
ಹುಬ್ಬಳ್ಳಿ: ಆರ್ಎಸ್ಎಸ್ ಮತ್ತು ಸಂಘ ಪರಿವಾರಗಳು ಆರಂಭದಿಂದಲೂ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತಲೇ ಬಂದಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಗುರುವಾರ ಹೇಳಿದರು.
ಹುಬ್ಬಳ್ಳಿಯ ಗಿರಣಿಚಾಲ ಮೈದಾನದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಜಾತಿ ಆಧಾರಿತ ಮೀಸಲಾತಿಯನ್ನು ವಿರೋಧಿಸುತ್ತಿದ್ದರು ಎಂಬ ಬಿಜೆಪಿ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾವು ಜಾತಿ ಜನಗಣತಿಯನ್ನು ವಿರೋಧಿಸುತ್ತಿರುವುದಾದರೆ ಎರಡು ವರ್ಷಗಳ ಹಿಂದೆ ಜಾತಿ ಜನಗಣತಿಯನ್ನು ಕೋರಿ ಕೇಂದ್ರಕ್ಕೆ ಏಕೆ ಪತ್ರ ಬರೆಯುತ್ತಿದ್ದೆವು? ಬಿಜೆಪಿ ಜನರ ಕಲ್ಯಾಣದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತದೆ ಎಂದು ನಟಿಸುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಆದರೆ, ಅದು ನಕಲಿ. ಅವರು (ಬಿಜೆಪಿ) ಅದನ್ನು ರಾಜಕೀಯಕ್ಕಾಗಿ ಮಾಡುತ್ತಿದ್ದಾರೆಂದು ಕಿಡಿಕಾರಿದರು.
ಏಪ್ರಿಲ್ 16, 2023 ರಂದು ರಾಷ್ಟ್ರೀಯ ಜನಗಣತಿಯ ಜೊತೆಗೆ ಜಾತಿ ಜನಗಣತಿಗೆ ಮನವಿ ಮಾಡಿದಾಗ ಕೇಂದ್ರವು ಜಾತಿ ಜನಗಣತಿಗೆ ಒಪ್ಪಿರಲಿಲ್ಲ. ಈಗ ಜಾತಿ ಜನಗಣತಿಯನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ಒಳ್ಳೆಯ ವಿಚಾರ, ಇದನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆಂದು ಹೇಳಿದರು.
ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ತಂದರು, ಆದರೆ, ಆಗ ಎಲ್ಲರೂ ಅದರ ಬಗ್ಗೆ ಗದ್ದಲ ಎಬ್ಬಿಸಿದರು... ನೆಹರೂ ಅದನ್ನು ಬೆಂಬಲಿಸಿದ್ದರು. ನಾವು ಸಿದ್ಧಾಂತದೊಂದಿಗೆ ಕೆಲಸ ಮಾಡುತ್ತೇವೆ, ಆದರೆ ಬಿಜೆಪಿ ಮೂಲತಃ ಮೀಸಲಾತಿಯ ಕಲ್ಪನೆಯನ್ನು ವಿರೋಧಿಸುತ್ತದೆ. ಅವರು (ಮೋದಿ ಸರ್ಕಾರ) ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಜೊತೆಗೆ ಜನಗಣತಿಯನ್ನು ಮಾಡಬೇಕು ಎಂದು ಆಗ್ರಹಿಸಿದರು.
Advertisement