
ಪಂಜಾಬ್: ಆಪರೇಷನ್ ಸಿಂಧೂರದ ಸಮಯದಲ್ಲಿ ಸೇನೆಯ ಚಲನವಲನಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಿ ಗುಪ್ತಚರರೊಂದಿಗೆ ಹಂಚಿಕೊಂಡ ಆರೋಪದ ಮೇಲೆ ಪಂಜಾಬ್ನ ತರಣ್ ತರಣ್ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರೊಂದಿಗೆ (ಪಿಐಒ) ಮಾಹಿತಿ ಹಂಚಿಕೊಂಡ ಮೊಬೈಲ್ ಫೋನ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಜೊತೆ ಸಂಪರ್ಕದಲ್ಲಿದ್ದನೆಂದು ಆರೋಪಿಸಲಾಗಿದೆ. ಸೂಕ್ಷ್ಮ ಮಾಹಿತಿಯನ್ನು ನೀಡಲು ಹಣವನ್ನು ಸಹ ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ತರಣ್ನ ಮೊಹಲ್ಲಾ ನಿವಾಸಿ ಗಗನ್ದೀಪ್ ಸಿಂಗ್ ಅಲಿಯಾಸ್ ಗಗನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ. ತರಣ್ ಪೊಲೀಸರು ಮತ್ತು ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ ವಿಭಾಗದ ಜಂಟಿ ಕಾರ್ಯಾಚರಣೆಯಲ್ಲಿ ಆತನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯು ಪಾಕಿಸ್ತಾನದ ಐಎಸ್ಐ ಮತ್ತು ಪಾಕಿಸ್ತಾನ ಮೂಲದ ಖಾಲಿಸ್ತಾನಿ ಬೆಂಬಲಿಗ ಗೋಪಾಲ್ ಸಿಂಗ್ ಚಾವ್ಲಾ ಅವರೊಂದಿಗೆ ಸಂಪರ್ಕದಲ್ಲಿದ್ದನು. ಆಪರೇಷನ್ ಸಿಂಧೂರ ಸಮಯದಲ್ಲಿ ಸೇನಾ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದನು ಎಂದು ಡಿಜಿಪಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಸೇನಾಪಡೆಗಳ ನಿಯೋಜನೆ ಮತ್ತು ಕಾರ್ಯತಂತ್ರದ ಸ್ಥಳಗಳು ಸೇರಿದಂತೆ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುವ ವರ್ಗೀಕೃತ ವಿವರಗಳನ್ನು ಹಂಚಿಕೊಳ್ಳುವಲ್ಲಿ ಆರೋಪಿ ನಿರತನಾಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಗಗನ್ದೀಪ್ ಕಳೆದ ಐದು ವರ್ಷಗಳಿಂದ ಖಾಲಿಸ್ತಾನಿ ಬೆಂಬಲಿಗ ಗೋಪಾಲ್ ಸಿಂಗ್ ಚಾವ್ಲಾ ಅವರೊಂದಿಗೆ ಸಂಪರ್ಕದಲ್ಲಿದ್ದನು. ಅವರ ಮೂಲಕ ಪಿಐಒಗಳ ಪರಿಚಯವಾಗಿದೆ ಎಂದು ಯಾದವ್ ಹೇಳಿದ್ದಾರೆ.
ಆತನ ಮೊಬೈಲ್ ಫೋನ್ನಲ್ಲಿ 20ಕ್ಕೂ ಹೆಚ್ಚು ಐಎಸ್ಐ ಸಂಪರ್ಕಗಳ ವಿವರಗಳು ಪತ್ತೆಯಾಗಿವೆ. ಈ ಸಂಬಂಧ ತರಣ್ ತರಣ್ ನಗರದ ಪೊಲೀಸ್ ಠಾಣೆಯಲ್ಲಿ ಅಧಿಕೃತ ರಹಸ್ಯ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
Advertisement