
ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತೆ ಶರದ್ ಪವಾರ್ ಬಣಕ್ಕೆ ವಾಪಸ್ಸಾಗಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. NCP (SP) ಅಧ್ಯಕ್ಷ ಶರದ್ ಪವಾರ್ ಹಾಗೂ ಅಜಿತ್ ಪವಾರ್ ಇತ್ತೀಚಿಗೆ ಹಲವು ಬಾರಿ ಭೇಟಿಯಾಗಿರುವುದು ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಪುಣೆಯಲ್ಲಿ ಶನಿವಾರ ಸಕ್ಕರೆ ಸಹಕಾರ ಸಂಘಗಳ ಸಬೆ ನಂತರ ಇಬ್ಬರು ನಾಯಕರು ಖಾಸಗಿಯಾಗಿ ಭೇಟಿಯಾಗಿದ್ದು, ಸುಮಾರು 5 ರಿಂದ ಏಳು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಇದು ಉಭಯ ನಾಯಕರು ಮತ್ತೆ ಒಗ್ಗೂಡಲಿದ್ದಾರೆಯೇ ಎಂಬ ವದಂತಿ ಹುಟ್ಟುಹಾಕಿದ್ದು, ಈ ನಿಟ್ಟಿನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಜುಲೈ 2023 ರಲ್ಲಿ ಅಜಿತ್ ಪವಾರ್ ಅವರು, ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಸೇರಿದಾಗ NCP ಪಕ್ಷ ವಿಭಜನೆಯಾಗಿತ್ತು. ತದನಂತರ ಚುನಾವಣಾ ಆಯೋಗ NCP ಹೆಸರು ಮತ್ತು ಪಕ್ಷದ ಚಿಹ್ನೆಯನ್ನು ಅಜಿತ್ ಪವಾರ್ ಅವರ ಬಣಕ್ಕೆ ನೀಡಿತ್ತು. ಆದರೆ ಶರದ್ ಪವಾರ್ ಅವರ ಗುಂಪನ್ನು NCP (ಶರದ್ಚಂದ್ರ ಪವಾರ್) ಎಂದು ಗುರುತಿಸಲಾಯಿತು.
ಅಜಿತ್ ಪವಾರ್ ಮತ್ತೆ ಪಕ್ಷ ಸೇರುವ ಕುರಿತು ವದಂತಿಗಳು ಕೇಳಿಬರುತ್ತಿದ್ದರೂ ಉಭಯ ಬಣಗಳ ನಾಯಕರು ಅದನ್ನು ನಿರಾಕರಿಸುತ್ತಾ ಬರುತ್ತಿದ್ದಾರೆ. ಈ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎನ್ಸಿಪಿ (ಎಸ್ಪಿ) ನಾಯಕ ಅನಿಲ್ ದೇಶಮುಖ್ ಎನ್ಸಿಪಿ ಬಣಗಳು ಒಗ್ಗೂಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.
ಉಭಯ ನಾಯಕರು ಇತ್ತೀಚಿಗೆ ಭೇಟಿಯಾದಾಗ ಸಕ್ಕರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕುರಿತು ಮಾತನಾಡಿದ್ದಾರೆ. ಎರಡು ಬಣಗಳ ವಿಲೀನದ ಬಗ್ಗೆ ಯಾವುದೇ ಚರ್ಚೆ ಇಲ್ಲ. ಅಂತಹ ಸಭೆಗಳು ಸಾಮಾನ್ಯ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಬಾಕಿ ಉಳಿದಿರುವ ವಿವಿಧ ಸ್ಥಳೀಯ ಮತ್ತು ಪೌರ ಸಂಸ್ಥೆಗಳ ಚುನಾವಣೆಗಳ ವಿಷಯದ ಕುರಿತು ಮಾತನಾಡಿದ ದೇಶಮುಖ್, ಸುಪ್ರೀಂ ಕೋರ್ಟ್ನ ಆದೇಶದಂತೆ ನಡೆಯುತ್ತದೆ. ಶುದ್ಧ ಕುಡಿಯುವ ನೀರು ಮತ್ತು ಆಡಳಿತದ ಸಮಸ್ಯೆಗಳು ಬಾಕಿ ಉಳಿದಿದ್ದು, ಚುನಾವಣೆಯನ್ನು ಇನ್ನಷ್ಟು ವಿಳಂಬ ಮಾಡಬಾರದು ಎಂದರು. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಸೇರಿದಂತೆ ಹಲವು ಸ್ಥಳೀಯ ಮತ್ತು ನಾಗರಿಕ ಸಂಸ್ಥೆ ಚುನಾವಣೆ ಬಹಳ ದಿನಗಳಿಂದ ವಿಳಂಬವಾಗಿದೆ.
Advertisement