್ಯಯನ ಮಾಡಬೇಕೆಂದು ಸರ್ಕಾರ ಬಯಸುತ್ತದೆ ಎಂದರು.
ದೇಶದಲ್ಲಿ ಜನರು ಸಂತೋಷವಾಗಿಲ್ಲ, ಸಾಕಷ್ಟು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಸರ್ಕಾರ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸುತ್ತಿಲ್ಲ. ಮೋದಿ ಅವರ ಆತ್ಮ ವಿಶ್ವಾಸ ಕಡಿಮೆಯಾಗುತ್ತಿದೆ. ಅವರ ನೀತಿಗಳು ದೇಶವನ್ನು ದುರ್ಬಲಗೊಳಿಸುತ್ತಿವೆ ಎಂದು ಟೀಕಾ ಪ್ರಹಾರ ನಡೆಸಿದರು. ದೇಶದ ಪ್ರತಿಯೊಂದು ಭಾಗದಲ್ಲೂ 'ವಂದೇ ಮಾತರಂ' ಜೀವಂತವಾಗಿದೆ. ಅದರ ಬಗ್ಗೆ ಯಾವುದೇ ಚರ್ಚೆ ನಡೆಯುವ ಅಗತ್ಯವಿಲ್ಲ."ನಾವು ಯಾಕೆ 'ವಂದೇ ಮಾತರಂ' ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ? ರಾಷ್ಟ್ರಗೀತೆಯ ಬಗ್ಗೆ ಯಾವುದೇ ಚರ್ಚೆ ನಡೆಸಬಾರದು ಎಂದು ಹೇಳಿದರು.
ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರು ಈಗ "ವಂದೇ ಮಾತರಂ" ಮೌಲ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ತಮ್ಮ ನಂಬಿಕೆಗಳನ್ನು ಇತರರ ಮೇಲೆ ಹೇರುವ ಸಾಧನವಾಗಿ ರಾಷ್ಟ್ರಗೀತೆಯನ್ನು ಬಳಸಬಾರದು ಎಂದು ಪ್ರತಿಪಾದಿಸಿದರು.
ವಂದೇ ಮಾತರಂ" ಅನ್ನು ಉತ್ಸಾಹದಿಂದ ಅನುಸರಿಸಬೇಕು, ಏಕೆಂದರೆ ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜನರನ್ನು ಬೆಸೆದ ಗೀತೆಯಾಗಿದೆ. "ವಂದೇ ಮಾತರಂ ಪ್ರದರ್ಶಿಸಲು ಅಲ್ಲ, ರಾಜಕೀಯ ಸಾಧನವೂ ಅಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ವ್ಯಕ್ತಿಗಳು "ವಂದೇ ಮಾತರಂ" ನ ಅರ್ಥವನ್ನು ಹೇಗೆ ಅರ್ಥಮಾಡಿಕೊಳ್ಳಬಲ್ಲರು ಎಂದು ಪ್ರಶ್ನಿಸಿದ್ದಾರೆ.
"ಇಂದು ಒಡಕು ಸೃಷ್ಟಿಸಲು ವಿಭಜಕ ಅಂಶಗಳು ವಂದೇ ಮಾತರಂ ಅನ್ನು ಬಳಸುತ್ತಿವೆ. ಈ ವ್ಯಕ್ತಿಗಳು ಬ್ರಿಟಿಷರು ಬಳಸಿದ ಅದೇ 'ಒಡೆದು ಆಳುವ' ನೀತಿಯನ್ನು ಅನುಸರಿಸುತ್ತಿದ್ದಾರೆ" ಎಂದು ಯಾದವ್ ಆರೋಪಿಸಿದರು.
ಬ್ರಿಟಿಷ್ ಆಳ್ವಿಕೆಯಿಂದ ಹೊರಬರಲು ಭಾರತವನ್ನು ಒಗ್ಗೂಡಿಸುವಲ್ಲಿ "ವಂದೇ ಮಾತರಂ" ನಿರ್ಣಾಯಕ ಪಾತ್ರವನ್ನು ವಹಿಸಿದೆ ಮತ್ತು ಅದರ 150 ನೇ ವರ್ಷದಲ್ಲಿ, ಒಬ್ಬರ ನಂಬಿಕೆಗಳನ್ನು ಹೇರುವ ಅಥವಾ ಇತರರ ಮೇಲೆ ಒತ್ತಡ ಹೇರುವ ಸಾಧನವಾಗಿ ಈ ಹಾಡನ್ನು ಬಳಸಬಾರದು ಎಂದು ಅವರು ಒತ್ತಿ ಹೇಳಿದರು.
Advertisement