
ಬಲಿಯಾ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ನಂತರ ದೇಶದ ವಿವಿಧ ಭಾಗಗಳಲ್ಲಿ ಮುಸ್ಲಿಮರು ಮತ್ತು ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಸಮಾಜವಾದಿ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಕೇಂದ್ರ ಸರ್ಕಾರ ಪಹಲ್ಗಾಮ್ ಉಗ್ರ ದಾಳಿಯನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಅನ್ಸಾರಿ, ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇಂದು ಸನಾತನ್ ಪಾಂಡೆ ಅವರ ನಿವಾಸದಲ್ಲಿ ನಡೆದ ಕುಟುಂಬ ಸಮಾರಂಭದಲ್ಲಿ ಪಿಟಿಐ ಜೊತೆ ಮಾತನಾಡಿದ ಬಲಿಯಾ ಸಂಸದ ಅನ್ಸಾರಿ, ಈ ದಾಳಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಭದ್ರತಾ ವೈಫಲ್ಯದ ಪರಿಣಾಮವಾಗಿದೆ ಎಂದು ಹೇಳಿದರು.
"ಪಹಲ್ಗಾಮ್ ಘಟನೆಯು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ. ದಾಳಿಯ ಸ್ಥಳವು ಪಾಕಿಸ್ತಾನ ಗಡಿಯಿಂದ 150 ಕಿಲೋಮೀಟರ್ ದೂರದಲ್ಲಿದೆ. ಭಯೋತ್ಪಾದಕರು ಭಾರತದ ಅಷ್ಟು ದೂರದ ಪ್ರದೇಶವನ್ನು ತಲುಪಲು ಹೇಗೆ ಧೈರ್ಯ ಮಾಡಿದರು? ಇದು ಬಲವಾದ ಪ್ರತಿಕ್ರಿಯೆ ನೀಡುವ ಸಮಯ. ಭಾರತವು ಪ್ರತೀಕಾರ ತೀರಿಸಿಕೊಳ್ಳಬೇಕು ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು(ಪಿಒಕೆ) ತನ್ನದಾಗಿಸಿಕೊಳ್ಳಬೇಕು" ಎಂದು ಅನ್ಸಾರಿ ಆಗ್ರಹಿಸಿದರು.
ಪಂಜಾಬ್ನ ಪಟಿಯಾಲದಲ್ಲಿ ಬಲಪಂಥೀಯ ಗುಂಪುಗಳ ದಾಳಿಗಳು ಮತ್ತು ಹರಿಯಾಣದಲ್ಲಿ ಮುಸ್ಲಿಂ ಒಡೆತನದ ಅಂಗಡಿಗಳ ಧ್ವಂಸವನ್ನು ಉಲ್ಲೇಖಿಸಿ, ಮುಸ್ಲಿಮರು ಮತ್ತು ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧದ ಇತ್ತೀಚಿನ ಹಿಂಸಾಚಾರ ಘಟನೆಗಳನ್ನು ಅವರು ಖಂಡಿಸಿದರು.
ವಿದೇಶಿ ಭಯೋತ್ಪಾದಕರು ಮತ್ತು ಭಾರತದಲ್ಲಿ ಕೋಮು ದ್ವೇಷ ಹರಡುವವರು ಇಬ್ಬರೂ ಒಂದೇ ರೀತಿಯ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಅನ್ಸಾರಿ ಟೀಕಿಸಿದರು.
"ಪಾಕಿಸ್ತಾನದಿಂದ ಅಮಾಯಕ ನಾಗರಿಕರನ್ನು ಕೊಲ್ಲಲು ಬರುವ ಭಯೋತ್ಪಾದಕರು ಮತ್ತು ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಭಾರತದಲ್ಲಿ ದ್ವೇಷ ಹರಡಲು ಯತ್ನಿಸುವವರು ಒಂದೇ ರೀತಿಯ ಮನಸ್ಥಿತಿಯನ್ನು ಹೊಂದಿದ್ದಾರೆ. ಈ ದೇಶದ ಜನರು ಅವರನ್ನು ಗುರುತಿಸಲು ಆರಂಭಿಸಿದ್ದಾರೆ" ಎಂದರು.
Advertisement