ಮಣಿಪುರ: ಅಂತರ ಜಿಲ್ಲಾ ಬಸ್ ಸೇವೆ ಪುನರಾರಂಭ; ಕಾಂಗ್ಪೋಕ್ಪಿಯಲ್ಲಿ ಒಂದು ವಾಹನದ ಮೇಲೆ ದಾಳಿ
ಎರಡು ವರ್ಷಗಳ ಹಿಂದೆ ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಕಲಹ ಭುಗಿಲೆದ್ದ ಬಳಿಕ ಇಂಫಾಲದಿಂದ ಬೆಟ್ಟ ಪ್ರದೇಶಗಳಿಗೆ ಅಂತರ ಜಿಲ್ಲಾ ಬಸ್ ಸೇವೆಗಳು ಪುನರಾರಂಭಗೊಂಡ ಬೆನ್ನಲ್ಲೇ ಶನಿವಾರ ಕಾಂಗ್ಪೋಕ್ಪಿಯಲ್ಲಿ ಮಣಿಪುರ ರಾಜ್ಯ ಸಾರಿಗೆಯ ಬಸ್ ಮೇಲೆ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2024 ರ ಡಿಸೆಂಬರ್ನಲ್ಲಿ, ಇಂಫಾಲದ ಮೊಯಿರಾಂಗ್ಖೋಮ್ನಲ್ಲಿರುವ ಮಣಿಪುರ ರಾಜ್ಯ ಸಾರಿಗೆ (ಎಂಎಸ್ಟಿ) ನಿಲ್ದಾಣದಲ್ಲಿ ಯಾವುದೇ ಪ್ರಯಾಣಿಕರು ಬಾರದ ಕಾರಣ ಇಂಫಾಲದಿಂದ ಕಾಂಗ್ಪೋಕ್ಪಿ ಮತ್ತು ಚುರಾಚಂದ್ಪುರಕ್ಕೆ ಸಾರ್ವಜನಿಕ ಬಸ್ ಸೇವೆಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ಮಾಡಿದ ಪ್ರಯತ್ನ ವಿಫಲವಾಗಿತ್ತು.
ಸೇನಾಪತಿ ಜಿಲ್ಲೆಗೆ ತೆರಳುತ್ತಿದ್ದ ಬಸ್ ಮೇಲೆ ಕಾಗ್ಪೋಕ್ಪಿ ಜಿಲ್ಲೆಯ ಗಮ್ಗಿಫೈ ಪ್ರದೇಶದಲ್ಲಿ ಗುಂಪೊಂದು ಪ್ರಯಾಣಿಕರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದಾಗ ದಾಳಿ ನಡೆದಿದೆ ಎಂದು ಅವರು ಹೇಳಿದರು.
ಭದ್ರತಾ ಪಡೆಗಳು ಅಶ್ರುವಾಯು ಶೆಲ್ಗಳನ್ನು ಹಾರಿಸಿ, ಲಾಠಿ ಚಾರ್ಜ್ ಮಾಡಿದ ಕಾರಣ ಕೆಲವು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುರಾಚಂದ್ಪುರ ಮತ್ತು ಸೇನಾಪತಿಯ ಬೆಟ್ಟದ ಜಿಲ್ಲೆಗಳಿಗೆ ಹೋಗುವ ಬಸ್ಗಳನ್ನು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಯಾವುದೇ ಪ್ರಯಾಣಿಕರಿಲ್ಲದೆ ಇಂಫಾಲ ವಿಮಾನ ನಿಲ್ದಾಣದಿಂದ ಪ್ರಾರಂಭಿಸಲಾಯಿತು. ಬಸ್ ಗೆ ಸೇನಾ ಸಿಬ್ಬಂದಿ ಸೇರಿದಂತೆ ಕೇಂದ್ರ ಪಡೆಗಳ ವಾಹನಗಳು ಬೆಂಗಾವಲು ನೀಡಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಚುರಾಚಂದ್ಪುರಕ್ಕೆ ತೆರಳುತ್ತಿದ್ದ ಬಸ್ ಬಿಷ್ಣುಪುರ ಜಿಲ್ಲೆಯನ್ನು ಯಾವುದೇ ಅಡೆತಡೆಯಿಲ್ಲದೆ ದಾಟಿದ ನಂತರ ಕಾಂಗ್ವೈ ತಲುಪಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್ಪೋಕ್ಪಿ ಮೂಲಕ ಸೇನಾಪತಿ ಜಿಲ್ಲೆಗೆ ತೆರಳುತ್ತಿದ್ದ ಬಸ್ ಇಂಫಾಲ ಪಶ್ಚಿಮ ಜಿಲ್ಲೆಯ ಕಾಂಗ್ಲತೋಂಗ್ಬಿಯವರೆಗೆ ಯಾವುದೇ ಅಡಚಣೆ ಅಥವಾ ದಿಗ್ಬಂಧನವನ್ನು ಎದುರಿಸಲಿಲ್ಲ ಎಂದು ಅವರು ಹೇಳಿದರು.
"ಸಾರ್ವಜನಿಕ ಅನಾನುಕೂಲತೆಗಳನ್ನು ನಿವಾರಿಸಲು ಮತ್ತು ರಾಜ್ಯದಲ್ಲಿ ಸಾಮಾನ್ಯ ಸ್ಥಿತಿಯನ್ನು ತರುವ ಉಪಕ್ರಮವಾಗಿ" ರಾಜ್ಯ ಸಾರಿಗೆ ಬಸ್ ಸೇವೆಗಳು ಪುನರಾರಂಭಗೊಂಡವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 8 ರಿಂದ ಮಣಿಪುರದ ಎಲ್ಲಾ ಮಾರ್ಗಗಳಲ್ಲಿ ಜನರ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಮತ್ತು ಅಡೆತಡೆಗಳನ್ನು ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಭದ್ರತಾ ಪಡೆಗಳಿಗೆ ನಿರ್ದೇಶನ ನೀಡಿದ ನಂತರ ಅಂತರ ಜಿಲ್ಲಾ ಬಸ್ ಸೇವೆಗಳು ಪುನರಾರಂಭಗೊಂಡವು.
ಮಣಿಪುರದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ರಾಜ್ಯದಲ್ಲಿ ಶಾಶ್ವತ ಶಾಂತಿಯನ್ನು ಪುನಃಸ್ಥಾಪಿಸಲು ಕೇಂದ್ರವು ಸಂಪೂರ್ಣವಾಗಿ ಬದ್ಧವಾಗಿದೆ ಮತ್ತು ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸುತ್ತಿದೆ ಎಂದು ಹೇಳಿದರು.
ಮೇ 2023 ರಿಂದ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗುತ್ತಿರುವ ಈಶಾನ್ಯ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ ನಂತರ ನಡೆದ ಮೊದಲ ಸಭೆ ಇದಾಗಿದೆ. ಹಿಂಸಾಚಾರದಲ್ಲಿ 250 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ