

ಪೂಂಚ್: ಹೊಸ ವರ್ಷಾಚರಣೆಗೆ ಇನ್ನು ಕೇವಲ ಒಂದು ದಿನ ಇರುವಂತೆಯೇ ಗಡಿಯಲ್ಲಿ ಉಗ್ರರ ಕರಿ ನೆರಳು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್, ಕಿಶ್ತ್ವಾರ್ ಜಿಲ್ಲೆಗಳ ಕಣಿವೆ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೋಡಾ-ಕಿಶ್ತ್ವಾರ್ ಅರಣ್ಯ ಪ್ರದೇಶಗಳಲ್ಲಿ ಎರಡು ಭಯೋತ್ಪಾದಕ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಮಾಹಿತಿಯ ಮೇರೆಗೆ ಕೇಶ್ವಾನ್-ಚತ್ರೂ ಕಣಿವೆಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ.
ಭಯೋತ್ಪಾದಕರನ್ನು ಪತ್ತೆ ಹಚ್ಚಲು ಮತ್ತು ಈ ಪ್ರದೇಶದ ಮೇಲೆ ನಿಗಾ ವಹಿಸಲು ಡ್ರೋನ್ ಮತ್ತಿತರ ವೈಮಾನಿಕ ಕಣ್ಗಾವಲು ಸಲಕರಣೆಗಳನ್ನು ಪಡೆಗಳು ಬಳಸಿವೆ.
ವರದಿಗಳ ಪ್ರಕಾರ, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರ ಎರಡು ಗುಂಪುಗಳು ಈ ಪ್ರದೇಶದಲ್ಲಿ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಹಿಂದೆ ಇಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಎನ್ ಕೌಂಟರ್ ನಡೆದಿತ್ತು.
ಶಂಕಿತ ಭಯೋತ್ಪಾದಕರ ಚಲನವಲನದ ನಂತರ ಪೂಂಚ್ನ ಇಂಡೋ-ಪಾಕ್ ಗಡಿಯಲ್ಲಿ ಸೇನೆಯ ರೋಮಿಯೋ ಫೋರ್ಸ್ ಶೋಧ ಕಾರ್ಯಾಚರಣೆ ನಡೆಸಿತ್ತು. ವೈಮಾನಿಕ ಕಣ್ಗಾವಲು ಬೆಂಬಲ ಮತ್ತು ಸ್ನಿಫರ್ ಡಾಗ್ಗಳನ್ನು ಸಶಸ್ತ್ರ ಪಡೆ ಹೊಂದಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement