
ನವದೆಹಲಿ: ಪ್ರಯಾಗ್ ರಾಜ್ ನಲ್ಲಿ ಜ.13 ರಿಂದ ಆರಂಭಗೊಳ್ಳುವ ಕುಂಭಮೇಳಕ್ಕೆ ತಯಾರಿ ನಡೆಯುತ್ತಿರುವ ಸಂದರ್ಭದಲ್ಲೇ ವಕ್ಫ್ ಕುಂಭಮೇಳ ನಡೆಯುತ್ತಿರುವ ಜಾಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.
ಕುಂಭಮೇಳ ನಡೆಯುತ್ತಿರುವ ಸ್ಥಳ ವಕ್ಫ್ ಗೆ ಸೇರಿದ್ದು ಎಂದು ವಕ್ಫ್ ಮಂಡಳಿಯ ಮೌಲಾನ ಹೇಳಿಕೆ ನೀಡಿರುವುದು ಹಿಂದೂಗಳನ್ನು ಕೆರಳಿಸಿದೆ.
ಏತನ್ಮಧ್ಯೆ ಹಿಂದೂಗಳನ್ನು ಪ್ರತಿನಿಧಿಸುವ ಶಂಕರಾಚಾರ್ಯ ಪದವಿಯಲ್ಲಿರುವ ಜ್ಯೋತಿಷ್ ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ವಕ್ಫ್ ನ ಮೌಲಾನ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವುದು ಹಿಂದೂಗಳನ್ನು ಗೊಂದಲಕ್ಕೀಡುಮಾಡಿದೆ.
ವಕ್ಫ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವಿಮುಕ್ತೇಶ್ವರಾನಂದ ಸರಸ್ವತಿ, ಪ್ರತಿ ಮಸೀದಿಯ ಕೆಳಗೆ ದೇವಾಲಯ ಕಂಡುಬರುವುದಾದರೆ, ವಕ್ಫ್ ಭೂಮಿಯಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ ಎಂಬ ಹೇಳಿಕೆಗೆ ಆಕ್ಷೇಪವೇಕೆ? ಎಂದು ಪ್ರಶ್ನಿಸಿದ್ದಾರೆ.
ವಕ್ಫ್ ಭೂಮಿಯಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ ಎಂದು ಯಾರಾದರೂ ಹೇಳಿದರೆ ತಪ್ಪೇನು? ಬೇಕಾದ್ದು ಹೇಳಿಕೊಳ್ಳಲಿ. ಯಾರು ಬೇಕಾದರೂ ಹಕ್ಕು ಚಲಾಯಿಸಬಹುದು. ಆದರೆ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಮತ್ತು ಯಾರ ಬಳಿ ಏನಾದರೂ ಸೂಕ್ತ ದಾಖಲೆಗಳಿದ್ದರೆ ಅದನ್ನು ಅರ್ಹ ವ್ಯಕ್ತಿಗಳು ಪಡೆಯಬಹುದು ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ಇದೇ ವೇಳೆ ವಕ್ಫ್ ಬಗ್ಗೆಯೂ ಮಾತನಾಡಿರುವ ಅವಿಮುಕ್ತೇಶ್ವರಾನಂದ ಸರಸ್ವತಿ, ಸನಾತನ ಧರ್ಮದ ಅನುಯಾಯಿಗಳ ಭಾವನೆಗಳನ್ನು ನೋಯಿಸುವುದೇ ಕೆಲಸವಾಗಿರುವವರು ಮಹಾ ಕುಂಭಮೇಳಕ್ಕೆ ಬರದಿರುವುದು ಉತ್ತಮ ಎಂದು ಹೇಳಿದ್ದಾರೆ.
ಹಕ್ಕು ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಮತ್ತು ಆ ಸ್ಥಳವನ್ನು ಅರ್ಹ ವ್ಯಕ್ತಿಗೆ ನೀಡಬೇಕು. ನಾವು ನ್ಯಾಯದ ಪರವಾಗಿದ್ದೇವೆ, ಜನಾಂದೋಲನದ ಪರವಲ್ಲ ಎಂದು ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.
ಮಹಾ ಕುಂಭಮೇಳಕ್ಕೆ ಮುಸ್ಲಿಮರ ಪ್ರವೇಶವನ್ನು ನಿಷೇಧಿಸಬೇಕೆಂಬ ಕೆಲವು ಜನರ ಬೇಡಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಧಾರ್ಮಿಕ ನಂಬಿಕೆಗಳನ್ನು ಹಾಳುಮಾಡುವವರು ಮಹಾ ಕುಂಭಮೇಳಕ್ಕೆ ಬರುವ ಅಗತ್ಯವಿಲ್ಲ. ಈ ವಿಷಯದ ಬಗ್ಗೆ ಯಾವುದೇ ಸಂತರು ಧ್ವನಿ ಎತ್ತಿದ್ದರೂ, ಅವರು ಸ್ವಲ್ಪ ಯೋಚಿಸಿದ ನಂತರವೇ ಹಾಗೆ ಹೇಳಿರುತ್ತಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಆಹಾರ ಮತ್ತು ಪಾನೀಯಗಳಲ್ಲಿ ಲಾಲಾರಸ ಮತ್ತು ಮೂತ್ರವನ್ನು ಬೆರೆಸುವ ಘಟನೆಗಳನ್ನು ಉಲ್ಲೇಖಿಸಿರುವ ಅವಿಮುಕ್ತೇಶ್ವರಾನಂದ ಸರಸ್ವತಿ, ಇತರ ಧರ್ಮಗಳ ಜನರು ಸನಾತನ ಧರ್ಮದ ಅನುಯಾಯಿಗಳ ಭಾವನೆಗಳನ್ನು ನೋಯಿಸಲು ತಪ್ಪು ಕೆಲಸಗಳನ್ನು ಮಾಡುತ್ತಾರೆ. ಅಂತಹ ಮನಸ್ಥಿತಿ ಇರುವ ಜನರಿದ್ದರೆ, ಅವರು ಬರದಿರುವುದು ಒಳ್ಳೆಯದು. ಮುಸ್ಲಿಂ ಸಮುದಾಯದ ಜನರು ಏನಾದರೂ ತಪ್ಪು ಮಾಡಿದಾಗ, ಯಾವುದೇ ಮೌಲ್ವಿ ಅಥವಾ ಮೌಲಾನಾ ಅದನ್ನು ವಿರೋಧಿಸುವುದಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement