Ahmedabad plane crash: ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ AAIB
ನವದೆಹಲಿ: ಕಳೆದ ಜೂನ್ 12ರಂದು 260 ಜನರ ಸಾವಿಗೆ ಕಾರಣವಾದ ಅಹಮದಾಬಾದ್ ವಿಮಾನ ದುರಂತಕ್ಕೆ ಸಂಬಂಧಿಸಿದ ಪ್ರಾಥಮಿಕ ತನಿಖಾ ವರದಿಯನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸಲ್ಲಿಸಿದೆ.
ಭೀಕರ ವಿಮಾನ ಅಪಘಾತಕ್ಕೆ ಕಾರಣ ಏನೆಂದು ಈ ವರದಿಯಲ್ಲಿ ಬಹಿರಂಗವಾಗುವ ಸಾಧ್ಯತೆಯಿದ್ದು, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.
ವಿಮಾನ ಅಪಘಾತವಾದ ಮರುದಿನವೇ ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ಶಿಷ್ಠಾಚಾರಗಳಿಗೆ ಅನುಗುಣವಾಗಿ ಬಹು-ಶಿಸ್ತಿನ ತಂಡವನ್ನು ರಚಿಸಿದ ನಂತರ ಜೂನ್ 13 ರಂದು ತನಿಖೆಯನ್ನು ಆರಂಭಿಸಲಾಗಿತ್ತು.
ವಿಮಾನವನ್ನು ಅಂತಾರಾಷ್ಟ್ರೀಯ ಒಪ್ಪಂದಗಳಿಂದ ಕಡ್ಡಾಯಗೊಳಿಸಲಾದ ಮಾನದಂಡಗಳಂತೆ ಅಮೆರಿಕಾದಲ್ಲಿ ತಯಾರಿಸಲಾಗಿರುವುದರಿಂದ ವಿಮಾನಯಾನ ಔಷಧ, ವಾಯು ಸಂಚಾರ ನಿಯಂತ್ರಣ ಮತ್ತು ಯುಎಸ್ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ (NTSB) ತಾಂತ್ರಿಕ ತಜ್ಞರನ್ನು ಎಎಐಬಿ ಮಹಾನಿರ್ದೇಶಕರ ನೇತೃತ್ವದ ತಂಡವು ಒಳಗೊಂಡಿತ್ತು.
ಎನ್ ಟಿಎಸ್ ಬಿನ ತಾಂತ್ರಿಕ ಸದಸ್ಯರೊಂದಿಗೆ ಎಎಐಬಿ ತಂಡವು ವಿಮಾನದ ಕಪ್ಪು ಪೆಟ್ಟಿಗೆಗಳಿಂದ ದಾಖಲೆಗಳನ್ನು ಹೊರತೆಗೆಯುವ ಪ್ರಕ್ರಿಯೆಯನ್ನು ಜೂನ್ 24ರಂದು ಪ್ರಾರಂಭಿಸಿತ್ತು. ಮುಂಭಾಗದ ಕಪ್ಪು ಪೆಟ್ಟಿಗೆಯಿಂದ ಕ್ರ್ಯಾಶ್ ಪ್ರೊಟೆಕ್ಷನ್ ಮಾಡ್ಯೂಲ್ (CPM) ನ್ನು ಹಿಂಪಡೆದ ನಂತರ ಜೂನ್ 25 ರಂದು, ಮೆಮೊರಿ ಮಾಡ್ಯೂಲ್ ನ್ನು ಪಡೆದು ಡೇಟಾವನ್ನು ಎಎಐಬಿಯ ಪ್ರಯೋಗಾಲಯದಲ್ಲಿ ಡೌನ್ಲೋಡ್ ಮಾಡಲಾಯಿತು.
ಕಾಕ್ಪಿಟ್ ವಾಯ್ಸ್ ರೆಕಾರ್ಡರ್ (CVR) ಮತ್ತು ಫ್ಲೈಟ್ ಡೇಟಾ ರೆಕಾರ್ಡರ್ (FDR) ನ ವಿಶ್ಲೇಷಣೆಯನ್ನು ಸಹ ನಡೆಸಲಾಯಿತು. ಸಿವಿಆರ್ ಮತ್ತು ಎಫ್ ಡಿಆರ್ ಎರಡನ್ನೂ ಜೂನ್ 13 ರಂದು ಅಪಘಾತದ ಸ್ಥಳದಲ್ಲಿ ಒಂದನ್ನು ಕಟ್ಟಡದ ಮೇಲ್ಛಾವಣಿಯಿಂದ ಮತ್ತು ಇನ್ನೊಂದು ಜೂನ್ 16 ರಂದು ಅವಶೇಷಗಳಿಂದ ಪಡೆಯಲಾಯಿತು.
ವಿಮಾನಯಾನ ಸಂಸ್ಥೆಯಿಂದ ನಡೆದ ಮತ್ತೊಂದು ತನಿಖೆ ಪ್ರಕಾರ, ಡಬಲ್ ಎಂಜಿನ್ ವೈಫಲ್ಯವು ಬೋಯಿಂಗ್ 787 ಡ್ರೀಮ್ಲೈನರ್ ಏರ್ ಇಂಡಿಯಾ ವಿಮಾನ AI171 ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಹೇಳಿದೆ ಎಂದು ಬ್ಲೂಮ್ ಬರ್ಗ್ ವರದಿ ಹೇಳುತ್ತದೆ.
ಲಂಡನ್ ನ ಗ್ಯಾಟ್ವಿಕ್ಗೆ ತೆರಳುತ್ತಿದ್ದ ವಿಮಾನವು ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಸೆಕೆಂಡ್ ಗಳಲ್ಲಿ ಮೇಘನಿನಗರದ ಬಿ.ಜೆ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಹಾಸ್ಟೆಲ್ಗೆ ಅಪ್ಪಳಿಸಿ ಕನಿಷ್ಠ 260 ಜನರು ಮೃತಪಟ್ಟಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ