
ವಿಜಯವಾಡ: ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಹಿಂದೂ ಸಂಪ್ರದಾಯಗಳನ್ನು ಉಲ್ಲಂಘಿಸಿದ್ದಕ್ಕಾಗಿ 18 ನೌಕರರ ವಿರುದ್ಧ ಕ್ರಮ ಕೈಗೊಂಡಿದೆ.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರ ನಿರ್ದೇಶನಗಳನ್ನು ಅನುಸರಿಸಿ, ಟಿಟಿಡಿ ಉತ್ಸವಗಳು ಮತ್ತು ಆಚರಣೆಗಳಲ್ಲಿ ಭಾಗವಹಿಸುವುದರೊಂದಿಗೆ ಹಿಂದೂಯೇತರ ಧಾರ್ಮಿಕ ಚಟುವಟಿಕೆಗಳನ್ನು ಆಚರಿಸುತ್ತಿರುವ ನೌಕರರ ವಿರುದ್ಧ ಆದೇಶ ಹೊರಡಿಸಲಾಗಿದೆ.
ಈ ನಿರ್ಧಾರವು ತನ್ನ ದೇವಾಲಯದ ಆಧ್ಯಾತ್ಮಿಕ ಪಾವಿತ್ರ್ಯವನ್ನು ಕಾಪಾಡುವ ಟಿಟಿಡಿಯ ಬದ್ಧತೆಗೆ ಅನುಗುಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಟಿಟಿಡಿ ಅಧಿಕಾರಿಗಳ ಪ್ರಕಾರ, ಈ ನೌಕರರು ನೇಮಕಗೊಳ್ಳುವ ಮೊದಲು ದತ್ತಿ ಕಾಯ್ದೆ 1060, 1989 ರ ಪ್ರಕಾರ ಹಿಂದೂ ಧಾರ್ಮಿಕ ಆಚರಣೆಗಳನ್ನು ಅನುಸರಿಸುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದಾಗ್ಯೂ, ಅವರು ಹಿಂದೂಯೇತರ ಆಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಇದು ದೇವಾಲಯದ ಪಾವಿತ್ರ್ಯ ಮತ್ತು ಭಕ್ತರ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ.
18 ನೌಕರರು ಟಿಟಿಡಿ ಆಯೋಜಿಸುವ ಧಾರ್ಮಿಕ ಉತ್ಸವಗಳು ಮತ್ತು ಮೆರವಣಿಗೆಗಳು ಸೇರಿದಂತೆ ಹಿಂದೂ ಮತ್ತು ಹಿಂದೂಯೇತರ ಚಟುವಟಿಕೆಗಳಲ್ಲಿ ಏಕಕಾಲದಲ್ಲಿ ಭಾಗವಹಿಸುತ್ತಿರುವುದು ಕಂಡುಬಂದಿದೆ. ಹೀಗಾಗಿ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲಾ ರಾವ್ ಅವರು, ಹಿಂದೂಯೇತರ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ಮೆಮೊ ಹೊರಡಿಸಿದ್ದಾರೆ.
ಟಿಟಿಡಿ ಮಂಡಳಿಯ ನಿರ್ಣಯದ ಪ್ರಕಾರ, ಈ ನೌಕರರನ್ನು ಟಿಟಿಡಿ ದೇವಾಲಯಗಳು ಮತ್ತು ಅಂಗಸಂಸ್ಥೆಯ ಇಲಾಖೆಗಳಲ್ಲಿನ ಅವರ ಪ್ರಸ್ತುತ ಕರ್ತವ್ಯಗಳಿಂದ ತೆಗೆದುಹಾಕಲಾಗುತ್ತದೆ ಮತ್ತು ಅವರು ಯಾವುದೇ ಹಿಂದೂ ಧಾರ್ಮಿಕ ಕಾರ್ಯಕ್ರಮಗಳು ಅಥವಾ ಕರ್ತವ್ಯಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ.
ಟಿಟಿಡಿ ಈ ನೌಕರರಿಗೆ ಇನ್ನು ಮುಂದೆ ಟಿಟಿಡಿ ದೇವಾಲಯಗಳೊಳಗಿನ ಹಿಂದೂ ಆಚರಣೆಗಳು, ಹಬ್ಬಗಳು ಅಥವಾ ಮೆರವಣಿಗೆಗಳಿಗೆ ಸಂಬಂಧಿಸಿದ ಕರ್ತವ್ಯಗಳನ್ನು ನಿಯೋಜಿಸಲಾಗುವುದಿಲ್ಲ ಎಂದು ಘೋಷಿಸಿದೆ.
Advertisement