
ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನದ ಪತನದ ಬಗ್ಗೆ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ಅವರು, ರಕ್ಷಣಾ ಕಾರ್ಯ, ಗಾಯಾಳುಗಳ ಚೇತರಿಕೆ ಮತ್ತು ಪ್ರಸ್ತುತ ನಡೆಯುತ್ತಿರುವ ತನಿಖೆಯ ಕುರಿತು ವಿವರವಾದ ಮಾಹಿತಿ ನೀಡಿದರು.
ಡಿಎನ್ಎ ಪರಿಶೀಲನೆ ಮತ್ತು ವಿಧಿವಿಜ್ಞಾನ ವಿಶ್ಲೇಷಣೆ ಅಂತಿಮ ಹಂತಕ್ಕೆ ತಲುಪಿದ್ದು, ಮುಂದಿನ 2-3 ದಿನಗಳಲ್ಲಿ ಸಾವಿನ ನಿಖರವಾದ ಸಂಖ್ಯೆಯನ್ನು ದೃಢಪಡಿಸುವ ಸಾಧ್ಯತೆ ಇದೆ ಎಂದು ಮಲಿಕ್ ತಿಳಿಸಿದರು.
ಜೂನ್ 12 ರಂದು ಮಧ್ಯಾಹ್ನ 1:40 ವಿಮಾನ ಅಪಘಾತ ಸಂಭವಿಸಿದ್ದು, ಕೇವಲ ಎರಡು ನಿಮಿಷಗಳಲ್ಲಿ ಅಂದರೆ ಮಧ್ಯಾಹ್ನ 1:42ಕ್ಕೆ ಅಹಮದಾಬಾದ್ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಾಂಘವಿ ಮತ್ತು ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ವಿಕಾಸ್ ಸಹಾಯ್ ಅವರಿಗೆ ತಕ್ಷಣವೇ ಮಾಹಿತಿ ನೀಡಲಾಯಿತು ಎಂದು ಆಯುಕ್ತ ಮಲಿಕ್ ಹೇಳಿದ್ದಾರೆ.
ಕೆಲವೇ ನಿಮಿಷಗಳಲ್ಲಿ, ಡಿಸಿಪಿ ಅಪರಾಧ ಮತ್ತು ಡಿಸಿಪಿ ವಲಯ 4 ಸೇರಿದಂತೆ ಹಿರಿಯ ಅಧಿಕಾರಿಗಳು ಅಪಘಾತದ ಸ್ಥಳಕ್ಕೆ ತಲುಪಿದರು ಎಂದರು.
ಪರಿಸ್ಥಿತಿಯ ತುರ್ತುಸ್ಥಿತಿಯನ್ನು ಗುರುತಿಸಿ, ತುರ್ತು ವಾಹನಗಳಿಗೆ ಯಾವುದೇ ಅಡೆತಡೆಯಿಲ್ಲದ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಹಸಿರು ಕಾರಿಡಾರ್ ನಿರ್ಮಿಸಲಾಯಿತು ಎಂದು ಅವರು ಹೇಳಿದರು.
19 ಅಗ್ನಿಶಾಮಕ ಕೇಂದ್ರಗಳಿಂದ ಅಗ್ನಿಶಾಮಕ ವಾಹನ, ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್ಗಳು ಯಾವುದೇ ವಿಳಂಬವಿಲ್ಲದೆ ಚಲಿಸಲು ಅವಕಾಶ ನೀಡಲಾಯಿತು. ಗಮನಾರ್ಹ ವಿಚಾರ ಎಂದರೆ ಮೊದಲ ಆಂಬ್ಯುಲೆನ್ಸ್ ಕೇವಲ 3 ನಿಮಿಷ 40 ಸೆಕೆಂಡುಗಳಲ್ಲಿ ಘಟನಾ ಸ್ಥಳಕ್ಕೆ ತಲುಪಿತು ಎಂದರು.
ಡಿಎನ್ಎ ಮಾದರಿಗಳನ್ನು ಸಂಗ್ರಹಿಸುವಲ್ಲಿನ ಅಸಾಧಾರಣ ಸಮನ್ವಯ ಮತ್ತು ವೇಗವನ್ನು ಎತ್ತಿ ತೋರಿಸಿದ ಆಯುಕ್ತರು, 10 ಇನ್ಸ್ಪೆಕ್ಟರ್ಗಳು ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ 11 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 51 ಕುಟುಂಬಗಳಿಂದ ಮಾದರಿಗಳನ್ನು ಸಂಗ್ರಹಿಸಿದರು. ಅದೇ ರಾತ್ರಿ, ಪೊಲೀಸರು ಅಪಘಾತ ನಡೆದು 12 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ, ಅಂದರೆ ಮಧ್ಯರಾತ್ರಿ 12:19 ರ ಹೊತ್ತಿಗೆ ಗಾಂಧಿನಗರ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯವನ್ನು(ಎಫ್ಎಸ್ಎಲ್) ತಲುಪಿದರು. ಸುಧಾರಿತ ವಿಧಿವಿಜ್ಞಾನ ಉಪಕರಣಗಳೊಂದಿಗೆ ಹಸ್ತಚಾಲಿತ ಮತ್ತು ಸಾಫ್ಟ್ವೇರ್ ನೆರವಿನ ಡಿಎನ್ಎ ಹೊಂದಾಣಿಕೆ ವಿಧಾನಗಳನ್ನು ಬಳಸಲಾಯಿತು ಎಂದರು.
211 ಜನರ ಡಿಎನ್ಎ ಹೋಲಿಕೆ; 189 ಮೃತದೇಹ ಹಸ್ತಾಂತರ
ಅಹಮದಾಬಾದ್ ವಿಮಾನ ದುರಂತದದಲ್ಲಿ ಮೃತಪಟ್ಟ 211 ವ್ಯಕ್ತಿಗಳ ಡಿಎನ್ಎ ಮಾದರಿಗಳನ್ನು ಯಶಸ್ವಿಯಾಗಿ ಹೊಂದಿಸಲಾಗಿದೆ ಮತ್ತು 189 ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement