
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಎರಡು ವರ್ಷಗಳಲ್ಲಿ ಒಮ್ಮೆಯೂ ಮಣಿಪುರಕ್ಕೆ ಭೇಟಿ ನೀಡದೆ 'ರಾಜಧರ್ಮ'ವನ್ನು ಎತ್ತಿಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಎರಡು ವರ್ಷಗಳಿಂದ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಕಾಲಿಡದೆ 'ರಾಜಧರ್ಮ'ವನ್ನು ಮರೆತಿದ್ದಾರೆ ಎಂದು ಖರ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಣಿಪುರದಲ್ಲಿ ಮೇ 3, 2023 ರಂದು ಹಿಂಸಾಚಾರ ಆರಂಭವಾಯಿತು ಮತ್ತು ಇನ್ನೂ ಮುಂದುವರೆದಿದೆ. ಕೇವಲ ಎರಡು ದಿನಗಳ ಹಿಂದೆ, ತಮೆಂಗ್ಲಾಂಗ್ ಜಿಲ್ಲೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 25 ಜನ ಗಾಯಗೊಂಡಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
ಹಿಂಸಾಚಾರದಲ್ಲಿ ಇದುವರೆಗೆ 260ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಮತ್ತು 68,000 ಜನ ಸ್ಥಳಾಂತರಗೊಂಡಿದ್ದಾರೆ ಮತ್ತು ಸಾವಿರಾರು ಜನ ಇನ್ನೂ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
"ನರೇಂದ್ರ ಮೋದಿ ಅವರೇ, ಮಣಿಪುರ ನಿಮ್ಮ ಭೇಟಿಗಾಗಿ, ಶಾಂತಿ ಮತ್ತು ಸಾಮಾನ್ಯ ಸ್ಥಿತಿಗೆ ಮರಳಲು ಕಾಯುತ್ತಿರುವಾಗ, ನಾವು ನಿಮಗೆ 3 ಪ್ರಮುಖ ಪ್ರಶ್ನೆಗಳನ್ನು ಕೇಳಲು ಬಯಸುತ್ತೇವೆ" ಎಂದು ಖರ್ಗೆ ಪೋಸ್ಟ್ ಮಾಡಿದ್ದಾರೆ.
"ಮಣಿಪುರದಲ್ಲಿ ಜನವರಿ 2022 ರಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ನೀವು ಕಾಣಿಸಿಕೊಂಡಿದ್ದೇ ಕೊನೆ. ಜಗತ್ತಿನಾದ್ಯಂತ 44 ವಿದೇಶಗಳಿಗೆ ಭೇಟಿ ನೀಡಲು ಮತ್ತು ದೇಶಾದ್ಯಂತ 250 ಕಡೆ ಭೇಟಿ ನೀಡಲು ನಿಮಗೆ ಸಮಯ ಇದೆ. ಆದರೆ ಮಣಿಪುರಕ್ಕೆ ಭೇಟಿ ನೀಡಲು ಸಮಯ ಇಲ್ಲವೇ? ಆ ರಾಜ್ಯದಲ್ಲಿ ಇಷ್ಟು ಹಿಂಸಾಚಾರ, ರಾಜಕೀಯ ಬೆಳವಣಿಗೆ, ಕೋಮು ಸಂಘರ್ಷ ನಡೆದರೂ ಮಣಿಪುರದ ಜನರ ಬಗ್ಗೆ ಈ ನಿರಾಸಕ್ತಿ ಮತ್ತು ತಿರಸ್ಕಾರ ಏಕೆ? ರಾಜಕೀಯ ಹೊಣೆಗಾರಿಕೆ ಎಲ್ಲಿದೆ" ಎಂದು ಕಾಂಗ್ರೆಸ್ ಅಧ್ಯಕ್ಷರು ಪ್ರಶ್ನಿಸಿದ್ದಾರೆ.
"ಡಬಲ್ ಎಂಜಿನ್ ಸರ್ಕಾರ ಇದ್ದರೂ ಜನರಿಗೆ ಭದ್ರತೆ ಮತ್ತು ಸುರಕ್ಷತೆಯನ್ನು ಒದಗಿಸುವ ಸಾಂವಿಧಾನಿಕ ಕರ್ತವ್ಯದಲ್ಲಿ ಏಕೆ ವಿಫಲವಾಯಿತು? ನೀವು ಮೊದಲೇ ಮುಖ್ಯಮಂತ್ರಿಯನ್ನು ಏಕೆ ವಜಾಗೊಳಿಸಲಿಲ್ಲ? ನಿಮ್ಮ ಡಬಲ್ ಅಸಾಲ್ಟ್ ಸರ್ಕಾರದಿಂದ ಇನ್ನೂ ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಾಗಿಲ್ಲ. ಈಗ ಗೃಹ ಸಚಿವಾಲಯದ ಆಡಳಿತ ಜಾರಿಯಲ್ಲಿದ್ದರೂ, ಹಿಂಸಾಚಾರದ ಘಟನೆಗಳು ನಿಂತಿಲ್ಲ" ಎಂದು ಖರ್ಗೆ ಕಿಡಿ ಕಾರಿದ್ದಾರೆ.
Advertisement