
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಶುಕ್ರವಾರ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ಪುನಃಸ್ಥಾಪಿಸುವ ಬೇಡಿಕೆಯನ್ನು ಪುನರುಚ್ಚರಿಸಿದರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಕಣಿವೆಗೆ ಮತ್ತೆ ರಾಜ್ಯದ ಸ್ಥಾನಮಾನ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕತ್ರಾ ರೈಲು ನಿಲ್ದಾಣದಿಂದ ಪ್ರಧಾನಿ ಮೋದಿ ಅವರು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮದಲ್ಲಿ ಸಿಎಂ ಅಬ್ದುಲ್ಲಾ ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಕೇಂದ್ರ ಸಚಿವ ಜಿತೇಂದರ್ ಸಿಂಗ್ ಕೂಡ ಹಾಜರಿದ್ದರು.
"ರೈಲ್ವೆಗಾಗಿ ದೊಡ್ಡ ಕಾರ್ಯಕ್ರಮಗಳು ನಡೆದಾಗಲೆಲ್ಲಾ ನಾನು ಅದರ ಭಾಗವಾಗಿರುವುದು ನನ್ನ ಅದೃಷ್ಟ. ಮೊದಲ ಬಾರಿಗೆ ಅನಂತನಾಗ್ ರೈಲು ನಿಲ್ದಾಣವನ್ನು ಉದ್ಘಾಟಿಸಿದಾಗ, ಬನಿಹಾಲ್ ರೈಲು ಸುರಂಗವನ್ನು ಉದ್ಘಾಟಿಸಿದಾಗಲೂ ನಾನು ಹಾಜರಾಗಿದ್ದೆ. 2014 ರಲ್ಲಿ ನನ್ನ ಮೊದಲ ಅವಧಿಯ ಕೊನೆಯ ಕಾರ್ಯಕ್ರಮ ಸಹ ಇಲ್ಲೇ ನಡೆದಿತ್ತು. ಆಗ ಮೊದಲ ಬಾರಿಗೆ ಪ್ರಧಾನಿಯಾಗಿ ಇಲ್ಲಿಗೆ ಬಂದು ಕತ್ರಾ ರೈಲು ನಿಲ್ದಾಣವನ್ನು ಉದ್ಘಾಟಿಸಿದ್ದೀರಿ ಮತ್ತು ಈಗ ಮೂರನೇ ಬಾರಿ ಪ್ರಧಾನಿ ಬಂದಿದ್ದೀರಿ" ಎಂದು ಜೆ-ಕೆ ಸಿಎಂ ಕಾರ್ಯಕ್ರಮದ ಸಂದರ್ಭದಲ್ಲಿ ಹೇಳಿದರು.
ಕೇಂದ್ರಾಡಳಿತ ಪ್ರದೇಶ "ಸಾಮಾನ್ಯ ಸ್ಥಿತಿಗೆ ಮರಳುವ" ಆಶಯ ವ್ಯಕ್ತಪಡಿಸಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, "2014 ರಲ್ಲಿ ಕತ್ರಾ ರೈಲು ನಿಲ್ದಾಣ ಉದ್ಘಾಟನೆಯಾದಾಗ ಅದೇ ನಾಲ್ಕು ಜನ ಇಲ್ಲಿದ್ದರು. ಆಗ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಮನೋಜ್ ಸಿನ್ಹಾ ಅವರಿಗೆ ಈಗ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಬಡ್ತಿ ನೀಡಲಾಗಿದೆ ಮತ್ತು ನಾನು ಒಂದು ರಾಜ್ಯದ ಮುಖ್ಯಮಂತ್ರಿಯಿಂದ ಒಂದು ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಯಾಗಿ ನೇಮಕಗೊಂಡೆ. ಆದರೆ ನಮಗೆ ತಿಳಿಯುವ ಮೊದಲೇ ವಿಷಯಗಳು ಸಹಜ ಸ್ಥಿತಿಗೆ ಮರಳುತ್ತಿವೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮತ್ತೆ ನೀಡುತ್ತಾರೆ" ಎಂದು ಹೇಳಿದರು.
Advertisement