
ಹೈದರಾಬಾದ್: ಮಹಾರಾಷ್ಟ್ರದ ಸಂಬಾಜಿನಗರದಲ್ಲಿರುವ ಮೊಘಲ್ ಸಾಮ್ರಾಟ ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸುವಂತೆ ವಿಶ್ವ ಹಿಂದೂ ಪರಿಷತ್ ಮತ್ತಿತರ ಹಿಂದೂಪರ ಸಂಘಟನೆಗಳು ಒತ್ತಾಯಿಸುತ್ತಿರುವಂತೆಯೇ, ಔರಂಗಜೇಬ್ 'ಈಗ ಪ್ರಸ್ತುತವಲ್ಲ' ಎಂದು ಆರ್ ಎಸ್ ಎಸ್ ವಕ್ತಾರ ಸುನೀಲ್ ಅಂಬೇಕರ್ ಬುಧವಾರ ಹೇಳಿದ್ದಾರೆ.
ಅಲ್ಲದೇ ಯಾವುದೇ ರೀತಿಯ ಹಿಂಸಾಚಾರವನ್ನು ಪ್ರೋತ್ಸಾಹಿಸುವುದಿಲ್ಲ ಎಂದಿದ್ದಾರೆ. ಔರಂಗಜೇಬ್ ಈಗ ಪ್ರಸ್ತುತವಲ್ಲ, ಯಾವುದೇ ರೀತಿಯ ಹಿಂಸಾಚಾರವನ್ನು ಪ್ರೋತ್ಸಾಹಿಸಬಾರದು ಎಂದು ಅಂಬೇಕರ್ ಹೇಳಿದ್ದಾರೆ.
ಔರಂಗಜೇಬ್ ಸಮಾಧಿ ತೆರವು ವಿಚಾರದಲ್ಲಿ ನಾಗ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಆರ್ ಎಸ್ ಎಸ್ ತನ್ನ ನಿಲುವನ್ನು ತಿಳಿಸಿದೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ 50 ಮಂದಿಯನ್ನು ಬಂಧಿಸಲಾಗಿದೆ. ನಾಗ್ಪುರದ 8 ಪೊಲೀಸ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸತತ ಎರಡನೇ ದಿನವೂ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
RSS ತನ್ನ ಶತಮಾನೋತ್ಸವವನ್ನು ಆಚರಿಸಲು ಸಜ್ಜಾಗುತ್ತಿರುವಂತೆಯೇ ಸುನೀಲ್ ಅಂಬೇಕರ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಈ ವರ್ಷದ ವಿಜಯದಶಮಿಯಂದು ಆರ್ಎಸ್ಎಸ್ 100 ವರ್ಷ ಪೂರೈಸಲಿದೆ. 2025-26 ರಿಂದ ಶತಮಾನೋತ್ಸವ ವರ್ಷವನ್ನು ಆಚರಿಸಲಾಗುವುದು. ಶಾಖಾ ವಿಸ್ತರಣೆ ಮತ್ತು ಅದನ್ನು ಹೇಗೆ ಸಾಧಿಸಲಾಯಿತು ಎಂಬುದನ್ನು ನಿರ್ಣಯಿಸಲಾಗುತ್ತದೆ. ನಿಗದಿಪಡಿಸಿದ ಗುರಿಗಳನ್ನು ಪರಿಶೀಲಿಸಲಾಗುತ್ತದೆ ಎಂದರು.
ಪಂಚಪರಿವರ್ತನ್ (ಬದಲಾವಣೆಯ ಐದು ಅಂಶಗಳು) - ಜನರ ಭಾಗವಹಿಸುವಿಕೆ ಹೆಚ್ಚಿಸುವ ಯೋಜನೆಗಳ ಜೊತೆಗೆ ಕುಟುಂಬದ ಜಾಗೃತಿ, ಸಾಮಾಜಿಕ ಸಂಪರ್ಕ, ನಾಗರಿಕ ಜಾಗೃತಿ ಕುರಿತು ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಚರ್ಚೆಯಲ್ಲಿ ಭಾಗವಹಿಸುವರು. ಶತಮಾನೋತ್ಸವದ ಅಂಗವಾಗಿ 40 ವರ್ಷದೊಳಗಿನವರು ಮತ್ತು 40-60 ವರ್ಷದೊಳಗಿನವರಿಗೆ ವಿಶೇಷ ತರಗತಿ ನಡೆಯಲಿದೆ. ಈ ಸಭೆಯಲ್ಲಿಯೂ ಮೋಹನ್ ಭಾಗವತ್, ಹೊಸಬಾಳೆ ಮತ್ತು ಇತರ ಹಿರಿಯ ಮುಖಂಡರು ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆರ್ ಎಸ್ ಎಸ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರುತ್ತಿದ್ದಾರೆ ಎಂದು ಅಂಬೇಕರ್ ಹೇಳಿದರು.
Advertisement