
ಲಖನೌ: ಏಪ್ರಿಲ್ 22 ರಂದು 26 ಪ್ರವಾಸಿಗರನ್ನು ಬಲಿ ಪಡೆದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಮೋದಿ ಸರ್ಕಾರದ ನಿಷ್ಕ್ರಿಯತೆಯನ್ನು ಖಂಡಿಸಿದ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ, ನಿಂಬೆ ಹಣ್ಣು ಮತ್ತು ಮೆಣಸಿನಕಾಯಿ ಕಟ್ಟಿದ ಆಟಿಕೆ ರಫೇಲ್ ಫೈಟರ್ ಜೆಟ್ ಬಳಸಿ ಸೋಮವಾರ ಕೇಂದ್ರವನ್ನು ಅಣಕಿಸಿದ್ದಾರೆ.
ಭಾನುವಾರ ಆಟಿಕೆ ಜೆಟ್ ಅನ್ನು ಮೊದಲು ಪ್ರದರ್ಶಿಸಿದ್ದ ರೈ, ಇಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದು, ಇದು ಕೇಂದ್ರ ಸರ್ಕಾರದ ನಿಷ್ಕ್ರಿಯತೆಯ ಬಗ್ಗೆ ಸಾರ್ವಜನಿಕ ಹತಾಶೆಯನ್ನು ಸಂಕೇತಿಸುವ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
"ನಾನು ಕೇಳುತ್ತಿದ್ದೇನೆ - ರಫೇಲ್ ಯಾವಾಗ ತನ್ನ ಕೆಲಸವನ್ನು ಮಾಡುತ್ತದೆ? ಉಗ್ರ ದಾಳಿಗೆ ದೇಶ ಪ್ರತಿಕ್ರಿಯೆಯನ್ನು ಬಯಸುತ್ತದೆ" ಎಂದು ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಫ್ರಾನ್ಸ್ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ 2019 ರ 'ಶಾಸ್ತ್ರ ಪೂಜೆ'ಯನ್ನು ಉಲ್ಲೇಖಿಸಿ ರೈವ್ ಈ ರೀತಿ ಅಣಕಿಸಿದ್ದಾರೆ. ರಾಜನಾಥ್ ಸಿಂಗ್ ಅವರು ರಫೇಲ್ ಜೆಟ್ನ ಚಕ್ರಗಳ ಕೆಳಗೆ ನಿಂಬೆಹಣ್ಣುಗಳನ್ನು ಇಟ್ಟು ತೆಂಗಿನಕಾಯಿಯನ್ನು ಒಡೆದು ಭಾರತಕ್ಕೆ ಹಾರಿಸಿದ್ದರು. ಹಿಂದೂ ಸಂಪ್ರದಾಯದಲ್ಲಿ, ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳು ದುಷ್ಟಶಕ್ತಿಗಳನ್ನು ನಿವಾರಿಸುತ್ತವೆ ಎಂದು ನಂಬಲಾಗಿದೆ.
ಕೇಂದ್ರದ "ದೊಡ್ಡ ಮಾತು ಮತ್ತು ಯಾವುದೇ ಕ್ರಮ ಕೈಗೊಳ್ಳದ" ನಿಲುವನ್ನು ಟೀಕಿಸಿದ ರೈ, "ಪಹಲ್ಗಾಮ್ನಲ್ಲಿ ನಮ್ಮ ಯುವಕರು ಕೊಲ್ಲಲ್ಪಟ್ಟರು, ಆದರೆ ರಫೇಲ್ ಜೆಟ್ಗಳು ಇನ್ನೂ ನಿಂಬೆ ಹಣ್ಣು ಮತ್ತು ಮೆಣಸಿನಕಾಯಿಗಳೊಂದಿಗೆ ಹ್ಯಾಂಗರ್ಗಳಲ್ಲಿವೆ. ಸಂತ್ರಸ್ತರ ಕುಟುಂಬಗಳು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿವೆ. ಸರ್ಕಾರದಿಂದ ಈ ಮೌನ ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದಿದ್ದಾರೆ.
ಭಯೋತ್ಪಾದನೆ ಅಥವಾ ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ಯಾವುದೇ ಕ್ರಮವನ್ನು ಕಾಂಗ್ರೆಸ್ ಸಂಪೂರ್ಣವಾಗಿ ಬೆಂಬಲಿಸುತ್ತದೆಯಾದರೂ, ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ರೈ ಹೇಳಿದ್ದಾರೆ.
Advertisement