
ಮುಂಬೈ: ರಾಜ್ಯ ಅಥವಾ ಸ್ಥಳೀಯ ಚುನಾವಣೆಗಳ ಬಗ್ಗೆ ಇಂಡಿಯಾ ಬಣದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಕೇವಲ ರಾಷ್ಟ್ರಮಟ್ಟದ ಚುನಾವಣೆ ಮೇಲೆ ಮೈತ್ರಿಕೂಟ ಗಮನ ಕೇಂದ್ರೀಕರಿಸಿದೆ ಎಂದು ಎನ್ ಸಿಪಿ (SCP) ಮುಖ್ಯಸ್ಥ ಶರದ್ ಪವಾರ್ ಮಂಗಳವಾರ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶರದ್ ಪವಾರ್, ಮುಂಬರುವ ಮಹಾನಗರ ಪಾಲಿಕೆ ಚುನಾವಣೆಗೆ ಜಂಟಿಯಾಗಿ ಸ್ಪರ್ಧಿಸಬೇಕೋ ಅಥವಾ ಬೇರೆಯಾಗಿ ಕಣಕ್ಕಿಳಿಯಬೇಕೋ ಎಂಬುದನ್ನು ನಿರ್ಧರಿಸಲು ಮುಂದಿನ 8-10 ದಿನಗಳಲ್ಲಿ ಸಭೆ ಸೇರಿ ನಿರ್ಧರಿಸಲಾಗುವುದು ಎಂದರು.
ಮುಂಬರುವ ಮುಂಬೈ ಮತ್ತು ನಾಗ್ಪುರ ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್ ಹೇಳಿಕೆ ನಂತರ ಶರದ್ ಪವಾರ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಏನೇ ಆಗಲಿ ಮುಂಬೈ ಮತ್ತು ನಾಗ್ಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾವು ಸ್ವತಂತ್ರವಾಗಿ ಹೋರಾಡುತ್ತೇವೆ. ನಮ್ಮನ್ನು ನಾವು ನೋಡಬೇಕು, ಸ್ವತಂತ್ರವಾಗಿ ಸ್ಪರ್ಧಿಸಲು ಉದ್ಧವ್ ಠಾಕ್ರೆ ಸೂಚನೆ ನೀಡಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಸ್ಪರ್ಧಿಸಲು ಅವಕಾಶ ಸಿಗಲಿಲ್ಲ ಎಂದು ಸಂಜಯ್ ರಾವತ್ ಹೇಳಿದ್ದರು.
1978 ರಲ್ಲಿ ಆರಂಭಿಸಿದ ದ್ರೋಹ ಮತ್ತು ವಿಶ್ವಾಸಘಾತುಕತನದ ರಾಜಕೀಯವನ್ನು ಬಿಜೆಪಿ ಗೆಲುವು ಚುನಾವಣೆಯಲ್ಲಿ ಅಂತ್ಯಗೊಳಿಸಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಟೀಕೆಗಳ ವಿರುದ್ಧ ಶರದ್ ಪವಾರ್ ತೀವ್ರ ವಾಗ್ದಾಳಿ ನಡೆಸಿದರು.
1978ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಅಮಿತ್ ಶಾ ಎಲ್ಲಿದ್ದರು ಎಂಬುದು ನನಗೆ ಗೊತ್ತಿಲ್ಲ. ಆ ಸಂದರ್ಭದಲ್ಲಿ ಜನಸಂಘದ ಉತ್ತಮರಾವ್ ಪಾಟೀಲ್ ಅವರಂತಹವರು ನನ್ನ ಮಂತ್ರಿಮಂಡಲದಲ್ಲಿ ಇದ್ದರು ತಿಳಿಸಿದರು.
Advertisement