
ಲಖನೌ: ಯಶ್ಪಾಲ್ ನಗರ್ ಮತ್ತು ಅವರ ಮಗ 21 ವರ್ಷದ ಶೇಖರ್ ಉತ್ತರ ಪ್ರದೇಶ ಪೊಲೀಸ್ ಪಡೆಯಲ್ಲಿ ಕಾನ್ಸ್ಟೇಬಲ್ಗಳಾಗಿ ಒಟ್ಟಿಗೆ ನೇಮಕಗೊಂಡಿದ್ದು, ಅವರ ಕುಟುಂಬಕ್ಕೆ ಡಬಲ್ ಹೆಮ್ಮೆಯ ಕ್ಷಣವಾಗಿದೆ.
ಇತ್ತೀಚೆಗೆ ನಡೆದ 60,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಅಭಿಯಾನದಲ್ಲಿ ಯಶ್ಪಾಲ್ ಮತ್ತು ಅವರ ಮಗ ಶೇಖರ್ ಇಬ್ಬರೂ ಆಯ್ಕೆಯಾಗಿದ್ದು, ಭಾನುವಾರ ಲಖನೌದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ನೇಮಕಾತಿ ಪತ್ರಗಳನ್ನು ಪಡೆದಿದ್ದಾರೆ.
ಯುಪಿ ಪೊಲೀಸ್ ನೇಮಕಾತಿ ಮಂಡಳಿ 2024 ರಲ್ಲಿ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಅಭಿಯಾನ ಘೋಷಿಸಿತ್ತು.
ಅಪ್ಪ, ಮಗ ಇಬ್ಬರೂ ಪೊಲೀಸ್ ಪಡೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸುತ್ತಿದ್ದಾರೆ. ಯಶ್ಪಾಲ್ ಶಹಜಹಾನ್ಪುರದಲ್ಲಿ ತರಬೇತಿ ಪಡೆಯಲಿದ್ದು, ಶೇಖರ್ ಬರೇಲಿಯಲ್ಲಿ ತರಬೇತಿ ಪಡೆಯಲಿದ್ದಾರೆ.
ಮಾಜಿ ಸೈನಿಕರಾಗಿರುವ ಯಶ್ಪಾಲ್ ನಗರ್ ಅವರು 16 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿದ ನಂತರ 2019ರಲ್ಲಿ ಭಾರತೀಯ ಸೇನೆಯಿಂದ ವಿಆರ್ಎಸ್ ಪಡೆದಿದ್ದರು. ವಿಆರ್ಎಸ್ ಪಡೆದ ನಂತರ, ಅವರು ದೆಹಲಿಯ ಆರ್ಮಿ ಆರ್ಡನೆನ್ಸ್ ಕಾರ್ಪ್ಸ್ಗೆ ಸೇರಿದ್ದರು.
ಹಾಪುರದ ಧೌಲಾನಾ ತಹಸಿಲ್ನ ಉದಯರಾಂಪುರ ನಾಗ್ಲಾ ಗ್ರಾಮದ ಯಶ್ಪಾಲ್(45), ಎಸ್ಸಿ ವರ್ಗದ ಅಡಿಯಲ್ಲಿ ವಯೋಮಿತಿ ಸಡಿಲಿಕೆ ಪಡೆದಿದ್ದು, ಮಾಜಿ ಸೈನಿಕರಾಗಿದ್ದರಿಂದ ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಅಭಿಯಾನದಲ್ಲಿ ಭಾಗವಹಿಸಲು ಅವಕಾಶ ಪಡೆದಿದ್ದರು. ಅವರು ತಮ್ಮ ಮಗನೊಂದಿಗೆ ಕಳೆದ ಎರಡೂವರೆ ವರ್ಷಗಳಿಂದ ಯುಪಿ ಪೊಲೀಸ್ ನೇಮಕಾತಿಗೆ ತಯಾರಿ ನಡೆಸುತ್ತಿದ್ದರು. ಇಬ್ಬರೂ ಪೊಲೀಸ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಯನ್ನು ಸಹ ಬರೆದಿದ್ದಾರೆ.
ರಾಜ್ಯದ ಅತಿದೊಡ್ಡ ನೇಮಕಾತಿ ಡ್ರೈವ್ನ ಭಾಗವಾಗಿ ಕಳೆದ ವರ್ಷ ನಡೆದ ಪೊಲೀಸ್ ನೇಮಕಾತಿ ಪರೀಕ್ಷೆಗೆ ಅಪ್ಪ. ಮಗ ಒಟ್ಟಿಗೆ ತಯಾರಿ ನಡೆಸಿದ್ದರು. ಅವರು ಪ್ರತಿದಿನ ಒಂದೇ ಗ್ರಂಥಾಲಯದಲ್ಲಿ ಒಟ್ಟಿಗೆ ಅಧ್ಯಯನ ಮಾಡುತ್ತಿದ್ದರು. ಪರಸ್ಪರ ಪ್ರೇರೇಪಿಸುತ್ತಿದ್ದರು.
ಶೇಖರ್ ಯಶ್ಪಾಲ್ ಅವರ ಹಿರಿಯ ಮಗನಾಗಿದ್ದು, ಬಹಳ ದಿನಗಳಿಂದ ಪೊಲೀಸ್ ನೇಮಕಾತಿಗೆ ತಯಾರಿ ನಡೆಸುತ್ತಿದ್ದರು. ಹಾಪುರದಲ್ಲಿ ತಮ್ಮ ಮಗನ ತಯಾರಿಯನ್ನು ನೋಡಿ, ಯಶ್ಪಾಲ್ ಕೂಡ ಪೊಲೀಸ್ ಪಡೆಗೆ ಸೇರಲು ಬಯಸಿದ್ದರು. ಅವರು ತಮ್ಮ ಮಗನನ್ನು ದೆಹಲಿಗೆ ಕರೆಸಿಕೊಂಡು, ಇಬ್ಬರೂ ಒಂದೇ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯಶ್ಪಾಲ್, ಪೊಲೀಸ್ ನೇಮಕಾತಿ ಪರೀಕ್ಷೆಗಾಗಿ ಆಪ್ಟಿಟ್ಯೂಡ್, ರೀಸನಿಂಗ್ ಮತ್ತು ಸಾಮಾನ್ಯ ಅಧ್ಯಯನಗಳಿಗೆ ತಯಾರಿ ನಡೆಸಬೇಕಾಗಿತ್ತು. ನನ್ನ ಮಗ ಮತ್ತು ನಾನು ಇಬ್ಬರೂ ಒಂದೇ ಗ್ರಂಥಾಲಯದಲ್ಲಿ ಅಧ್ಯಯನ ಮಾಡಲು ಹೋಗುತ್ತಿದ್ದೆವು. ನಾವು ಓದುವಾಗ ಅಕ್ಕಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದೆವು. ಆದರೆ ಶೇಖರ್ ನನ್ನ ಮಗ ಎಂದು ಯಾರಿಗೂ ತಿಳಿದಿರಲಿಲ್ಲ" ಎಂದು ಹೇಳಿದ್ದಾರೆ.
ಯಶ್ಪಾಲ್ ಮತ್ತು ಶೇಖರ್ ಒಂದೇ ದಿನ ಬೇರೆ ಬೇರೆ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದು, ಅಕ್ಟೋಬರ್ನಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಇಬ್ಬರೂ ಆಯ್ಕೆಯಾಗಿದ್ದಾರೆ.
ಭಾನುವಾರ ನೇಮಕಾತಿ ಪತ್ರ ಪಡೆಯಲು ಲಖನೌಗೆ ಹೊರಡುವ ಮೊದಲು, ಇಬ್ಬರೂ ಹಾಪುರ್ ಎಸ್ಪಿ ಜ್ಞಾನಂಜಯ್ ಸಿಂಗ್ ಅವರ ಬ್ರೀಫಿಂಗ್ಗೆ ಹೋಗಿದ್ದು, ಈ ವೇಳೆ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ. ಇದು ಯುವಕರಿಗೆ ಸ್ಪೂರ್ತಿದಾಯಕ ಕಥೆ ಎಂದು ಎಸ್ ಪಿ ಹೇಳಿದ್ದಾರೆ.
ತನ್ನ ಮಗನೊಂದಿಗೆ ಯುಪಿ ಪೊಲೀಸ್ ಪಡೆಯ ಭಾಗವಾಗಲು ಹೆಮ್ಮೆಯಾಗುತ್ತಿದೆ. ಸೇನೆಯ ನಂತರ, ನಾನು ಈಗ ಪೊಲೀಸ್ ಇಲಾಖೆ ಮೂಲಕ ದೇಶ ಸೇವೆ ಸಲ್ಲಿಸುತ್ತೇನೆ ಎಂದು ಯಶ್ಪಾಲ್ ತಿಳಿಸಿದ್ದಾರೆ.
ತಮ್ಮ ಕಠಿಣ ಪರಿಶ್ರಮದಿಂದ ಫಲ ಸಿಕ್ಕಿದೆ. ಆದರೆ ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್(ಸಿಡಿಎಸ್) ಮತ್ತು ಇನ್ಸ್ಪೆಕ್ಟರ್ ಹುದ್ದೆಗೆ ತಯಾರಿ ಮುಂದುವರಿಸುತ್ತೇನೆ ಎಂದು ಅವರ ಪುತ್ರ ಶೇಖರ್ ಹೇಳಿದ್ದಾರೆ.
ಯಶ್ಪಾಲ್ ಅವರ ಪತ್ನಿ ಅನಿತಾ ಗೃಹಿಣಿಯಾಗಿದ್ದು,. ಮಗಳು ನೇಹಾ ಪದವಿ ಪಡೆಯುತ್ತಿದ್ದಾಳೆ. ಕಿರಿಯ ಮಗ ಈ ವರ್ಷ 12ನೇ ತರಗತಿ ಪಾಸ್ ಆಗಿದ್ದು, ಆತನು ಕೂಡ ತನ್ನ ತಂದೆ ಮತ್ತು ಅಣ್ಣನಂತೆ ಪೊಲೀಸ್ ಇಲಾಖೆ ಸೇರಲು ಬಯಸುತ್ತಿದ್ದಾರೆ.
Advertisement