
ನವದೆಹಲಿ: ಜೂನ್ 12 ರಂದು ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ಅಪಘಾತದ ಕಾರಣದ ಬಗ್ಗೆ ಆತುರದ ತೀರ್ಮಾನಗಳಿಗೆ ಸಾರ್ವಜನಿಕರು ಮತ್ತು ಮಾಧ್ಯಮಗಳು ಬರಬಾರದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.
ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಇಂದು ಬಿಡುಗಡೆ ಮಾಡಿದ ಪ್ರಾಥಮಿಕ ಸಂಶೋಧನಾ ವರದಿಗಳು ಸಂಕೀರ್ಣ ತನಿಖೆಯ ಆರಂಭ ಮಾತ್ರ ಎಂದು ಅವರು ಹೇಳಿದ್ದಾರೆ.
ಇದು ಪ್ರಾಥಮಿಕ ವರದಿಯಾಗಿದೆ. ಸಚಿವಾಲಯದಲ್ಲಿ, ನಾವು ಅದನ್ನು ಕೂಲಂಕಷವಾಗಿ ವಿಶ್ಲೇಷಿಸುತ್ತಿದ್ದೇವೆ, ಅವರಿಗೆ ಅಗತ್ಯವಿರುವ ಯಾವುದೇ ಬೆಂಬಲವನ್ನು ನೀಡಲು AAIB ಯೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ. ಅಂತಿಮ ವರದಿ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಇದರಿಂದ ನಾವು ಕೆಲವು ನಿರ್ದಿಷ್ಟ ತೀರ್ಮಾನಗಳಿಗೆ ಬರಬಹುದು, ಇದೊಂದು ಸವಾಲಿನ ವಿಷಯ ಎಂದು ರಾಮ್ ಮೋಹನ್ ನಾಯ್ಡು ಸುದ್ದಿಗಾರರಿಗೆ ತಿಳಿಸಿದರು.
ಆರಂಭಿಕ ಎಎಐಬಿ ವರದಿಯು ಘಟನೆಗಳ ಆಘಾತಕಾರಿ ಕ್ರಮವನ್ನು ಬಹಿರಂಗಪಡಿಸಿದೆ. ಅಹಮದಾಬಾದ್ನಿಂದ ಟೇಕ್ ಆಫ್ ಆದ ಕೇವಲ ಮೂರು ಸೆಕೆಂಡುಗಳಲ್ಲಿ, ಏರ್ ಇಂಡಿಯಾ ಫ್ಲೈಟ್ 171 ಆಗಿ ಕಾರ್ಯನಿರ್ವಹಿಸುತ್ತಿರುವ ಬೋಯಿಂಗ್ 787-8 ವಿಮಾನದ ಎರಡೂ ಎಂಜಿನ್ಗಳಿಗೆ ಇಂಧನ ಪೂರೈಕೆ ಕಡಿತಗೊಂಡು ವಿಮಾನದ ಇಂಧನ ನಿಯಂತ್ರಣ ಸ್ವಿಚ್ಗಳು ಪರಸ್ಪರ ಒಂದು ಸೆಕೆಂಡಿನೊಳಗೆ “RUN” ನಿಂದ “CUTOFF” ಆಯಿತು.
ಸ್ವಿಚ್ ಟಾಗಲ್ಗಳು ಅಜಾಗರೂಕತೆಯಿಂದ ಆಯಿತೋ ಅಥವಾ ಉದ್ದೇಶಪೂರ್ವಕವಾಗಿಯೇ ಆಗಿದೆಯೇ ಎಂಬುದು ಗೊತ್ತಾಗಿಲ್ಲ. ವಿಮಾನದ ಹಾರಾಟವನ್ನು 56 ವರ್ಷದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರು ನಡೆಸುತ್ತಿದ್ದರು, ಅವರು 15,000 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವ ಹೊಂದಿರುವ ಅನುಭವಿ. ಸಹ-ಪೈಲಟ್ 32 ವರ್ಷದ ಕ್ಲೈವ್ ಕುಂದರ್, ಅವರು 3,403 ಹಾರಾಟದ ಗಂಟೆಗಳನ್ನು ಕಳೆದಿದ್ದರು.
ಇನ್ನು ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಸಹ, ಪ್ರಾಥಮಿಕ ವರದಿಯಿಂದ ದೃಢವಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ. AAIB ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಅದರ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿದೆ ಎಂದರು.
ಅಂತಿಮ ತನಿಖಾ ವರದಿ ಬರುವವರೆಗೆ ಕಾಯೋಣ ಎಂದರು.
Advertisement