ದುಬೈ ಕಾರು ರೇಸಿಂಗ್ ಸ್ಪರ್ಧೆಯಲ್ಲಿ ನಟ ಅಜಿತ್ ಕುಮಾರ್ 3ನೇ ಸ್ಥಾನ; ನಟರು, ರಾಜಕಾರಣಿಗಳಿಂದ ಅಭಿನಂದನೆ

ಅಪಘಾತವನ್ನೂ ಲೆಕ್ಕಿಸದೆ ಪ್ರಶಸ್ತಿ ಗೆದ್ದ ನಟ
ಕಾರು ರೇಸ್‌ನಲ್ಲಿ 3ನೇ ಸ್ಥಾನ ಪಡೆದ ನಟ ಅಜಿತ್ ಕುಮಾರ್
ಕಾರು ರೇಸ್‌ನಲ್ಲಿ 3ನೇ ಸ್ಥಾನ ಪಡೆದ ನಟ ಅಜಿತ್ ಕುಮಾರ್
Updated on

ಚೆನ್ನೈ: ಜನವರಿ 12ರ ಭಾನುವಾರ ದುಬೈನಲ್ಲಿ ನಡೆದ 'ದುಬೈ 24ಎಚ್ 2025' ಕಾರು ರೇಸಿಂಗ್ ಸ್ಪರ್ಧೆಯ 991 ವಿಭಾಗದಲ್ಲಿ ತಮಿಳು ನಟ ಅಜಿತ್ ಕುಮಾರ್ ಮೂರನೇ ಸ್ಥಾನ ಮತ್ತು ಜಿಟಿ4 ವಿಭಾಗದಲ್ಲಿ 'ಸ್ಪಿರಿಟ್ ಆಫ್ ದಿ ರೇಸ್' ಗಳಿಸಿದ್ದಾರೆ. ಈ ಸಾಧನೆಗೆ ಅಜಿತ್ ಕುಮಾರ್ ಮತ್ತು ಅವರ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ದುಬೈ 24H 2025 ರೇಸಿಂಗ್‌ಗಾಗಿ ಅಭ್ಯಾಸ ನಡೆಸುವ ವೇಳೆ ಸಮಯದಲ್ಲಿ ಜನವರಿ 8ರಂದು ನಟ ಅಜಿತ್ ಕುಮಾರ್‌ ಅವರ ಕಾರು ಅಪಘಾತಕ್ಕೀಡಾಗಿತ್ತು. ಅಭ್ಯಾಸ ನಡೆಸುವಾಗ ರೇಸ್ ಕಾರು ಕಂಟ್ರೋಲ್ ಕಳೆದುಕೊಂಡು ಪಕ್ಕದ ಗೋಡೆಯೊಂದಕ್ಕೆ ಗುದ್ದಿದೆ. ರೇಸ್ ಕಾರು ಗುದ್ದಿದ ರಭಸಕ್ಕೆ ಪಲ್ಟಿ ಹೊಡೆದಿದ್ದು ಪೀಸ್, ಪೀಸ್ ಆಗಿತ್ತು. ಅಪಘಾತದಲ್ಲಿ ಅಜಿತ್ ಅವರಿಗೆ ಯಾವುದೇ ತೊಂದರೆ ಎದುರಾಗಿರಲಿಲ್ಲ.

ದುಬೈ ಆಟೋಡ್ರೋಮ್‌ನಲ್ಲಿ ವಾರ್ಷಿಕವಾಗಿ ನಡೆಯುವ ಈ ರೇಸಿಂಗ್ ಕಾರ್ಯಕ್ರಮ ವೇಗ, ತಂತ್ರ ಮತ್ತು ಸಹಿಷ್ಣುತೆಯನ್ನು ಪರೀಕ್ಷಿಸುವ ಕಠಿಣ ಸ್ಪರ್ಧೆಯಾಗಿದ್ದು, 24 ಗಂಟೆಗಳ ಸ್ವರೂಪದಲ್ಲಿ ನಡೆಯುತ್ತದೆ. ಸ್ಪರ್ಧೆಯಲ್ಲಿ ಉನ್ನತ-ಕಾರ್ಯಕ್ಷಮತೆಯ GT ಮತ್ತು ಪ್ರವಾಸಿ ಕಾರುಗಳನ್ನು ಒಳಗೊಂಡಿರುತ್ತದೆ.

'ದುಬೈ 24H 2025' ರೇಸ್‌ನಲ್ಲಿ ಮೂರನೇ ಸ್ಥಾನ ಗಳಿಸಿದ ನಟ ಅಜಿತ್ ಕುಮಾರ್ ಅವರನ್ನು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅಭಿನಂದಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, '24H ದುಬೈ 2025 ರ 991 ವಿಭಾಗದಲ್ಲಿ ಅಜಿತ್ ಕುಮಾರ್ ಸರ್ ಮತ್ತು ಅವರ ತಂಡವು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಕೇಳಲು ನಾನು ರೋಮಾಂಚನಗೊಂಡಿದ್ದೇನೆ. ಈ ಗಮನಾರ್ಹ ಸಾಧನೆಗಾಗಿ ಅಜಿತ್ ಕುಮಾರ್ ಸರ್ ಮತ್ತು ಅವರ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ' ಎಂದು ತಿಳಿಸಿದ್ದಾರೆ.

ಈ ಗೆಲುವು ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಅಣ್ಣಾಮಲೈ ಬಣ್ಣಿಸಿದ್ದು, 'ದುಬೈ 24H ಕಾರು ರೇಸ್‌ನಲ್ಲಿ ಅಜಿತ್ ಕುಮಾರ್ 991 ವಿಭಾಗದಲ್ಲಿ 3ನೇ ಸ್ಥಾನ ಮತ್ತು GT4 ವಿಭಾಗದಲ್ಲಿ ಸ್ಪಿರಿಟ್ ಆಫ್ ದಿ ರೇಸ್ ಗಳಿಸಿರುವುದು ಭಾರತಕ್ಕೆ ಹೆಮ್ಮೆಯ ಕ್ಷಣ. ಅಜಿತ್ ಕುಮಾರ್ ಅವರು ತಾವು ನಿರ್ವಹಿಸುವ ಪ್ರತಿಯೊಂದು ಪಾತ್ರದಲ್ಲಿಯೂ ವಿಭಿನ್ನತೆಯನ್ನು ಹೊತ್ತು ತರುತ್ತಾರೆ. ಅವರ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಅಸಂಖ್ಯಾತ ಇತರರಿಗೆ ಪ್ರೇರಣೆಯಾಗುತ್ತಾರೆ' ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ನಟ ಕಮಲ್ ಹಾಸನ್ ಕೂಡ ಗೆಲುವನ್ನು 'ಅಸಾಧಾರಣ ಸಾಧನೆ' ಎಂದು ಬಣ್ಣಿಸಿದ್ದು, ತಮ್ಮ ಗಡಿಗಳನ್ನು ಮೀರಿ ಸಾಧನೆ ಮಾಡುತ್ತಿರುವ ನನ್ನ ಸ್ನೇಹಿತ ಅಜಿತ್‌ಗೆ ಅಭಿನಂದನೆಗಳು. ಇದು ಭಾರತೀಯ ಮೋಟಾರ್‌ಸ್ಪೋರ್ಟ್ಸ್‌ಗೆ ಹೆಮ್ಮೆಯ ಕ್ಷಣ' ಎಂದಿದ್ದಾರೆ.

ನಟ ರಜಿನಿಕಾಂತ್ ಕೂಡ ಅಜಿತ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪಳನಿಸ್ವಾಮಿ ಅಭಿನಂದನೆ

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಸೋಮವಾರ ನಟ ಅಜಿತ್ ಕುಮಾರ್ ಅವರನ್ನು ಅಭಿನಂದಿಸಿದ್ದಾರೆ.

ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ, ಅಜಿತ್ ಅವರನ್ನು 'ಪ್ರೀತಿಯ ಸಹೋದರ' ಎಂದು ಕರೆದಿದ್ದು, ದುಬೈ ಕಾರು ರೇಸ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದಕ್ಕಾಗಿ ಅಜಿತ್‌ ಕುಮಾರ್ ಅವರಿಗೆ ಅಭಿನಂದನೆಗಳು. ಅವರು ದೇಶಕ್ಕೆ ಮತ್ತಷ್ಟು ಪ್ರಶಸ್ತಿಗಳನ್ನು ತರಲಿ ಎಂದು ಹಾರೈಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com