
ಜೈಪುರ: ರಾಜಸ್ಥಾನ ಬಿಜೆಪಿಯಲ್ಲಿ ಭಿನ್ನಮತ ತಲೆದೋರಿದೆ. ಸಚಿವ ಡಾ.ಕಿರೋಡಿ ಲಾಲ್ ಮೀನಾ ತಮ್ಮದೇ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರದ ವಿರುದ್ಧ ಕಿಶೋರಿ ಲಾಲ್ ಮೀನಾ ಗಂಭೀರ ಆರೋಪ ಮಾಡಿದ್ದಾರೆ.
ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಾ. ಮೀನಾ, "ನಾನು ಎಸ್ಐ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದೆ ಆದರೆ ಸರ್ಕಾರ ನನ್ನನ್ನು ನಿರ್ಲಕ್ಷಿಸಿದೆ. ಬದಲಾಗಿ, ಹಿಂದಿನ ಆಡಳಿತದಂತೆಯೇ ನನ್ನನ್ನು ನಡೆಸಿಕೊಳ್ಳಲಾಗುತ್ತಿದೆ ಎಂದು ಡಾ.ಮೀನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ತಮ್ಮದೇ ಸರ್ಕಾರದ ವಿರುದ್ಧ ಫೋನ್ ಕದ್ದಾಲಿಕೆ ಆರೋಪ ಮಾಡಿರುವ ಡಾ.ಕಿರೋಡಿ ಲಾಲ್ ಮೀನಾ, ಹೈ ಪ್ರೊಫೈಲ್ ಎಸ್ಐ (ಸಬ್-ಇನ್ಸ್ಪೆಕ್ಟರ್) ಪರೀಕ್ಷೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದಾಗಿನಿಂದ ತಮ್ಮ ಮೇಲೆ ನಿಗಾ ಇಡಲಾಗಿದೆ ಎಂದು ಹೇಳಿದ್ದಾರೆ.
ಸಿಐಡಿ ಪ್ರತಿ ಹಂತದಲ್ಲೂ ನನ್ನನ್ನು ಹಿಂಬಾಲಿಸುತ್ತಿದೆ ಮತ್ತು ನನ್ನ ಫೋನ್ ಸಂಭಾಷಣೆಗಳನ್ನು ರೆಕಾರ್ಡ್ ಮಾಡಲಾಗುತ್ತಿದೆ. ಆದರೆ ಇದು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ಡಾ.ಕಿರೋಡಿ ಲಾಲ್ ಮೀನಾ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ, ಡಾ. ಮೀನಾ ರಾಜಸ್ಥಾನ ವಿಧಾನಸಭೆಯಲ್ಲಿ "ಇದು ವಂಚನೆಯ ಯುಗ. ನಾವು ಯಾವಾಗಲೂ ಒಪ್ಪಿದರೆ, ಸಂಬಂಧಗಳು ಹಾಗೆಯೇ ಇರುತ್ತವೆ. ಆದರೆ 'ಹೌದಪ್ಪಗಳ' ಜಗತ್ತಿನಲ್ಲಿ ಯಾರಾದರೂ 'ಇಲ್ಲ' ಎಂದು ಹೇಳಲು ಧೈರ್ಯ ಮಾಡಿದರೆ, ಅವರು ನಾಶವಾಗುತ್ತಾರೆ. ನಾನು ಕುರುಡಾಗಿ ಒಪ್ಪುವುದನ್ನು ನಂಬುವುದಿಲ್ಲ; ನಾನು ಸತ್ಯವನ್ನು ಮಾತನಾಡುತ್ತೇನೆ, ಅದು ನನಗೆ ನೋವುಂಟುಮಾಡಿದರೂ ಸಹ." ಎಂದು ಮಾರ್ಮಿಕವಾಗಿ ಹೇಳಿದ್ದರು.
ಭಜನ್ ಲಾಲ್ ಸರ್ಕಾರ ರಚನೆಯಾದಾಗಿನಿಂದ ಡಾ.ಕಿರೋಡಿ ಲಾಲ್ ಮೀನಾ ಅವರ ಅತೃಪ್ತಿ ವ್ಯಕ್ತವಾಗಿದೆ. ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳ ಬಗ್ಗೆ ಅವರು ಪದೇ ಪದೇ ಆರೋಪಿಸಿದ್ದಾರೆ. ಒಂದು ಹಂತದಲ್ಲಿ, ಅವರು ಸಂಪುಟಕ್ಕೆ ರಾಜೀನಾಮೆ ನೀಡುವ ಸುಳಿವು ನೀಡಿದ್ದರು. ವೈದ್ಯಕೀಯ ಇಲಾಖೆಯಂತಹ ನಿರ್ಣಾಯಕ ಖಾತೆಯನ್ನು ನೀಡದ ಕಾರಣ ಅವರ ನಿರಾಶೆ ಅವರ ಹೆಚ್ಚುತ್ತಿರುವ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.
ಬಿಜೆಪಿ ಡಾ.ಕಿರೋಡಿ ಲಾಲ್ ಮೀನಾ ಅವರ ಸಹೋದರನನ್ನು ಲೋಕಸಭಾ ಚುನಾವಣೆಗೆ ಕಣಕ್ಕಿಳಿಸುವ ಮೂಲಕ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿತ್ತು, ಆದರೆ ಮೀನಾ ತಮ್ಮ ಭದ್ರಕೋಟೆಯಲ್ಲಿ ಗೆಲುವು ಸಾಧಿಸುವಲ್ಲಿ ವಿಫಲರಾದರು, ಇದು ಬಿರುಕನ್ನು ಇನ್ನಷ್ಟು ಹೆಚ್ಚಿಸಿತು.
ಡಾ. ಮೀನಾ ಅವರ ಆರೋಪಗಳ ನಂತರ, ರಾಜಸ್ಥಾನ ವಿಧಾನಸಭೆಯಲ್ಲಿ ಪ್ರಮುಖ ರಾಜಕೀಯ ಹಣಾಹಣಿ ನಿರೀಕ್ಷಿಸಲಾಗಿದೆ. ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷ ಫೋನ್ ಟ್ಯಾಪಿಂಗ್ ವಿಷಯವನ್ನು ಸದನದಲ್ಲಿ ಎತ್ತಲು ಸಿದ್ಧತೆ ನಡೆಸುತ್ತಿದೆ. ಶೂನ್ಯ ವೇಳೆಯಿಂದ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯವರೆಗೆ, ವಿರೋಧ ಪಕ್ಷದ ಶಾಸಕರು ಸದನದಲ್ಲಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಲು ಯೋಜಿಸಿದ್ದಾರೆ.
Advertisement