ಉಗ್ರರ ಮನೆ ನೆಲಸಮ; ಪ್ರತೀಕಾರಕ್ಕೆ TRF ಮುಂದು: ಕಾಶ್ಮೀರಿ ಪಂಡಿತರು-ಮುಸ್ಲಿಮೇತರ ವಲಸೆ ಕಾರ್ಮಿಕರ ಮೇಲೆ ದಾಳಿಗೆ ಸಂಚು; ಗುಪ್ತಚರ ದಳ ಎಚ್ಚರಿಕೆ

ಪಹಲ್ಗಾಮ್ ಉಗ್ರರ ದಾಳಿ ಬಳಿಕ ಸಕ್ರಿಯ ಭಯೋತ್ಪಾದಕರಿಗೆ ಸಂಬಂಧಿಸಿದ ಒಂಬತ್ತು ಮನೆಗಳನ್ನು ಭಾರತೀಯ ಸೇನಾಪಡೆ ಧ್ವಂಸಗೊಳಿಸಿತ್ತು.
ಪಹಲ್ಗಾಮ್
ಪಹಲ್ಗಾಮ್
Updated on

ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೇ ಉಗ್ರರ ಮನೆಗಳನ್ನು ಕೆಡವಿ ಭಾರತೀಯ ಸೇನೆ ಕೈಗೊಂಡ ದಿಟ್ಟ ಕ್ರಮ ಉಗ್ರರ ಕಣ್ಣು ಕೆಂಪಾಗುವಂತೆ ಮಾಡಿದ್ದು, ಪ್ರತೀಕಾರವಾಗಿ ಕಾಶ್ಮೀರಿ ಪಂಡಿತರು-ಮುಸ್ಲಿಮೇತರ ವಲಸೆ ಕಾರ್ಮಿಕರ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದಾರೆಂದು ಗುಪ್ತಚರ ದಳ ಎಚ್ಚರಿಕೆ ನೀಡಿದೆ.

ಪಹಲ್ಗಾಮ್ ಉಗ್ರರ ದಾಳಿ ಬಳಿಕ ಸಕ್ರಿಯ ಭಯೋತ್ಪಾದಕರಿಗೆ ಸಂಬಂಧಿಸಿದ ಒಂಬತ್ತು ಮನೆಗಳನ್ನು ಭಾರತೀಯ ಸೇನಾಪಡೆ ಧ್ವಂಸಗೊಳಿಸಿತ್ತು. ಇದಕ್ಕೆ ಪಾಕಿಸ್ತಾನದ ಮೂಲದ ನಿಷೇಧಿತ ಸಂಘಟನೆ ಲಷ್ಕರ್-ಇ-ತೊಯ್ಬಾ (ಎಲ್‌ಇಟಿ)ದ ಅಂಗ ಸಂಘಟನೆಯಾಗಿರುವ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಉಗ್ರರ ಈ ಗುಂಪಿನಲ್ಲಿ ಅಫ್ಘಾನಿಸ್ತಾನದಲ್ಲಿ ಯುದ್ಧಭೂಮಿ ಅನುಭವ ಹೊಂದಿರುವ ವಿದೇಶಿ ಭಯೋತ್ಪಾದಕರೂ ಸೇರಿದ್ದಾರೆ ಎಂದು ವರದಿಯಾಗಿದೆ,

ಈಗಾಗಲೇ ಪಾಕಿಸ್ತಾನ ಮೂಲದ ಉಗ್ರರು ಕಾಶ್ಮೀರಕ್ಕೆ ನುಸುಳಿದ್ದು, ದಾಳಿಗೆ ಸಂಚು ರೂಪಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಉಗ್ರ ಸಂಘಟನೆ, ಇದೇ ರೀತಿಯ ಕ್ರಮ ಕೈಗೊಳ್ಳುತ್ತಿದ್ದರೆ, ಮುಂದೆ ಮತ್ತಷ್ಟು ದಾಳಿಗಳನ್ನು ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಪಹಲ್ಗಾಮ್
ಪಹಲ್ಗಾಮ್ ದಾಳಿಯಿಂದ ಮತ್ತಷ್ಟು ಹಳಸಿದ ಇಂಡೋ-ಪಾಕ್ ಸಂಬಂಧ: ಸಂಘರ್ಷ ಹೆಚ್ಚಿಸದಂತೆ ಉಭಯ ರಾಷ್ಟ್ರಗಳಿಗೆ ಅಮೆರಿಕಾ ಒತ್ತಾಯ

ನಮ್ಮ ಮನೆಗಳನ್ನು ನಾಶಮಾಡ್ತೀರಾ, ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಕಾಶೀರದಲ್ಲಿ ನಮ ಮನೆಗಳನ್ನು ನಾಶ ಮಾಡುತ್ತಿರುವ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ನಲ್ಲಿರುವ ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್.22 ರಂದು ದಾಳಿ ನಡೆಸಿ 26 ಮಂದಿ ಪ್ರವಾಸಿಗರನ್ನು ಹತ್ಯೆಗೈದಿದ್ದರು. ಉಗ್ರರು ಹಿಂದೂಗಳ ಮೇಲೆ ದಾಳಿ ನಡೆಸಿದ್ದರು. ಮೊದಲು ಟಿಆರ್‌ಎಫ್‌ ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಭಾರತದ ದಿಟ್ಟ ಕ್ರಮಗಳ ನಂತರ ಬೆದರಿದ್ದ ಸಂಘಟನೆ ಉಲ್ಟಾ ಹೊಡೆದಿತ್ತು. ಯಾರೋ ನಮ್ಮ ವೆಬ್‌ಸೈಟ್‌‍ ಹ್ಯಾಕ್‌ ಮಾಡಿದ್ದಾರೆ. ನಮಗೂ ದಾಳಿಗೂ ಸಂಬಂಧವೇ ಇಲ್ಲ ಎಂದು ಹೇಳಿತ್ತು.

ಇದೀಗ ಅದರ ಕಮಾಂಡರ್‌ ಅಹ್ಮದ್‌ ಸಲಾರ್‌ ಮಾಡಿದ್ದಾನೆನ್ನಲಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ.

ಪಹಲ್ಗಾಮ್‌ ದಾಳಿಯಲ್ಲಿ ಟಿಅರ್‌ಎಫ್‌ ಸಂಘಟನೆಯ ಯಾವ ಸದಸ್ಯನೂ ಭಾಗಿಯಾಗಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ. ಆದರೂ ನಮ್ಮ ಮನೆಗಳನ್ನು ಕೆಡುವುತ್ತಿರುವುದನ್ನು ನೋಡಿಕೊಂಡು ಸುಮನಿರಲು ಸಾಧ್ಯವಿಲ್ಲ ಎಂದು ಆತ ಹೇಳಿರುವುದು ಕಂಡು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com