
ನವದೆಹಲಿ: India’s Got Latent ವಿವಾದಕ್ಕೆ ಸಂಬಂಧಿಸಿದಂತೆ ಹಾಸ್ಯನಟ ಸಮಯ್ ರೈನಾ ವಿರುದ್ಧ ಸುಪ್ರೀಂ ಕೋರ್ಟ್ ಕೆಂಡಾಮಂಡಲವಾಗಿದ್ದು, ಬಹುಶಃ ಅವನಿಗೆ ನ್ಯಾಯಾಲಯದ ನ್ಯಾಯವ್ಯಾಪ್ತಿ ತಿಳಿದಿಲ್ಲ ಎಂದು ಕಿಡಿಕಾರಿದೆ.
ಹೌದು.. ಪಾಡ್ಕ್ಯಾಸ್ಟರ್ ರಣವೀರ್ ಅಲ್ಲಾಬಾಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದಾಗ, ಹಾಸ್ಯನಟ ಸಮಯ್ ರೈನಾ ಕೆನಡಾದಲ್ಲಿ ತಮ್ಮ ಲೈವ್ ಶೋನಲ್ಲಿ ಇಂಡಿಯಾಸ್ ಗಾಟ್ ಲ್ಯಾಟೆಂಟ್ ವಿವಾದದ ಬಗ್ಗೆ ಮಾಡಿದ ಹೇಳಿಕೆಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಾಸ್ಯನಟ ಸಮಯ್ ರೈನಾ ಹೆಸರನ್ನು ನೇರವಾಗಿ ಹೆಸರಿಸದೆ, ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, 'ಯುವ ಪೀಳಿಗೆ ತನ್ನನ್ನು ತಾನು "ಅತಿ ಬುದ್ಧಿವಂತ" ಎಂದು ಭಾವಿಸಿದಂತಿದೆ. ಅದಕ್ಕೆ ಸುಪ್ರೀಂ ಕೋರ್ಟ್ನ ನ್ಯಾಯವ್ಯಾಪ್ತಿ ಮತ್ತು ಅಧಿಕಾರದ ಬಗ್ಗೆ ತಿಳಿದಿಲ್ಲ. ಅವರಲ್ಲಿ ಒಬ್ಬರು ಕೆನಡಾಕ್ಕೆ ಹೋಗಿ ಇದೆಲ್ಲದರ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಕೋರ್ಟ್ ಏನು ಮಾಡಬಹುದೆಂದು ತಿಳಿದಿಲ್ಲ ಎಂದೆನಿಸುತ್ತದೆ ಎಂದು ಹೇಳಿದರು. ಅಂತೆಯೇ ಆರೋಪಿಗಳ ವಯಸ್ಸನ್ನು ಗಮನಿಸಿದ ನ್ಯಾಯಾಧೀಶರು, ಅವರು ಚಿಕ್ಕವರು, ನಮಗೆ ಅರ್ಥವಾಗುತ್ತದೆ. ಅವರ ವಿರುದ್ಧ ಕ್ರಮಕ್ಕೆ ಬಯಸುವುದಿಲ್ಲ ಎಂದು ಹೇಳಿದೆ.
ಉರಿಯುವ ಬೆಂಕಿಗೆ ತುಪ್ಪ ಸುರಿದ ಸಮಯ್ ರೈನಾ ಕೆನಡಾ ಶೋ
ಇನ್ನು ಭಾರತದಲ್ಲಿ ಪ್ರಕರಣಗಳ ಹೊರತಾಗಿಯೂ ಹಾಸ್ಯನಟ ಸಮಯ್ ರೈನಾ ಕೆನಾಡದಲ್ಲಿ ಹಾಸ್ಯ ಕಾರ್ಯಕ್ರಮ ನಡೆಸಿದ್ದು, ಮಾತ್ರವಲ್ಲದೇ ಆ ಕಾರ್ಯಕ್ರಮದಲ್ಲಿ ತನ್ನ ವಿರುದ್ಧ ವಿವಾದಗಳ ಕುರಿತೂ ಮಾತನಾಡಿದ್ದಾನೆ. ತನ್ನ ಶೋ ಟಿಕೆಟ್ ಮಾರಾಟವು ಕಾನೂನು ಶುಲ್ಕವನ್ನು ಪಾವತಿಸಲು ಸಹಾಯ ಮಾಡುತ್ತಿದೆ ಎಂದು ತಮಾಷೆ ಮಾಡಿದ್ದಾನೆ. "ನಾನು ನಿಜವಾಗಿಯೂ ತಮಾಷೆಯ ಏನನ್ನಾದರೂ ಹೇಳಬಹುದಾದ ಕ್ಷಣಗಳಲ್ಲಿ, ಬೀರ್ಬೈಸೆಪ್ಸ್ ಅನ್ನು ನೆನಪಿಡಿ, ಸಹೋದರ" ಎಂದು ಅವರು ವ್ಯಂಗ್ಯವಾಡಿದರು. "ಬಹುಶಃ ನನ್ನ ಸಮಯ ಕೆಟ್ಟದಾಗಿರಬಹುದು, ಆದರೆ ನೆನಪಿಡಿ - ನಾನು ಸಮಯ್ ಎಂದು ವ್ಯಂಗ್ಯ ಮಾಡುತ್ತಾ ಕಾರ್ಯಕ್ರಮ ಮುಕ್ತಾಯಗೊಳಿಸಿದ್ದಾರೆ.
India’s Got Latent ವಿವಾದಕ್ಕೆ ಸಂಬಂಧಿಸಿದಂತೆ ಹಾಸ್ಯನಟ ಸಮಯ್ ರೈನಾ, ರಣ್ವೀರ್ ಅಲ್ಹಾಬಾದಿಯಾ ಸೇರಿದಂತೆ ಹಲವು ಕಂಟೆಂಟ್ ಕ್ರಿಯೇಟರ್ ಗಳ ವಿರುದ್ದ ದೇಶದ ವಿವಿಧ ಠಾಣೆಗಳಲ್ಲಿ ಹಲವು ಎಫ್ ಐಆರ್ ಗಳು ದಾಖಲಾಗಿದ್ದವು.
ರಣವೀರ್ ಅಲ್ಹಾಬಾದಿಯಾ, ಅಕಾ ಬೀರ್ಬೈಸೆಪ್ಸ್, ಇಂಡಿಯಾಸ್ ಗಾಟ್ ಲ್ಯಾಟೆಂಟ್ನಲ್ಲಿ ಪೋಷಕರು ಮತ್ತು ಲೈಂಗಿಕತೆಯ ಬಗ್ಗೆ ಅಸಭ್ಯ ಹೇಳಿಕೆಗಳನ್ನು ನೀಡಿದಾಗ ವಿವಾದ ಪ್ರಾರಂಭವಾಯಿತು. ಬಳಿಕ ಸಮಯ್ ರೈನಾ ಮತ್ತು ಆಶಿಶ್ ಚಂಚಲಾನಿ ಮತ್ತು ಜಸ್ಪ್ರೀತ್ ಸಿಂಗ್ರಂತಹ ಸಹ ಯೂಟ್ಯೂಬರ್ಗಳ ವಿರುದ್ಧ ಎಫ್ಐಆರ್ಗಳು ದಾಖಲಾಯಿತು. ಈ ವಿಚಾರ ಸಂಸತ್ ಅಧಿನೇಶನದಲ್ಲೂ ಚರ್ಚೆಗೆ ಬಂದು ಕಟೆಂಟ್ ಕ್ರಿಯೇಟರ್ ಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಬಳಿಕ ಆರೋಪಿತ ಎಲ್ಲ ಕಟೆಂಟ್ ಕ್ರಿಯೇಟರ್ ಗಳು ತಮ್ಮ ತಮ್ಮ ಯೂಟ್ಯೂಬ್ ಚಾನೆಲ್ನಿಂದ ಆಲ್ ಇಂಡಿಯಾಸ್ ಗಾಟ್ ಲ್ಯಾಟೆಂಟ್ ವೀಡಿಯೊಗಳನ್ನು ತೆಗೆದುಹಾಕಿದರು ಮತ್ತು ಅಲ್ಲದೆ ತನಿಖಾ ಅಧಿಕಾರಿಗಳೊಂದಿಗೆ ಸಂಪೂರ್ಣ ಸಹಕಾರವನ್ನು ಭರವಸೆ ನೀಡಿದ್ದರು.
Advertisement