
ಜೈಪುರ: ಲಂಚ ಪಡೆಯುತ್ತಿದ್ದಾಗ ರಾಜಸ್ಥಾನ ಶಾಸಕ ಜೈಕೃಷ್ಣ ಪಟೇಲ್ ಅವರನ್ನು ರಾಜಸ್ಥಾನ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.
ಜೈಪುರದ ತಮ್ಮ ಅಧಿಕೃತ ನಿವಾಸದಲ್ಲಿ 20 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಭಾರತ್ ಆದಿವಾಸಿ ಪಕ್ಷದ ಶಾಸಕ ಜೈಕೃಷ್ಣ ಪಟೇಲ್ ಅವರನ್ನು ಬಂಧಿಸಿದೆ. ಕರೌಲಿ ಜಿಲ್ಲೆಯ ತೋಡಾಭಿಮ್ ಬ್ಲಾಕ್ನ ಗಣಿ ಮಾಲೀಕರ ದೂರಿನ ಮೇರೆಗೆ ಬಂಧಿಸಲಾಗಿದೆ.
ರಾಜಸ್ಥಾನ ವಿಧಾನಸಭೆಯ ಹಿಂದಿನ ಅಧಿವೇಶನಕ್ಕೆ ಸಲ್ಲಿಸಲಾಗಿದ್ದ ತೋಡಾಭಿಮ್ ಪ್ರದೇಶದಲ್ಲಿ ಗಣಿಗಾರಿಕೆ ಗುತ್ತಿಗೆಗಳಿಗೆ ಸಂಬಂಧಿಸಿದ ಮೂರು ಪ್ರಶ್ನೆಗಳನ್ನು ಕೇಳದಿರಲು ಪಟೇಲ್ ದೂರುದಾರರಿಂದ 2 ಕೋಟಿ ರೂ. ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಇವುಗಳಲ್ಲಿ ಎರಡು ಪ್ರಶ್ನೆಗಳು ನಕ್ಷತ್ರ ಚಿಹ್ನೆಯ ಪ್ರಶ್ನೆಗಳಾಗಿದ್ದು, ಸಂಬಂಧಪಟ್ಟ ಸಚಿವರಿಂದ ಮೌಖಿಕ ಉತ್ತರಗಳ ಅಗತ್ಯವಿತ್ತು ಮತ್ತು ಒಂದು ನಕ್ಷತ್ರ ಚಿಹ್ನೆಯಿಲ್ಲದ ಪ್ರಶ್ನೆಯಾಗಿತ್ತು.
2024 ರ ಏಪ್ರಿಲ್ನಲ್ಲಿ ನಡೆದ ಉಪಚುನಾವಣೆಯಲ್ಲಿ ಬನ್ಸ್ವಾರಾ ಜಿಲ್ಲೆಯ ಬಾಗಿಡೋರಾ ಕ್ಷೇತ್ರದಿಂದ ಆಯ್ಕೆಯಾದ ಪಟೇಲ್, ಗಣಿ ಮಾಲೀಕರ ದೂರಿನ ನಂತರ ಏಪ್ರಿಲ್ 4 ರಿಂದ ಎಸಿಬಿಯ ಪರಿಶೀಲನೆಗೆ ಒಳಗಾಗಿದ್ದರು. ಎಸಿಬಿ ಮಹಾನಿರ್ದೇಶಕ ರವಿಪ್ರಕಾಶ್ ಮೆಹರ್ದ ಅವರ ಪ್ರಕಾರ, ಈ ಒಪ್ಪಂದವನ್ನು 2 ಕೋಟಿ ರೂ.ಗಳಿಗೆ ಅಂತಿಮಗೊಳಿಸಲಾಗಿದ್ದು, ಲಂಚವನ್ನು ಕಂತುಗಳಲ್ಲಿ ಪಾವತಿಸಲಾಗುವುದು. ದೂರುದಾರರು ಈ ಹಿಂದೆ ಬನ್ಸ್ವಾರಾದಲ್ಲಿ ಪಟೇಲ್ಗೆ 1 ಲಕ್ಷ ರೂ.ಗಳನ್ನು ನೀಡಿದ್ದರು.
ವಿಧಾನಸಭೆ ಸ್ಪೀಕರ್ ವಾಸುದೇವ್ ದೇವ್ನಾನಿ ಮತ್ತು ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರಿಂದ ಪೂರ್ವಾನುಮತಿ ಪಡೆದ ನಂತರ ಎಸಿಬಿ ಕಾರ್ಯಾಚರಣೆ ನಡೆಸಿತು. ದೂರುದಾರರು ಭಾನುವಾರ ಪಟೇಲ್ ಅವರ ನಿವಾಸಕ್ಕೆ ಭೇಟಿ ನೀಡಿ ಎರಡನೇ ಕಂತಿನ 20 ಲಕ್ಷ ರೂ.ಗಳನ್ನು ಹಸ್ತಾಂತರಿಸಿದರು, ಈ ಸಮಯದಲ್ಲಿ ಎಸಿಬಿ ತಂಡ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿತು.
ಲಂಚ ಪಡೆದ ನಂತರ ಶಾಸಕ ಜೈಕೃಷ್ಣ ಪಟೇಲ್ ಹಣದ ಚೀಲವನ್ನು ವ್ಯಕ್ತಿಯೊಬ್ಬರಿಗೆ ನೀಡಿದ್ದಾರೆ. ಆತ ಅದನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಸದ್ಯ ACB ಅಧಿಕಾರಿಗಳು ಶಾಸಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಶಾಸಕರು ಲಂಚಕ್ಕೆ ಬೇಡಿಕೆಯಿಟ್ಟಿರುವ ಮತ್ತು ಲಂಚ ಪಡೆದಿರುವ ಆಡಿಯೋ ಮತ್ತು ವಿಡಿಯೋ ಸಾಕ್ಷ್ಯಗಳು ACB ಬಳಿ ಇವೆ. ಇದು ತನಿಖೆಗೆ ಸಹಾಯ ಮಾಡುತ್ತದೆ ಎಂದು DG ಪ್ರಕಾಶ್ ಮೆಹರ್ಡಾ ತಿಳಿಸಿದ್ದಾರೆ.
Advertisement