ವರ್ಷ ಹೊಸದು, ಸಮಸ್ಯೆ ಹಳೆಯವು: 2025ರಲ್ಲಿ ಬಿಜೆಪಿ ಮುಂದಿವೆ ನಿರ್ಣಾಯಕ ಸವಾಲುಗಳು!

ಹದಗೆಟ್ಟ ಸಂಬಂಧಗಳ ಇತಿಹಾಸದ ಹೊರತಾಗಿಯೂ 2024ರಲ್ಲಿ ಬಿಜೆಪಿಯು ಟಿಡಿಪಿಯೊಂದಿಗೆ ಕೈಜೋಡಿಸಿತು. ಮೈತ್ರಿಯಿಂದ ಹೊರನಡೆದಿದ್ದ ನಿತೀಶ್ ಅವರ ಜೆಡಿಯು ಜೊತೆಯಲ್ಲೇ ಮತ್ತೆ ಮೈತ್ರಿ ಮಾಡಿಕೊಂಡಿತು.
ರಾಜನಾಥ್ ಸಿಂಗ್, ನರೇಂದ್ರ ಮೋದಿ, ಜೆಪಿ ನಡ್ಡಾ ಮತ್ತು ಅಮಿತ್ ಶಾ
ರಾಜನಾಥ್ ಸಿಂಗ್, ನರೇಂದ್ರ ಮೋದಿ, ಜೆಪಿ ನಡ್ಡಾ ಮತ್ತು ಅಮಿತ್ ಶಾ
Updated on

ನವದೆಹಲಿ: 2025ನೇ ವರ್ಷ ಪ್ರಾರಂಭವಾಗಿರುವ ಈ ಹೊತ್ತಿನಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಮುಂದಿನ ಚುನಾವಣಾ ಪಯಣದಲ್ಲಿ ಸಾಧನೆಗಳನ್ನು ನಂಬಿ ಹೋಗುವುದಕ್ಕಿಂತ ಹೆಚ್ಚಿನ ಸವಾಲುಗಳನ್ನೇ ಎದುರಿಸಬೇಕಿರುವ ಪರಿಸ್ಥಿತಿಯಿದೆ. 'ಒಂದು ರಾಷ್ಟ್ರ ಒಂದು ಚುನಾವಣೆ', ಏಕರೂಪ ನಾಗರಿಕ ಸಂಹಿತೆ ಮತ್ತು ವಿವಾದಾತ್ಮಕ ವಕ್ಫ್ ಮಸೂದೆಗಳಂತಹ ಹಲವಾರು ವಿವಾದಾತ್ಮಕ ವಿಷಯಗಳು ಇದೀಗ ರಾಜಕೀಯ ಒಮ್ಮತಕ್ಕಾಗಿ ಕಾಯುತ್ತಿವೆ.

ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿ ನಾಯಕ ಅಮಿತ್ ಶಾ ಅವರ ಇತ್ತೀಚಿನ ಹೇಳಿಕೆಗಳನ್ನು ಪ್ರತಿಪಕ್ಷಗಳು ತಮ್ಮ ಕಾರ್ಯತಂತ್ರದ ಭಾಗವನ್ನಾಗಿ ಮಾಡಿಕೊಂಡಿದ್ದು, ಬಿಜೆಪಿ ಮುಂದೆ ಇದು ಕೂಡ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಬಿಜೆಪಿ ಮುಂದಿರುವ ಸದ್ಯದ ಸವಾಲೆಂದರೆ ಫೆಬ್ರುವರಿಯಲ್ಲಿ ನಡೆಯಲಿರುವ ಸಾಂಸ್ಥಿಕ ಚುನಾವಣೆಯ ಮೂಲಕ ಜಾತಿ, ಧರ್ಮ ಮತ್ತು ಪ್ರಾದೇಶಿಕ ಪರಿಗಣನೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವುದಾಗಿದೆ. ಇದರೊಂದಿಗೆ ಈ ವರ್ಷ ನಡೆಯಲಿರುವ ಬಿಹಾರ ಮತ್ತು ದೆಹಲಿಯಲ್ಲಿ ಪಕ್ಷದ ನೆಲೆಯನ್ನು ಭದ್ರಪಡಿಸಿಕೊಳ್ಳಬೇಕಿದೆ.

ಸಹಜವಾಗಿ, 2025ರ ಆರಂಭದಲ್ಲಿ ದೆಹಲಿ ವಿಧಾನಸಭೆ ಚುನಾವಣೆ, ನಂತರ ಬಿಹಾರ ಚುನಾವಣೆ ನಡೆಯಲಿದೆ. ಸದ್ಯ ದೆಹಲಿಯಲ್ಲಿ ಅಧಿಕಾರಕ್ಕೇರುವುದು ಅಷ್ಟು ಸಲೀಸಾಗಿಲ್ಲ. ಈಗಾಗಲೇ ಕಳೆದೆರಡು ಬಾರಿ ಗದ್ದುಗೆ ಏರಿರುವ ಎಎಪಿ ಸೇರಿದಂತೆ ಇತರೆ ವಿಪಕ್ಷಗಳನ್ನು ಎದುರಿಸಬೇಕಿದೆ. ಇನ್ನೂ ಸಂಕೀರ್ಣ ಜಾತಿ ಸಮೀಕರಣಗಳು ಮತ್ತು ವಿರೋಧ ಪಕ್ಷಗಳ ಮೈತ್ರಿಯನ್ನು ಬಿಹಾರದಲ್ಲಿ ಸೂಕ್ಷ್ಮವಾಗಿ ನಿಭಾಯಿಸುವ ಅಗತ್ಯವಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಮಹತ್ವಾಕಾಂಕ್ಷೆಯ 'ಅಬ್‌ಕಿ ಬಾರ್ 400 ಪಾರ್' ಘೋಷಮೆಯ ಗುರಿಯನ್ನು ತಲುಪಲು ವಿಫಲವಾಯಿತು. ಈ ಮೂಲಕ ಬಿಜೆಪಿಯು ಗೆಲುವು ಸಾಧಿಸಿದರೂ, ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ಹೀಗಿರುವಾಗ, 2025ರಲ್ಲಿ, ಪಕ್ಷವು ತನ್ನ ಹಿಡಿತ ದುರ್ಬಲವಾಗಿರುವ ರಾಜ್ಯಗಳಲ್ಲಿನ ದೌರ್ಬಲ್ಯಗಳನ್ನು ತಗ್ಗಿಸಲು ಗಮನಹರಿಸುತ್ತದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು ನೆರವಾಗುವ ಸರಣಿ ಕಾರ್ಯಕ್ರಮಗಳನ್ನು ಯೋಜಿಸಿದೆ ಎನ್ನಲಾಗಿದೆ.

ರಾಜನಾಥ್ ಸಿಂಗ್, ನರೇಂದ್ರ ಮೋದಿ, ಜೆಪಿ ನಡ್ಡಾ ಮತ್ತು ಅಮಿತ್ ಶಾ
ಹಿನ್ನೋಟ 2024: ಗ್ಯಾರಂಟಿ ಯೋಜನೆ, ಜಿಡಿಪಿ ಬೆಳವಣಿಗೆ, ಸೂಕ್ತ ಮಳೆಯಿಂದ ಅಭಿವೃದ್ಧಿಯಲ್ಲಿ ಮುನ್ನಡೆ: ಉತ್ತಮ ಮೂಲಭೂತ ಸೌಕರ್ಯದ್ದೇ ಸವಾಲು!

2024ರಲ್ಲಿ ರಾಜಕೀಯ ಹಿನ್ನಡೆಗಳ ಹೊರತಾಗಿಯೂ, ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಇನ್ನೂ ತಾನು ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಂಡಿರುವುದಾಗಿ ತೋರಿಸಿದೆ. ಇದೇ ವೇಳೆ, ವಿವಾದಾತ್ಮಕ ವಿಚಾರಗಳೇ ರಾಜಕೀಯ ಚರ್ಚೆಯಲ್ಲಿ ಪ್ರಾಬಲ್ಯ ಹೊಂದಿದ್ದು, ಎನ್‌ಡಿಎಯಲ್ಲಿ ಒಗ್ಗಟ್ಟು ಕಾಪಾಡಿಕೊಳ್ಳುವುದು ಮತ್ತು ಮಿತ್ರಪಕ್ಷಗಳ ನಡುವಿನ ಅಸಮಾಧಾನವನ್ನು ತಣಿಸುವುದು ಪಕ್ಷಕ್ಕೆ ತೀವ್ರ ನಿರ್ಣಾಯಕವಾಗಿದೆ.

ಪಕ್ಷದ ಹಿರಿಯ ಕಾರ್ಯನಿರ್ವಾಹಕರೊಬ್ಬರು ಮಾತನಾಡಿ, 'ನಮಗೆ 2025 ರಲ್ಲಿ ನಮ್ಮ ಪಕ್ಷದ ಮುಂದೆ ಮೈತ್ರಿಯನ್ನು ಒಗ್ಗೂಡಿಸುವುದು, ಆಂತರಿಕ ಸವಾಲುಗಳನ್ನು ಎದುರಿಸುವುದು ಮತ್ತು ಮತದಾರರೊಂದಿಗೆ ಸಂಪರ್ಕ ಸಾಧಿಸುವುದು ನಮ್ಮ ಆದ್ಯತೆಯ ವಿಚಾರಗಳಾಗಿವೆ. ಈ ಗುರಿಗಳನ್ನು ಸಾಧಿಸಲು ಬಿಜೆಪಿ ಯಾವಾಗಲೂ ಸಂಘಟಿತ ರೀತಿಯಲ್ಲಿ ಕೆಲಸ ಮಾಡಲು ಶ್ರಮಿಸುತ್ತದೆ' ಎಂದಿದ್ದಾರೆ.

ಮೈತ್ರಿ ವಿಚಾರದಲ್ಲಿ ಬಿಜೆಪಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಹದಗೆಟ್ಟ ಸಂಬಂಧಗಳ ಇತಿಹಾಸದ ಹೊರತಾಗಿಯೂ 2024ರಲ್ಲಿ ಬಿಜೆಪಿಯು ಟಿಡಿಪಿಯೊಂದಿಗೆ ಕೈಜೋಡಿಸಿತು. ಮೈತ್ರಿಯಿಂದ ಹೊರನಡೆದಿದ್ದ ನಿತೀಶ್ ಅವರ ಜೆಡಿಯು ಜೊತೆಯಲ್ಲೇ ಮತ್ತೆ ಮೈತ್ರಿ ಮಾಡಿಕೊಂಡಿತು. ಪಕ್ಷವು ರಾಜ್ಯಗಳಲ್ಲಿ ತಮ್ಮ ಚುನಾವಣಾ ನೆಲೆಗಳನ್ನು ಬಲಪಡಿಸಲು ಪ್ರಯತ್ನಿಸುವಾಗ, ಪ್ರಾದೇಶಿಕ ಪಕ್ಷಗಳ ನಿಲುವುಗಳೊಂದಿಗೂ ಹೊಂದಿಕೊಳ್ಳುವ ಅನಿವಾರ್ಯತೆ ಪಕ್ಷಕ್ಕೆ ಎದುರಾಗಬಹುದು. ಬಿಹಾರದ ಜಾತಿ ಗಣತಿ ಮತ್ತು 'One Nation, One Election' ಪ್ರಸ್ತಾಪಕ್ಕೆ ಟಿಡಿಪಿಯಲ್ಲೇ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಇದು ಬಿಜೆಪಿಗೆ ದೊಡ್ಡ ಸವಾಲಾಗಿ ಪರಿಣಮಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com