'ಜೇನುಗೂಡಿಗೆ ಕಲ್ಲೆಸೆಯಬೇಡಿ. ಡಿಎಂಕೆ ಮತ್ತು ನಾನು ಇಲ್ಲಿರುವವರೆಗೆ ನೀವು ಇಲ್ಲಿಗೆ ಬರಲು ಸಾಧ್ಯವಿಲ್ಲ': NEP 2020 ಕುರಿತು ಕೇಂದ್ರ v/s ತಮಿಳು ನಾಡು ಮಧ್ಯೆ ಸಮರ

Dharmendra Pradhan and M K Stalin
ಧರ್ಮೇಂದ್ರ ಪ್ರಧಾನ್ ಮತ್ತು ಎಂ ಕೆ ಸ್ಟಾಲಿನ್
Updated on

ನವದೆಹಲಿ/ಕಡಲೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ತಮಿಳು ನಾಡಿನ ಆಡಳಿತಾರೂಢ ಡಿಎಂಕೆ ನಡುವಿನ ಭಾಷಾ ಸಮರ ತೀವ್ರಗೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜ್ಯ ಸರ್ಕಾರವು ಪ್ರಗತಿಶೀಲ ಸುಧಾರಣೆಗಳನ್ನು ರಾಜಕೀಯಕ್ಕೆ ಬೆದರಿಕೆಯಾಗಿ ನೋಡುತ್ತಿದೆ ಎಂದು ಆರೋಪಿಸಿದರೆ, ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಅದು ವಿದ್ಯಾರ್ಥಿಗಳ ಶಿಕ್ಷಣಕ್ಕಲ್ಲ ಬದಲಿಗೆ ದೇಶದಲ್ಲಿ ಹಿಂದಿ ಭಾಷೆಯನ್ನು ಹೇರಿಕೆ ಮಾಡುವುದಕ್ಕಾಗಿದೆ ಎಂದು ಟೀಕಿಸಿದ್ದಾರೆ.

ಕೇಂದ್ರ ಸರ್ಕಾರವು ತಮಿಳು ಜನರನ್ನು ಪ್ರಚೋದಿಸಬಾರದು ಎಂದು ನಾನು ಒತ್ತಾಯಿಸುತ್ತೇನೆ. ಜೇನುಗೂಡಿನ ಮೇಲೆ ಕಲ್ಲು ಎಸೆಯಬೇಡಿ. ಡಿಎಂಕೆ ಮತ್ತು ನಾನು ಇಲ್ಲಿರುವವರೆಗೆ ನೀವು ಇಲ್ಲಿಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎ ಕೆ ಸ್ಟಾಲಿನ್ ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರವು ತಡೆಹಿಡಿದಿರುವ ಹಣವನ್ನು ಬಿಡುಗಡೆ ಮಾಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸ್ಟಾಲಿನ್ ಪತ್ರಕ್ಕೆ ಉತ್ತರಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಎನ್‌ಇಪಿ 2020 ಮತ್ತು ಅದಕ್ಕೆ ಸಂಬಂಧಿಸಿದ ಯೋಜನೆಗಳಿಗೆ ತಮಿಳು ನಾಡು ಸರ್ಕಾರದ ವಿರೋಧಕ್ಕಾಗಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಡಿಎಂಕೆ ಸರ್ಕಾರ ಸಂಕುಚಿತ ಮನೋಭಾವ ಹೊಂದಿದೆ ಎಂದು ಆರೋಪಿಸಿದ್ದರು.

Dharmendra Pradhan and M K Stalin
NEP 2020: 'ಸಂಕುಚಿತ ಮನೋಭಾವ ಬಿಟ್ಟು ದೂರದೃಷ್ಟಿಯಿಂದ ನೋಡಿ'; ತಮಿಳುನಾಡು ಸರ್ಕಾರಕ್ಕೆ ಧರ್ಮೇಂದ್ರ ಪ್ರಧಾನ್ ಒತ್ತಾಯ

ಯಾವುದೇ ರಾಜ್ಯ ಅಥವಾ ಸಮುದಾಯದ ಮೇಲೆ ಯಾವುದೇ ಭಾಷೆಯನ್ನು ಹೇರುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನ್ ಸ್ಟಾಲಿನ್‌ಗೆ ಬರೆದ ಮೂರು ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ. ಇದಕ್ಕೆ ನಿನ್ನೆ ಸಂಜೆ ಕಡಲೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಸ್ಟಾಲಿನ್, ಎನ್‌ಇಪಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸುವುದನ್ನು ರಾಜಕೀಯ ಎಂದು ಪ್ರಧಾನ್ ಕರೆದಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡರು.

ನಾವು ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಯೋಜನೆಗಳನ್ನು ಜಾರಿಗೆ ತರದ ಕಾರಣ ತಮಿಳುನಾಡು ಸರ್ಕಾರ 5,000 ಕೋಟಿ ರೂಪಾಯಿಗಳನ್ನು ಪಡೆದಿಲ್ಲ ಎಂದು ಕೇಂದ್ರ ಸಚಿವರು ಹೇಳಿಕೊಳ್ಳುತ್ತಾರೆ. ತಮಿಳುನಾಡಿನಿಂದ ಸಂಗ್ರಹಿಸಿದ ತೆರಿಗೆಯನ್ನು ಪಾವತಿಸಲು ನಾವು ನಿರಾಕರಿಸಿದರೆ ಅವರು ಏನು ಮಾಡುತ್ತಾರೆ? ಒಕ್ಕೂಟ ವ್ಯವಸ್ಥೆಯು ಪರಸ್ಪರ ಸಹಕಾರವನ್ನು ಆಧರಿಸಿದೆ, ಅದು ನಮ್ಮ ಸಂವಿಧಾನದ ಅಡಿಪಾಯವಾಗಿದೆ. ದುರದೃಷ್ಟವಶಾತ್, ಈ ತತ್ವವನ್ನು ಅರ್ಥಮಾಡಿಕೊಳ್ಳದವರು ಇಂದು ದೇಶವನ್ನು ಆಳುತ್ತಿದ್ದಾರೆ ಎಂದರು.

ಎನ್‌ಇಪಿಯನ್ನು ಜಾರಿಗೆ ತಂದಿರುವುದು ಶಿಕ್ಷಣವನ್ನು ಅಭಿವೃದ್ಧಿಪಡಿಸಲು ಅಲ್ಲ ಬದಲಿಗೆ ಹಿಂದಿ ಭಾಷೆಯನ್ನು ಉತ್ತೇಜಿಸಲು ಪರಿಚಯಿಸಲಾಗಿದೆ ಎಂದು ಸ್ಟಾಲಿನ್ ಪುನರುಚ್ಚರಿಸಿದರು.

"ಜನರು ನೇರ ಅನುಷ್ಠಾನವನ್ನು ವಿರೋಧಿಸುವಂತೆಯೇ, ಅವರು ಅದನ್ನು ಕ್ರಮೇಣ ಪರಿಚಯಿಸಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸಚಿವರು ಪ್ರಾದೇಶಿಕ ಭಾಷೆಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ, ಆದರೆ ತಮಿಳನ್ನು ಹೇಗೆ ಅಭಿವೃದ್ಧಿಪಡಿಸಬೇಕೆಂದು ನಮಗೆ ತಿಳಿದಿದೆ. ಹಿಂದಿ ಹೇರಿಕೆಯಿಂದಾಗಿ ತಮ್ಮ ಮಾತೃಭಾಷೆಯನ್ನು ಕಳೆದುಕೊಂಡವರನ್ನು ಕೇಳಿ. ತಮಿಳು ಭಾಷೆಯ ಬೆಳವಣಿಗೆಗೆ ಕೇಂದ್ರ ಸರ್ಕಾರದ ಬೆಂಬಲ ಅಗತ್ಯವಿಲ್ಲ ಎಂದು ಸ್ಚಾಲಿನ್ ತಿರುಗೇಟು ನೀಡಿದರು.

ತಮಿಳುನಾಡಿನಿಂದ ಹಣವನ್ನು ತಡೆಹಿಡಿದಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಸಿಎಂ ಟೀಕಿಸಿದರು. ಜಿಎಸ್‌ಟಿ ಮೂಲಕ, ರಾಜ್ಯದ ಎಲ್ಲಾ ಆದಾಯವನ್ನು ತೆಗೆದುಕೊಳ್ಳುತ್ತಾರೆ, ಆದರೆ ಸರಿಯಾದ ಪಾಲನ್ನು ಹಿಂದಿರುಗಿಸಲು ನಿರಾಕರಿಸುತ್ತಾರೆ. ಅವರು ರಾಜ್ಯಕ್ಕೆ ಯಾವುದೇ ಹೊಸ ಯೋಜನೆಗಳನ್ನು ಘೋಷಿಸುತ್ತಿಲ್ಲ. ಜಂಟಿ ಯೋಜನೆಗಳಿಗೆ ಹಣವನ್ನು ನಿರಾಕರಿಸುತ್ತಿದ್ದಾರೆ. ಈ ಅಡೆತಡೆಗಳ ಹೊರತಾಗಿಯೂ, ನಾವು ಬೆಳೆಯುವಲ್ಲಿ ಯಶಸ್ವಿಯಾಗಿದ್ದೇವೆ, ಇದು ಅವರನ್ನು ಕೆರಳಿಸಿದೆ. ಈಗ, ಅವರು ಹೊಸ ಕಾನೂನುಗಳನ್ನು ರಚಿಸುವ ಮೂಲಕ ನಮ್ಮ ಪ್ರಗತಿಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅನನುಕೂಲಕರ ಸಮುದಾಯಗಳ ಶೈಕ್ಷಣಿಕ ಪ್ರಗತಿಯನ್ನು ತಡೆಯಲು ಎನ್‌ಇಪಿಯನ್ನು ವಿನ್ಯಾಸಗೊಳಿಸಲಾಗಿದೆ, ಎನ್‌ಇಪಿ ಹೆಸರಿನಲ್ಲಿ, ನೂರು ವರ್ಷಗಳ ಹಿಂದೆ ಜನರು ಹೇಗೆ ದಮನಕ್ಕೊಳಗಾಗಿದ್ದರು ಎಂಬುದರಂತೆಯೇ, ನಮ್ಮ ಮಕ್ಕಳು ಅಧ್ಯಯನ ಮಾಡುವುದನ್ನು, ಶಾಲೆಗಳಿಗೆ ಪ್ರವೇಶಿಸುವುದನ್ನು ಮತ್ತು ಉದ್ಯೋಗಗಳನ್ನು ಪಡೆಯುವುದನ್ನು ತಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಸಾಮಾಜಿಕ ನ್ಯಾಯವನ್ನು ನಾಶಮಾಡಲು ಎನ್‌ಇಪಿಯನ್ನು ಪರಿಚಯಿಸಲಾಗಿದೆ. ಇದು ಬಿಸಿ, ಎಂಬಿಸಿ ಮತ್ತು ಎಸ್ ಸಿ ಸಮುದಾಯಗಳ ಪ್ರಗತಿಗೆ ಅಡ್ಡಿಯಾಗುತ್ತದೆ ಎಂದರು.

ಎನ್ ಇಪಿಯನ್ನು ತಿರಸ್ಕರಿಸಲು 12 ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದ ತಮಿಳುನಾಡು ಶಿಕ್ಷಣ ಸಚಿವ ಪೊಯ್ಯಮೋಳಿ, ರಾಜ್ಯವು ಭಾಷಾ ಗುರುತು ಮತ್ತು ಫೆಡರಲ್ ಸ್ವಾಯತ್ತತೆಗೆ ಬದ್ಧವಾಗಿದೆ ಎಂದು ಹೇಳಿದ್ದಾರೆ. ನಮ್ಮ ದ್ವಿಭಾಷಾ ನೀತಿಯು ಹೆಚ್ಚಿನ ಸಾಕ್ಷರತೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಖಚಿತಪಡಿಸಿದೆ. ಮೂರನೇ ಭಾಷೆಹಿಂದಿಯನ್ನು ಹೇರುವ ಪರೋಕ್ಷ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.ಎಂದು ಹೇಳಿದ್ದಾರೆ.

ರಾಜಕೀಯ ಕಾರಣಗಳಿಗಾಗಿ ಎನ್ ಇಪಿಗೆ ನಿರಂತರ ವಿರೋಧವು ತಮಿಳುನಾಡಿನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಈ ನೀತಿ ನೀಡುವ ಅಪಾರ ಅವಕಾಶಗಳು ಮತ್ತು ಸಂಪನ್ಮೂಲಗಳನ್ನು ಕಸಿದುಕೊಳ್ಳುತ್ತದೆ. ಈ ನೀತಿಯು ನಮ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ, ರಾಜ್ಯಗಳು ತಮ್ಮ ವಿಶಿಷ್ಟ ಶೈಕ್ಷಣಿಕ ಅಗತ್ಯಗಳಿಗೆ ಅನುಗುಣವಾಗಿ ಅದರ ಅನುಷ್ಠಾನ ಮಾಡಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಸಮಗ್ರ ಶಿಕ್ಷಣದಂತಹ ಕೇಂದ್ರ-ಬೆಂಬಲಿತ ಕಾರ್ಯಕ್ರಮಗಳು NEP 2020 ನೊಂದಿಗೆ ಹೊಂದಿಕೊಂಡಿವೆ. ಅಲ್ಲದೆ, ಪಿಎಂ ಶ್ರೀ ಶಾಲೆಗಳನ್ನು ಎನ್ ಇಪಿ ಮಾದರಿ ಶಾಲೆಗಳೆಂದು ಪರಿಕಲ್ಪನೆ ಮಾಡಲಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಪತ್ರದಲ್ಲಿ ವಿವರಿಸಿದ್ದರು.

ಎನ್ ಇಪಿ 2020 ಭಾಷಾ ಸ್ವಾತಂತ್ರ್ಯದ ತತ್ವವನ್ನು ಎತ್ತಿಹಿಡಿಯುತ್ತದೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಭಾಷೆಯಲ್ಲಿ ಕಲಿಯುವುದನ್ನು ಮುಂದುವರಿಸುವುದನ್ನು ಖಚಿತಪಡಿಸುತ್ತದೆ. ವಾಸ್ತವವಾಗಿ, ದಶಕಗಳಿಂದ ಔಪಚಾರಿಕ ಶಿಕ್ಷಣದಲ್ಲಿ ಕ್ರಮೇಣ ಬದಿಗಿಡಲ್ಪಟ್ಟ ತಮಿಳು ಸೇರಿದಂತೆ ಭಾರತೀಯ ಭಾಷೆಗಳ ಬೋಧನೆಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಬಲಪಡಿಸುವುದು ನೀತಿಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದಿದ್ದಾರೆ.

ರಾಜಕೀಯ ವ್ಯತ್ಯಾಸಗಳ ಹೊರತಾಗಿಯೂ ಅನೇಕ ಬಿಜೆಪಿಯೇತರ ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಗತಿಪರ ನೀತಿಗಳನ್ನು ಜಾರಿಗೆ ತಂದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com