
ಪಾಟ್ನಾ: ಮತ್ತೆ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್ಗೆ ಸೇರುವಂತೆ ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಪ್ರಸ್ತಾಪಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ನಿಗೂಢ ಪ್ರತಿಕ್ರಿಯೆ ನೀಡಿದ್ದಾರೆ.
ನಿತೀಶ್ ಕುಮಾರ್ಗೆ ಮೈತ್ರಿ ಬಾಗಿಲು ಸದಾ ತೆರೆದಿರುತ್ತದೆ ಎಂಬ ಲಾಲು ಪ್ರಸಾದ್ ಯಾದವ್ ಅವರ ಹೇಳಿಕೆ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೆಡಿಯು ಮುಖ್ಯಸ್ಥ, ನೀವು ಏನು ಹೇಳುತ್ತಿದ್ದೀರಿ? ಎಂದು ಮರು ಪ್ರಶ್ನಿಸಿದರು.
ನಿತೀಶ್ ಕುಮಾರ್ ಕಳೆದ ಒಂದು ದಶಕದಲ್ಲಿ ಇಂಡಿಯಾ ಬ್ಲಾಕ್ನ ಘಟಕವಾದ ಆರ್ಜೆಡಿಯೊಂದಿಗೆ ಎರಡು ಬಾರಿ ಸರ್ಕಾರ ರಚಿಸಿದ್ದಾರೆ.
ಆರಿಫ್ ಮೊಹಮ್ಮದ್ ಖಾನ್ ಅವರು ಇಂದು ಬಿಹಾರದ ಹೊಸ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಿತೀಶ್ ಕುಮಾರ್ ಅವರನ್ನು ಪತ್ರಕರ್ತರು ರಾಜಭವನದಲ್ಲಿ ಪ್ರಶ್ನಿಸಿದರು.
ಖಾನ್ ಮತ್ತು ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸಮ್ಮುಖದಲ್ಲಿ ಲಾಲು ಪ್ರಸಾದ್ ಹೇಳಿಕೆ ಕುರಿತು ಪತ್ರಕರ್ತರು ಕೇಳಿದಾಗ, ನಿತೀಶ್ ಕುಮಾರ್ ಕೈಮುಗಿದು ಮುಗುಳ್ನಕ್ಕರು.
ಪತ್ರಕರ್ತರು ಮತ್ತಷ್ಟು ಒತ್ತಿ ಕೇಳಿದಾಗ "ನೀವು ಏನು ಹೇಳುತ್ತಿದ್ದೀರಿ?" ಎಂದರು.
ರಾಜ್ಯ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸುತ್ತದೆಯೇ ಎಂದು ತೀಕ್ಷ್ಣವಾದ ಪ್ರಶ್ನೆಯನ್ನು ಕೇಳಿದಾಗ, ಖಾನ್ ಮಧ್ಯಪ್ರವೇಶಿಸಿ, "ಇದು ಈ ರೀತಿಯ ಪ್ರಶ್ನೆಗೆ ಉತ್ತರಿಸುವ ಸಂದರ್ಭವಲ್ಲ. ಇಂದು ಸಂತೋಷದ ದಿನ, ನಾವು ಒಳ್ಳೆಯ ವಿಷಯಗಳ ಬಗ್ಗೆ ಮಾತ್ರ ಮಾತನಾಡೋಣ ಎಂದರು.
Advertisement