ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದ ದೇಶದ ಮೊದಲ ರಾಜ್ಯ ಉತ್ತರಾಖಂಡ
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಎಲ್ಲಾ ನಾಗರಿಕರಿಗೆ ಏಕರೂಪದ ಮದುವೆ, ವಿಚ್ಛೇದನ, ಭೂಮಿ, ಆಸ್ತಿ ಮತ್ತು ಉತ್ತರಾಧಿಕಾರ ಕಾನೂನುಗಳನ್ನು ಒಳಗೊಂಡ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಸೋಮವಾರದಿಂದ ಜಾರಿಗೆ ಬಂದಿದೆ. ಇದರೊಂದಿಗೆ ದೇಶದಲ್ಲಿ ಯುಸಿಸಿ ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಾಜ್ಯದಲ್ಲಿ ಯುಸಿಸಿ ಜಾರಿ ಸಂಬಂಧ ಇಂದು ಗೆಜೆಟ್ ಅಧಿಸೂಚನೆ ಹೊರಡಿಸಿದ್ದಾರೆ.
ಮದುವೆಗಳು, ವಿಚ್ಛೇದನ ಮತ್ತು ಲಿವ್-ಇನ್ ಸಂಬಂಧಗಳ ಕಡ್ಡಾಯ ಆನ್ಲೈನ್ ನೋಂದಣಿಗಾಗಿ ರಚಿಸಲಾದ ಪೋರ್ಟಲ್ ಮತ್ತು ನಿಯಮ ಹಾಗೂ ಗೆಜೆಟ್ ಅಧಿಸೂಚನೆಯನ್ನು ಪುಷ್ಕರ್ ಸಿಂಗ್ ಧಾಮಿ ಬಿಡುಗಡೆ ಮಾಡಿದರು.
"ಎಲ್ಲಾ ಧರ್ಮಗಳ ಪ್ರತಿಯೊಬ್ಬ ನಾಗರಿಕರಿಗೆ ಏಕರೂಪದ ಮದುವೆ, ವಿಚ್ಛೇದನ, ಭೂಮಿ, ಆಸ್ತಿ ಮತ್ತು ಉತ್ತರಾಧಿಕಾರ ಕಾನೂನುಗಳನ್ನು ಒಳಗೊಂಡ ಯುಸಿಸಿ ಈ ಕ್ಷಣದಿಂದ ಸಂಪೂರ್ಣವಾಗಿ ಜಾರಿಗೆ ಬಂದಿದೆ. ಅದರ ಕೀರ್ತಿ ಸಂಪೂರ್ಣವಾಗಿ ರಾಜ್ಯದ ಜನರಿಗೆ ಸಲ್ಲುತ್ತದೆ" ಎಂದು ಧಾಮಿ ತಮ್ಮ ಗೃಹ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಹೇಳಿದರು.
ಸ್ವಾತಂತ್ರ್ಯದ ನಂತರ ಯುಸಿಸಿಯನ್ನು (UCC) ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಉತ್ತರಾಖಂಡ ರಾಜ್ಯವಾಗಿದೆ. ಈ ಕಾನೂನು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಖಾತ್ರಿಪಡಿಸುವ ಮೂಲಕ ಸಮಾಜದಲ್ಲಿ ಏಕರೂಪತೆಯನ್ನು ತರುತ್ತದೆ ಎಂದು ಅವರು ಹೇಳಿದರು.
2022 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಧಾಮಿ ರಾಜ್ಯದ ಜನರಿಗೆ ನೀಡಿದ ಪ್ರಮುಖ ಚುನಾವಣಾ ಪೂರ್ವ ಭರವಸೆಗಳಲ್ಲಿ ಯುಸಿಸಿ ಜಾರಿ ಸಹ ಒಂದಾಗಿದೆ.