

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ (LDF) ದ ಹೀನಾಯ ಸೋಲಿನಿಂದ ನೊಂದು ಎಲ್ಡಿಎಫ್ ಕಾರ್ಯಕರ್ತ ಬಾಬು ವರ್ಗೀಸ್ ಎಂಬುವವರು ತಮ್ಮ ಟ್ರೇಡ್ಮಾರ್ಕ್ ಆಗಿದ್ದ ಮೀಸೆಯನ್ನು ಬೋಳಿಸಿಕೊಂಡ ಘಟನೆ ನಡೆದಿದೆ.
ಪತ್ತನಂತಿಟ್ಟ ಪುರಸಭೆ ಚುನಾವಣೆಗೆ ಮುನ್ನ, ಈ ಭಾಗದಲ್ಲಿ ಎಲ್ ಡಿಎಫ್ ಅಧಿಕಾರವನ್ನು ಉಳಿಸಿಕೊಳ್ಳಲು ವಿಫಲವಾದರೆ ತಮ್ಮ ಮೀಸೆಯನ್ನು ಬೋಳಿಸಿಕೊಳ್ಳುವುದಾಗಿ ವರ್ಗೀಸ್ ಸಾರ್ವಜನಿಕವಾಗಿ ಪ್ರತಿಜ್ಞೆ ಮಾಡಿದ್ದರು.
ನಿನ್ನೆ ಫಲಿತಾಂಶ ಹೊರಬಿದ್ದ ಮೇಲೆ ಪತ್ತನಂತಿಟ್ಟ ಪುರಸಭೆಯಲ್ಲಿ ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಎಲ್ಡಿಎಫ್ಗೆ ದೊಡ್ಡ ಹೊಡೆತ ನೀಡಿತು. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಅಲೈಯನ್ಸ್ (UDF) ಜಿಲ್ಲೆಯ ಪತ್ತನಂತಿಟ್ಟ, ತಿರುವಲ್ಲಾ ಮತ್ತು ಪಂದಳ ಸೇರಿದಂತೆ ನಾಲ್ಕು ಪುರಸಭೆಗಳಲ್ಲಿ ಮೂರನ್ನು ಗೆದ್ದುಕೊಂಡಿತು. ಈ ಮೂರರಲ್ಲಿ, ಪತ್ತನಂತಿಟ್ಟ ಮತ್ತು ತಿರುವಲ್ಲಾ ಹಿಂದೆ ಎಡಪಕ್ಷಗಳ ವಶದಲ್ಲಿದ್ದವು, ಈ ಬಾರಿ ಎಲ್ ಡಿಎಫ್ ಅಡೂರ್ ಮಾತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಇದಲ್ಲದೆ, 16 ಸದಸ್ಯರ ಜಿಲ್ಲಾ ಪಂಚಾಯತ್ನಲ್ಲಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಯುಡಿಎಫ್ ಅಧಿಕಾರವನ್ನು ತನ್ನದಾಗಿಸಿಕೊಂಡಿತು. ಈ ಹಿಂದೆ 12 ಸ್ಥಾನಗಳನ್ನು ಹೊಂದಿದ್ದ ಎಲ್ ಡಿಎಫ್ ಸ್ಥಾನ ನಾಲ್ಕಕ್ಕೆ ಇಳಿದಿದೆ. ಜಿಲ್ಲೆಯ ಗ್ರಾಮ ಮತ್ತು ಬ್ಲಾಕ್ ಪಂಚಾಯತ್ಗಳಲ್ಲಿ ಯುಡಿಎಫ್ ಗೆದ್ದುಕೊಂಡಿದೆ. ಇದು 34 ಗ್ರಾಮ ಮತ್ತು ಏಳು ಬ್ಲಾಕ್ ಪಂಚಾಯತ್ಗಳ ಮೇಲೆ ಹಿಡಿತ ಸಾಧಿಸಿದೆ. ಜಿಲ್ಲೆಯಲ್ಲಿ ದೀರ್ಘಕಾಲದ ಎಡ ಪ್ರಾಬಲ್ಯದ ಸಂಪ್ರದಾಯವನ್ನು ಧಿಕ್ಕರಿಸಿತು.
ವರ್ಗೀಸ್ ಏನು ಪ್ರತಿಜ್ಞೆ ಮಾಡಿಕೊಂಡಿದ್ದರು?
ಚುನಾವಣಾ ಪ್ರಚಾರದ ಸಮಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಪಂಥ ಕಟ್ಟಿಕೊಂಡಿದ್ದ ವರ್ಗೀಸ್ ಈ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲ್ ಡಿಎಫ್ ಸೋತರೆ ಮೀಸೆ ತೆಗೆಸಿಕೊಳ್ಳುವುದಾಗಿ ವಾಗ್ದಾನ ಮಾಡಿಕೊಂಡಿದ್ದರು. ಜಿಲ್ಲೆಯಾದ್ಯಂತ ಯುಡಿಎಫ್ ಭರ್ಜರಿ ಗೆಲುವು ಸಾಧಿಸುವ ಸೂಚನೆ ನೀಡುತ್ತಿದ್ದಂತೆ, ಅವರು ಸ್ಥಳೀಯ ಸಲೂನ್ಗೆ ಹೋಗಿ ಮೀಸೆ ಬೋಳಿಸಿಕೊಂಡರು. ಜೋರಾದ ಹರ್ಷೋದ್ಗಾರಗಳು ಮತ್ತು ಶಿಳ್ಳೆಗಳ ನಡುವೆ ಆ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
ಸ್ಥಳೀಯ ಸಂಸ್ಥೆಯ ಫಲಿತಾಂಶವು ಕೇರಳಕ್ಕೆ ಏನನ್ನು ಸೂಚಿಸುತ್ತದೆ
2025 ರ ಸ್ಥಳೀಯ ಸಂಸ್ಥೆಯ ಚುನಾವಣಾ ಫಲಿತಾಂಶಗಳು ರಾಜ್ಯಾದ್ಯಂತ ಯುಡಿಎಫ್ನ ಪ್ರಬಲವಾದ ಮರಳುವಿಕೆಯನ್ನು ಎತ್ತಿ ತೋರಿಸುತ್ತವೆ. 86 ಪುರಸಭೆಗಳಲ್ಲಿ 54, 941 ಗ್ರಾಮ ಪಂಚಾಯತ್ಗಳಲ್ಲಿ 504 ಮತ್ತು 152 ಬ್ಲಾಕ್ ಪಂಚಾಯತ್ಗಳಲ್ಲಿ 79 ನ್ನು ಗೆದ್ದುಕೊಂಡಿತು. ರಾಜ್ಯವು ಐತಿಹಾಸಿಕವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಮತ್ತು ಮುಂದಿನ ವರ್ಷದ ವಿಧಾನಸಭಾ ಚುನಾವಣೆಗಳ ನಡುವೆ ಬಲವಾದ ಸಂಬಂಧವನ್ನು ಹೊಂದಿದೆ. ಆದ್ದರಿಂದ, ಈ ತೀರ್ಪನ್ನು ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಸರ್ಕಾರದಿಂದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒಕ್ಕೂಟಕ್ಕೆ ಸಾರ್ವಜನಿಕ ಭಾವನೆಯ ಬದಲಾವಣೆಯ ಸೂಚನೆಯಾಗಿ ಕಾಣಬಹುದು.
ಕೊಲ್ಲಂ, ಕೊಚ್ಚಿ ಮತ್ತು ತ್ರಿಶೂರ್ನಂತಹ ಸಾಂಪ್ರದಾಯಿಕ ಭದ್ರಕೋಟೆಗಳಲ್ಲಿ ಎಡಪಕ್ಷಗಳ ಬೆಂಬಲ ಕ್ಷೀಣಿಸಿರುವುದನ್ನು ಫಲಿತಾಂಶಗಳು ಎತ್ತಿ ತೋರಿಸಿವೆ. ಕೊಲ್ಲಂ ಮತ್ತು ತ್ರಿಶೂರ್ ಕ್ರಮವಾಗಿ 25 ಮತ್ತು 10 ವರ್ಷಗಳ ಕಾಲ ಎಡಪಕ್ಷಗಳ ನಿಯಂತ್ರಣದಲ್ಲಿದ್ದವು.
ತಿರುವನಂತಪುರ ಕಾರ್ಪೊರೇಷನ್ನಲ್ಲಿ ಎಡಪಕ್ಷಗಳು ಅನುಭವಿಸಿದ ದೊಡ್ಡ ಹೊಡೆತವೆಂದರೆ ಬಿಜೆಪಿ 101 ಸ್ಥಾನಗಳಲ್ಲಿ 50 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಜಯಶಾಲಿಯಾಯಿತು. ಇದು ರಾಜ್ಯದಲ್ಲಿ ಚುನಾವಣಾ ಸ್ಪರ್ಧೆಯು ಇನ್ನು ಮುಂದೆ ಎಡರಂಗ ಮತ್ತು ಕಾಂಗ್ರೆಸ್ ನಡುವಿನ ದ್ವಿಪಕ್ಷೀಯ ಹೋರಾಟವಲ್ಲ ಎಂದು ಸೂಚಿಸುತ್ತದೆ. ಎಡಪಕ್ಷಗಳು 29 ಸ್ಥಾನಗಳನ್ನು ಗೆದ್ದವು. ಯುಡಿಎಫ್ 19 ಸ್ಥಾನಗಳೊಂದಿಗೆ ಇಲ್ಲಿ ಮೂರನೇ ಸ್ಥಾನದಲ್ಲಿದೆ. ತಿರುವನಂತಪುರ ಕ್ಷೇತ್ರ ಐದು ದಶಕಗಳ ಕಾಲ ಎಡಪಕ್ಷಗಳ ನಿಯಂತ್ರಣದಲ್ಲಿತ್ತು.
Advertisement