
ನವದೆಹಲಿ: 76 ನೇ ಗಣರಾಜ್ಯೋತ್ಸವದ ಪರೇಡ್ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ತವ್ಯ ಪಥದಲ್ಲಿ ಬಿದ್ದಿದ್ದ ಕಸವನ್ನು ಎತ್ತುವ ಮೂಲಕ ಗಮನ ಸೆಳೆದರು. ಈ ಮೂಲಕ ತಮ್ಮ ನಡೆಯಿಂದಲೇ ಸ್ವಚ್ಛ ಭಾರತ ಅಭಿಯಾನದ ಮಹತ್ವವನ್ನು ಸಾರಿದ್ದಾರೆ. ರಾಷ್ಟ್ರದ ಜನರಲ್ಲಿ ಸ್ವಚ್ಛತೆ ಕುರಿತು ಜನರಲ್ಲಿ ಅರಿವು ಮೂಡಿಸಿದ್ದಾರೆ.
ಹೌದು. ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಅವರನ್ನು ಬರಮಾಡಿಕೊಳ್ಳುವಾಗ ಕರ್ತವ್ಯಪಥದಲ್ಲಿ ಬಿದ್ದಿದ್ದ ಕಸವನ್ನು ಗಮನಿಸಿದ ಪ್ರಧಾನಿ ಮೋದಿ, ನಂತರ ಅದನ್ನು ಎತ್ತಿದ್ದು, ಭದ್ರತಾ ಪಡೆ ಕೈಗೆ ನೀಡಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಪ್ರಧಾನಿ ಮೋದಿಯ ಸ್ವಚ್ಚ ಭಾರತ ನಡೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮೋದಿ ಸ್ವಚ್ಚ ಭಾರತದ ರಾಯಭಾರಿ ಎಂದು ಹಲವರು ಶ್ಲಾಘಿಸಿದ್ದಾರೆ. ಮೋದಿಯ ಈ ನಡೆ ದೇಶಕ್ಕೆ ನೀಡಿದ ಸಂದೇಶವಾಗಿದೆ.
ಸ್ವಚ್ಚತೆಯ ಅಭಿಯಾನದಲ್ಲಿ ಮೋದಿಯ ಈ ಸಂದೇಶ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ ಅಭಿಯಾನಕ್ಕೆ ರಾಜಪಥದಲ್ಲಿ ಚಾಲನೆ ನೀಡಿದ ಬಳಿಕ ಸ್ವಚ್ಛ ಭಾರತ ಅಭಿಯಾನವನ್ನು ದೇಶದ ಉದ್ದಗಲಕ್ಕೂ ರಾಷ್ಟ್ರೀಯ ಚಳವಳಿ ರೂಪದಲ್ಲಿ ಜಾರಿಗೆ ತರಲಾಗುತ್ತಿದೆ.
ಪ್ರಧಾನಿ ಮೋದಿ ಸಾಕಷ್ಟು ವೇದಿಕೆ, ಸಾಮಾಜಿಕ ಮಾಧ್ಯಮ, ಮನ್ ಕೀ ಬಾತ್ ಸೇರಿದಂತೆ ಹಲವೆಡೆ ನಿರಂತರವಾಗಿ ಸ್ವಚ್ಛತೆ ಕುರಿತು ಪ್ರತಿಪಾದಿಸುತ್ತಿರುತ್ತಾರೆ. ಸ್ವಚ್ಛ ಭಾರತ ಗುರಿಯೊಂದಿಗೆ ತಮ್ಮ ಮಾತು, ಸಂದೇಶ ಮತ್ತು ಕೃತಿಯ ಮೂಲಕ ಸ್ವಚ್ಛ ಭಾರತದ ಸಂದೇಶವನ್ನು ಜನರಿಗೆ ತಲುಪಿಸುತ್ತಿದ್ದಾರೆ.
Advertisement