
ಅಹಮದಾಬಾದ್: ಅಹಮದಾಬಾದ್ನ ಚಂದೋಲಾ ಸರೋವರದ ಬಳಿಯ ನೆಲಸಮ ಕಾರ್ಯಾಚರಣೆಯನ್ನು ಬಿಜೆಪಿ ಶಾಸಕ ಪ್ರದ್ಯುಮಾನ್ಸಿನ್ಹ ಜಡೇಜಾ ತೀವ್ರವಾಗಿ ಖಂಡಿಸಿದ್ದಾರೆ. ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು ಅಬ್ದಾಸ ಗಡಿ ಕ್ಷೇತ್ರದಲ್ಲಿ ಬಡವರಿಗೆ ಕಿರುಕುಳ ಮತ್ತು "ಅಧಿಕಾರಿ ರಾಜ್" ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಅಬ್ದಾಸ ಶಾಸಕ ಜಡೇಜಾ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಗೃಹ ಸಚಿವ ಹರ್ಷ ಸಾಂಘ್ವಿ, ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಮತ್ತು ಕಚ್ ಉಸ್ತುವಾರಿ ಸಚಿವ ಪ್ರಫುಲ್ ಪನ್ಸೇರಿಯಾ ಅವರಿಗೆ ಪತ್ರ ಬರೆದಿದ್ದು, ಸರ್ಕಾರಿ ಅಧಿಕಾರಿಗಳು ಬಡವರನ್ನು ಅನ್ಯಾಯವಾಗಿ ಗುರಿಯಾಗಿಸಲು ಅಭಿಯಾನವನ್ನು ಬಳಸುತ್ತಿದ್ದಾರೆ. ಆದರೆ ಬಿಲ್ಡರ್ಗಳು ಮತ್ತು ಭೂ ಮಾಫಿಯಾಗಳ ಅಕ್ರಮ ಅತಿಕ್ರಮಣಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳನ್ನು ಕಡೆಗಣಿಸುತ್ತಿದ್ದಾರೆ. ತಮ್ಮ ಕ್ಷೇತ್ರದಲ್ಲಿ "ಅಧಿಕಾರಿ ರಾಜ್" ಚಾಲ್ತಿಯಲ್ಲಿದೆ ಎಂದು ಜಡೇಜಾ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ದೊಡ್ಡ ನಗರಗಳಲ್ಲಿ ಬೆಲೆಬಾಳುವ ಭೂಮಿಯ ಮೇಲಿನ ಅತಿಕ್ರಮಣವನ್ನು ತೆರವುಗೊಳಿಸುವ ಅಭಿಯಾನವನ್ನು ಪ್ರಾರಂಭಿಸುವುದು ಸರಿಯಾದ ಕ್ರಮ, ಆದರೆ ಅಬ್ದಾಸ ವಿಧಾನಸಭಾ ಕ್ಷೇತ್ರದಲ್ಲಿ ಸಣ್ಣ ಮತ್ತು ಬಡ ಜನರ ಅತಿಕ್ರಮಣವನ್ನು ತೆರವುಗೊಳಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಕರೆ ನೀಡಿದ ಜಡೇಜಾ, ಸರ್ಕಾರದ ಆದ್ಯತೆಗಳನ್ನು ಪ್ರಶ್ನಿಸಿದರು ಮತ್ತು ಗಡಿ ಸಮುದಾಯಗಳ ದುರ್ಬಲತೆಯನ್ನು ಎತ್ತಿ ತೋರಿಸಿದರು. ಅಪರಾಧಿಗಳಿಂದ ಅತಿಕ್ರಮಣವನ್ನು ತೆಗೆದುಹಾಕುವುದು ಸರಿ, ಆದರೆ ವರ್ಷಗಳಿಂದ ಸಣ್ಣ ಪ್ರಕರಣಗಳನ್ನು ಎದುರಿಸುತ್ತಿರುವ ಮತ್ತು ಈಗ ಶಾಂತಿಯುತ, ಸಾಮಾಜಿಕ ಜೀವನವನ್ನು ನಡೆಸುತ್ತಿರುವ ವ್ಯಕ್ತಿಗಳಿಗೆ ನೋಟಿಸ್ ನೀಡುವುದು ಅಥವಾ ಅತಿಕ್ರಮಣವನ್ನು ತೆರವುಗೊಳಿಸುವುದು ನ್ಯಾಯವಲ್ಲ. ಇದು ಮಾನಸಿಕ ಕಿರುಕುಳವಲ್ಲದೆ ಬೇರೇನೂ ಅಲ್ಲ ಎಂದು ಅವರು ಹೇಳಿದರು.
Advertisement