
ಬೆಂಗಳೂರು: ದೇಶಾದ್ಯಂತ ಜಾತಿ ಸಮೀಕ್ಷೆಗೆ ಕೇಂದ್ರ ಸರ್ಕಾರ ಮೀಸಲಿಟ್ಟಿರುವ ಬಜೆಟ್ ಸಾಕಾಗುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಹೇಳಿದ್ದಾರೆ.
ಬಿಬಿಎಂಪಿ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ಸಾಮಾಜಿಕ ಸಮೀಕ್ಷೆ ನಡೆಸಿತ್ತು. ಅದಕ್ಕೆ ರೂ.168 ಕೋಟಿ ವೆಚ್ಚ ಮಾಡಿತ್ತು, ಅದೂ ಹತ್ತು ವರ್ಷಗಳ ಹಿಂದೆ. ಆದರೆ, ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಜಾತಿಗಣತಿ ನಡೆಸಲು ರೂ.515 ಕೋಟಿ ತೆಗೆದಿರಿಸಿದೆ. ಉತ್ತರ ಪ್ರದೇಶ ಒಂದರಲ್ಲಿ ಜಾತಿಗಣತಿ ನಡೆಸಲೂ ಈ ಹಣ ಸಾಲುವುದಿಲ್ಲ ಎಂದು ವ್ಯಂಗ್ಯವಾಡಿದರು.
ಜಾತಿ ಗಣತಿ ನಡೆಸುವ ಸಂಬಂಧ ಸರ್ಕಾರಕ್ಕೆ ನಿಜವಾದ ಆಸಕ್ತಿ ಇದ್ದಿದ್ದರೆ, ಅವರು ಬಜೆಟ್ನಲ್ಲಿಯೇ ಅನುದಾನ ತೆಗೆದಿರಿಸುತ್ತಿದ್ದರು. ಹಾಗೆ ಮಾಡಿಲ್ಲ. ಈಗ ತರಾತುರಿಯಲ್ಲಿ ಜಾತಿಗಣತಿಯನ್ನು ಘೋಷಿಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಸಬಲೀಕರಣದ ಬಗ್ಗೆ ಮೋದಿ ಅವರಿಗೆ ನಿಜವಾದ ಕಾಳಜಿ ಇದ್ದರೆ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಸರ್ಕಾರವು ಸೆಪ್ಟೆಂಬರ್ 2010 ರಲ್ಲಿ, ಡಾ. ಮನಮೋಹನ್ ಸಿಂಗ್ ಅವರ ಸಂಪುಟದಲ್ಲಿ ಕೇಂದ್ರ ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಸಮೀಕ್ಷೆಯನ್ನು ಪ್ರಾರಂಭಿಸಿತು, ಆದರೆ, ಬಿಜೆಪಿ ಆ ವರದಿಯನ್ನು ಬಿಡುಗಡೆ ಮಾಡಲಿಲ್ಲ. ಮೀಸಲಾತಿ ಮೇಲೆ ಈಗ ಶೇ 50ರ ಮಿತಿ ಇದೆ. ಮೊದಲು ಅದನ್ನು ತೆಗೆದುಹಾಕಿ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ದೊರೆಯುವಂತೆ ಮಾಡಲು ಸಂವಿಧಾನದಲ್ಲಿ ಅವಕಾಶವನ್ನು ನಮ್ಮ ಸರ್ಕಾರವಿದ್ದಾಗ ಕಲ್ಪಿಸಿದ್ದೆವು. ಅದನ್ನು ಮೋದಿ ಅವರ ಸರ್ಕಾರ ಜಾರಿಗೆ ತರಲಿ’ ಎಂದು ಆಗ್ರಹಿಸಿದರು.
ಇದರ ಜೊತೆಗೆ ಖಾಸಗಿ ವಲಯದಲ್ಲಿ ಎಸ್ಸಿ ಮತ್ತು ಎಸ್ಟಿಗಳಿಗೆ ಮೀಸಲಾತಿ ಮತ್ತು ಲೋಕಸಭೆ ಮತ್ತು ರಾಜ್ಯಸಭೆ, ರಾಜ್ಯ ವಿಧಾನಸಭೆಗಳು ಮತ್ತು ಚುನಾಯಿತ ಸಂಸ್ಥೆಗಳಲ್ಲಿ ಉದ್ಯೋಗಗಳು ಮತ್ತು ಸ್ಥಾನಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಪರಿಶೀಲನೆ ಮಾಡಲಿ ಎಂದು ಒತ್ತಾಯಿಸಿದರು.
Advertisement