
ಕಂಕೇರ್: ಛತ್ತೀಸಗಢದ ಕಂಕೇರ್ ಜಿಲ್ಲೆಯಲ್ಲಿ ಕರಡಿಯೊಂದು ದಾಳಿ ನಡೆಸಿದ್ದರಿಂದ ಓರ್ವ ವ್ಯಕ್ತಿ ಮತ್ತು ಆತನ ಮಗ ಸಾವಿಗೀಡಾಗಿದ್ದು, ಇಬ್ಬರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಕೋರರ್ ಅರಣ್ಯ ವ್ಯಾಪ್ತಿಯ ಡೊಂಗರಕಟ್ಟಾ ಗ್ರಾಮದ ಬಳಿಯ ಗುಡ್ಡದಲ್ಲಿ ಶನಿವಾರ ಈ ಘಟನೆ ನಡೆದಿದೆ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಕ್ಲಾಲ್ ದಾರೋ (45) ಮತ್ತು ಅಜ್ಜು ಕುರೇಟಿ (22) ಜೈಲ್ನಕಾಸಾ ಬೆಟ್ಟದ ಅರಣ್ಯದಲ್ಲಿ ಸೌದೆಗಳನ್ನು ಸಂಗ್ರಹಿಸಲು ತೆರಳಿದಾಗ ಕರಡಿ ಮೊದಲು ದಾಳಿ ಮಾಡಿದೆ ಎಂದು ಅವರು ಹೇಳಿದರು.
ದಾರೋ ಸ್ಥಳದಲ್ಲೇ ಮೃತಪಟ್ಟರೆ, ಕುರೇಟಿಗೆ ಗಂಭೀರ ಗಾಯಗಳಾಗಿವೆ ಎಂದು ಅವರು ಹೇಳಿದರು.
ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯರು ದಾರೋರ ಶವವನ್ನು ಹೊರತೆಗೆಯುತ್ತಿದ್ದಾಗ, ಕರಡಿ ಮತ್ತೆ ದಾಳಿ ನಡೆಸಿದೆ. ಈ ವೇಳೆ ದಾರೋ ಅವರ ತಂದೆ ಶಂಕರ್ ದಾರೋ ಅವರನ್ನು ಕೊಂದಿದೆ ಎಂದು ಅಧಿಕಾರಿ ಹೇಳಿದರು.
ದಾಳಿಯಲ್ಲಿ ಅರಣ್ಯ ಸಿಬ್ಬಂದಿ ನಾರಾಯಣ ಯಾದವ್ ಅವರ ಕೈಗೂ ಗಾಯಗಳಾಗಿವೆ. ಬಳಿಕ ಅಧಿಕಾರಿಗಳು ಜೆಸಿಬಿ ಬಳಸಿ ಶವಗಳನ್ನು ಕಾಡಿನಿಂದ ಹೊರಗೆ ತಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಡಿ ಚಲನವಲನದ ಮೇಲೆ ನಿಗಾ ಇಡಲು ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಗ್ರಾಮಸ್ಥರು ಅರಣ್ಯಕ್ಕೆ ತೆರಳದಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
Advertisement