
ಅಯೋಧ್ಯೆ: ಅಯೋಧ್ಯೆಯಲ್ಲಿ ಶಾಂತಿ ಭಂಗ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಬಗ್ಗೆ ಮಾಹಿತಿ ಪಡೆದ ನಂತರ ಸ್ಥಳೀಯ ಆಡಳಿತವು ವಾರ್ಷಿಕ ಉರುಸ್ ಸಮಾರಂಭವನ್ನು ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ದಶಕಗಳಿಂದ ಅಯೋಧ್ಯೆಯಲ್ಲಿ ನಡೆಯುತ್ತಿರುವ ಉರುಸ್ ಸಮಾರಂಭವನ್ನು ಶನಿವಾರ ಮತ್ತು ಭಾನುವಾರ ನಿಗದಿಪಡಿಸಲಾಗಿತ್ತು.
ಆದರೆ ವಿಶ್ವ ಹಿಂದೂ ಪರಿಷತ್(ವಿಎಚ್ಪಿ) ದೂರಿನ ನಂತರ, ಅಯೋಧ್ಯಾ ಆಡಳಿತವು, ಖಾನ್ಪುರ ಮಸೋಧಾ ಪ್ರದೇಶದ ದಾದಾ ಮಿಯಾ ಬಜಾರ್ನಲ್ಲಿ ಪ್ರತಿ ವರ್ಷ ನಡೆಯುವ 'ದಾದಾ ಮಿಯಾ ಉರುಸ್'ಗೆ ಅನುಮತಿ ನಿರಾಕರಿಸಲಾಗಿದೆ.
ಮೂಲಗಳ ಪ್ರಕಾರ, ಸ್ಥಳೀಯ ವಿಎಚ್ಪಿ ಸದಸ್ಯರಾದ ಲಾಲ್ಜಿ ಶರ್ಮಾ ಮತ್ತು ಸೂರ್ಯಕಾಂತ್ ಪಾಂಡೆ ಅವರು ಖಾನ್ಪುರ ಮಸೋಧಾದಲ್ಲಿ "ಘಾಜಿ ಬಾಬಾ" ಹೆಸರಿನಲ್ಲಿ ಸಭೆ ಆಯೋಜಿಸಲಾಗುತ್ತಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
"ಉರುಸ್ ದಾದಾ ಮಿಯಾ" ಹೆಸರಿನಲ್ಲಿ ಉರುಸ್ ಆಯೋಜಿಸಲು ಆಯೋಜಕರು ಸ್ಥಳೀಯ ಆಡಳಿತದಿಂದ ಅನುಮತಿ ಪಡೆದಿದ್ದಾರೆ. ಆದರೆ ಅವರು "ಘಾಜಿ ಬಾಬಾ ಉರುಸ್" ಹೆಸರಿನಲ್ಲಿ ರಶೀದಿಗಳನ್ನು ಮುದ್ರಿಸುವ ಮೂಲಕ ದೇಣಿಗೆ ಸಂಗ್ರಹಿಸುತ್ತಿರುವುದು ಪೊಲೀಸ್ ತನಿಖೆಯಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅನುಮತಿಯನ್ನು ರದ್ದುಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉರುಸ್ ಸಮಯದಲ್ಲಿ, ಆಯೋಜಕರು "ಮಾಟಮಂತ್ರ" ಮಾಡುವ ಮತ್ತು ಜನರನ್ನು "ದಾರಿ ತಪ್ಪಿಸುವ" ಕೆಲವು ಧರ್ಮಗುರುಗಳನ್ನು ಆಹ್ವಾನಿಸುತ್ತಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
Advertisement