ಒಕ್ಕೂಟ ವ್ಯವಸ್ಥೆ ಅಪಾಯದಲ್ಲಿದೆ, ಕೇಂದ್ರದಿಂದ ನಮ್ಮ ಸಂಪನ್ಮೂಲ ಲೂಟಿ: ಡಿಕೆ ಶಿವಕುಮಾರ್
ಚೆನ್ನೈ/ಬೆಂಗಳೂರು: ಉದ್ದೇಶಿತ ಕ್ಷೇತ್ರ ಪುನರ್ ವಿಂಗಡಣೆ ನಿರ್ಣಯದಿಂದ ಒಕ್ಕೂಟ ವ್ಯವಸ್ಥೆ ಅಪಾಯದಲ್ಲಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.
ಇಂದು ಚೆನ್ನೈನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆದಿದ್ದ ಲೋಕಸಭಾ ಕ್ಷೇತ್ರಗಳ ವಿಂಗಡಣೆಯ ಕುರಿತ ಜಂಟಿ ಕ್ರಿಯಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿಕೆಶಿ, ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದರು.
ಕ್ಷೇತ್ರ ಪುನರ್ ವಿಂಗಡಣೆಯು, ಜನಸಂಖ್ಯೆಯನ್ನು ನಿಯಂತ್ರಿಸಿದ, ಸಾಕ್ಷರತೆಯನ್ನು ಸುಧಾರಿಸಲು ಮತ್ತು ಮಹಿಳೆಯರ ಸಬಲೀಕರಣಕ್ಕೆ ಯತ್ನಿಸಿದ ದಕ್ಷಿಣ ಭಾರತದ ರಾಜ್ಯಗಳ ಮೇಲಿನ ರಾಜಕೀಯ ದಾಳಿ ಎಂದು ಡಿಕೆ ಶಿವಕುಮಾರ್ ಟೀಕಿಸಿದರು.
"ನಮ್ಮ ಪ್ರಜಾಪ್ರಭುತ್ವದ ಅಡಿಪಾಯವೇ ಫೆಡರಲಿಸಂ. ಅದು ಈಗ ಅಪಾಯದಲ್ಲಿದೆ. ನಮ್ಮ ಫೆಡರಲ್ ಪ್ರಜಾಪ್ರಭುತ್ವದ ಸ್ತಂಭಗಳನ್ನು ಒಂದೊಂದಾಗಿ ಕಿತ್ತುಹಾಕಲಾಗುತ್ತಿದೆ" ಎಂದು ಕೇಂದ್ರದ ವಿರುದ್ಧ ಡಿಸಿಎಂ ವಾಗ್ದಾಳಿ ನಡೆಸಿದರು.
ಕ್ಷೇತ್ರ ಪುನರ್ ವಿಂಗಡಣೆ ಕೇವಲ ಲೋಕಸಭಾ ಕ್ಷೇತ್ರಗಳಿಗೆ ಸೀಮಿತವಲ್ಲ. ಇದು ಭಾರತದ ಒಕ್ಕೂಟ ವ್ಯವಸ್ಥೆಯ ಭವಿಷ್ಯದ ವಿಚಾರ. ಕೇಂದ್ರ ಸರ್ಕಾರ ಈ ಅವೈಜ್ಞಾನಿಕ ಸೂತ್ರದ ಮೇಲೆ ಕ್ಷೇತ್ರ ಮರು ವಿಂಗಣಣೆಗೆ ಮುಂದಾದರೆ ಒಕ್ಕೂಟ ವ್ಯವಸ್ಥೆಯ ಸಮತೋಲನವನ್ನೇ ಅಲುಗಾಡಿಸುತ್ತದೆ. ಅಲ್ಲದೆ ಜನಸಂಖ್ಯೆ ನಿಯಂತ್ರಣ ಮಾಡುವಲ್ಲಿ ವಿಫಲವಾದ ರಾಜ್ಯಗಳಿಗೆ ಹೆಚ್ಚಿನ ಶಕ್ತಿ ದೊರೆತಂತಾಗುತ್ತದೆ ಎಂದರು.
"ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಇತರ ದಕ್ಷಿಣ ರಾಜ್ಯಗಳು ಭಾರತದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ. ನಾವು ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ಆದರೂ, ಕೇಂದ್ರವು ಈಗ ನಮ್ಮ ಸಂಸದೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡಲು ಯೋಜಿಸುತ್ತಿದೆ. ಸಂಸತ್ತಿನಲ್ಲಿ ನಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ" ಎಂದರು.
ಕ್ಷೇತ್ರ ಪುನರ್ ವಿಂಗಡಣೆಗೆ ಜನಸಂಖ್ಯೆ ಮಾತ್ರವಲ್ಲದೇ, ಮಾನವ ಅಭಿವೃದ್ಧಿ, ತೆರಿಗೆ ಕೊಡುಗೆ, ಆಡಳಿತ, ಜನಸಂಖ್ಯೆ ನಿಯಂತ್ರಣದ ಸೂಚ್ಯಂಕಗಳ ಮಾನದಂಡಗಳ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಆಗಬೇಕು. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡುವುದಾದರೆ, 1971ರ ಜನಗಣತಿ ಆಧಾರದ ಮೇಲೆ ಮರುವಿಂಗಡಣೆ ಮಾಡಬೇಕು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಆಗ್ರಹಿಸಿದರು.
ಕೇಂದ್ರದಿಂದ ನಮ್ಮ ಸಂಪನ್ಮೂಲ ಲೂಟಿ
ಕರ್ನಾಟಕ ರಾಜ್ಯವು ಕೇಂದ್ರ ಸರ್ಕಾರದ ತೆರಿಗೆ ಆದಾಯದಲ್ಲಿ ವಾರ್ಷಿಕವಾಗಿ 4 ಲಕ್ಷ ಕೋಟಿ ರೂ. ಕೊಡುಗೆ ನೀಡುತ್ತಿದೆ. ಆದರೂ ಕೇಂದ್ರದಿಂದ ನಮಗೆ ಸಿಗುತ್ತಿರುವುದೇನು? ತೆರಿಗೆ ಹಂಚಿಕೆಯಲ್ಲಿ ಕೇವಲ 45 ಸಾವಿರ ಕೋಟಿ ಹಾಗೂ ಅನುದಾನದ ಮೂಲಕ 15 ಸಾವಿರ ಕೋಟಿ ಮಾತ್ರ. ಕರ್ನಾಟಕ ರಾಜ್ಯ ನೀಡುವ ಪ್ರತಿ ಒಂದು ರೂಪಾಯಿಗೆ ಕರ್ನಾಟಕ ರಾಜ್ಯಕ್ಕೆ ಮರಳಿ ಸಿಗುತ್ತಿರುವುದು ಕೇವಲ 13 ಪೈಸೆ ಮಾತ್ರ. ಇದು ಕೇವಲ ಆರ್ಥಿಕ ಅನ್ಯಾಯ ಮಾತ್ರವಲ್ಲ, ನಮ್ಮ ಸಂಪನ್ಮೂಲಗಳ ವ್ಯವಸ್ಥಿತ ಲೂಟಿ ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ