
ನವದೆಹಲಿ: ಪಾಕಿಸ್ತಾನಿ ಮಹಿಳೆಯೊಂದಿಗಿನ ತನ್ನ ವಿವಾಹವನ್ನು "ಮುಚ್ಚಿಟ್ಟಿದ್ದಕ್ಕಾಗಿ" ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್)ಯ ಜವಾನ್ ಮುನೀರ್ ಅಹ್ಮದ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.
ದೇಶದ ಪ್ರಮುಖ ಆಂತರಿಕ ಭದ್ರತಾ ಪಡೆ ಪ್ಯಾರಾಮಿಲಿಟರಿ ಸಿಆರ್ಪಿಎಫ್ನ 41ನೇ ಬೆಟಾಲಿಯನ್ನಲ್ಲಿ ಮುನೀರ್ ಅವರನ್ನು ನಿಯೋಜಿಸಲಾಗಿತ್ತು.
ತನಿಖೆ ನಡೆಸುವ ಅಗತ್ಯವಿಲ್ಲದ ನಿಯಮಗಳ ಅಡಿಯಲ್ಲಿ ಮುನೀರ್ ಅವರನ್ನು "ಸೇವೆಯಿಂದ ವಜಾಗೊಳಿಸಲಾಗಿದೆ" ಎಂದು ಅಧಿಕೃತ ಮೂಲಗಳು ಪಿಟಿಐಗೆ ತಿಳಿಸಿವೆ.
ಪಾಕಿಸ್ತಾನಿ ಪ್ರಜೆಯೊಂದಿಗಿನ ತನ್ನ ವಿವಾಹವನ್ನು ಮರೆಮಾಚಿದ್ದಕ್ಕಾಗಿ ಮತ್ತು ಆಕೆಯ ವೀಸಾದ ಅವಧಿ ಮೀರಿದ್ದರೂ ಆಕೆಗೆ ಆಶ್ರಯ ನೀಡಿದ್ದಕ್ಕಾಗಿ ಮುನೀರ್ ಅಹ್ಮದ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
"ಮುನೀರ್ ಕ್ರಮ ಸೇವಾ ನಡವಳಿಕೆಯ ಉಲ್ಲಂಘನೆ ಮತ್ತು ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವೆಂದು ಕಂಡುಬಂದಿದೆ" ಎಂದು ಸಿಆರ್ಪಿಎಫ್ ವಕ್ತಾರ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್(ಡಿಐಜಿ) ಎಂ. ದಿನಕರನ್ ತಿಳಿಸಿದ್ದಾರೆ.
26 ಪ್ರವಾಸಿಗರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ತೆಗೆದುಕೊಂಡ ರಾಜತಾಂತ್ರಿಕ ಕ್ರಮಗಳ ಭಾಗವಾಗಿ ಭಾರತ ತೊರೆಯುವಂತೆ ಪಾಕಿಸ್ತಾನಿ ಪ್ರಜೆಗಳಿಗೆ ಸೂಚಿಸಿದ ನಂತರ ಮುನೀರ್ ಅಹ್ಮದ್ ಅವರು ಪಾಕಿಸ್ತಾನದ ಮೆನಾಲ್ ಖಾನ್ ಅವರೊಂದಿಗೆ ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಕಳೆದ ವರ್ಷ ಮೇ 24 ರಂದು ವಿಡಿಯೋ ಕರೆಯ ಮೂಲಕ ಇಬ್ಬರೂ ವಿವಾಹವಾಗಿದ್ದರು.
ಸಿಆರ್ಪಿಎಫ್ ತನಿಖೆಯಲ್ಲಿ ಜವಾನ ಮುನೀರ್ ತನ್ನ ವಿವಾಹ ಮತ್ತು ಪತ್ನಿ ಭಾರತದಲ್ಲಿ ದೀರ್ಘಕಾಲ ಉಳಿದುಕೊಂಡಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ "ಮಾಹಿತಿ ನೀಡಿಲ್ಲ" ಎಂಬುದು ಕಂಡುಬಂದಿದೆ.
Advertisement