
ಮಥುರಾ: ಉತ್ತರ ಪ್ರದೇಶದ ಮಥುರಾದ ಹಳ್ಳಿಯೊಂದರಲ್ಲಿ ಹೋಳಿ ಹಬ್ಬದಂದು ದಲಿತರಿಗೆ ಬಲವಂತವಾಗಿ ಬಣ್ಣ ಹಚ್ಚಿದ ಆರೋಪದ ಮೇಲೆ ಸುಮಾರು 42 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಹೋಳಿ ಆಡುವ ದಿನವಾದ ಧುಲೆಂಡಿಯಂದು ಜೈತ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಟಿ ಗ್ರಾಮದಲ್ಲಿ ಕೆಲವು ಮೇಲ್ಜಾತಿಯ ಯುವಕರು ಪರಿಶಿಷ್ಟ ಜಾತಿಯ ಜನರಿಗೆ ಬಣ್ಣ ಹಚ್ಚಲು ಬಲಪ್ರಯೋಗ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂದರ್ಭದಲ್ಲಿ ಎರಡೂ ಕಡೆಯವರು ಕೋಲುಗಳಿಂದ ಹೊಡೆದಾಡಿಕೊಂಡರು ಮತ್ತು ಕಲ್ಲು ತೂರಾಟ ನಡೆಸಿದರು. ಘಟನೆಯಲ್ಲಿ ಒಂದು ಡಜನ್ ಜನ ಗಾಯಗೊಂಡಿದ್ದಾರೆ.
ಘಟನೆ ನಂತರ ಪೊಲೀಸರು 32 ದಲಿತರ ವಿರುದ್ಧ ಪ್ರಕರಣ ದಾಖಲಿಸಿದ್ದರು ಮತ್ತು ಅವರಲ್ಲಿ ಒಂಬತ್ತು ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಶುಕ್ರವಾರ, ದಲಿತಪರ ಸಂಘಟನೆಗಳು, ಕಲೆಕ್ಟರೇಟ್ನಲ್ಲಿ ಧರಣಿ ನಡೆಸಿ, ಮೇಲ್ಜಾತಿಯವರ ವಿರುದ್ಧವೂ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.
ಬಾಟಿ ಗ್ರಾಮದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಶುಕ್ರವಾರ 42 ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ವೃತ್ತ ಅಧಿಕಾರಿ (ಸದರ್) ಸಂದೀಪ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
Advertisement