
ಗುವಾಹಟಿ: ಏಪ್ರಿಲ್ 22 ರಂದು 26 ಜನರನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿದ ಸಂಚು ಎಂದು ಆರೋಪಿಸಿದ ಅಸ್ಸಾಂ ವಿರೋಧ ಪಕ್ಷವಾದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ನ ಶಾಸಕ ಅಮೀನುಲ್ ಇಸ್ಲಾಂ ಅವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಸಾರ್ವಜನಿಕವಾಗಿ "ದಾರಿತಪ್ಪಿಸುವ ಮತ್ತು ಪ್ರಚೋದಿಸುವ" ಅವರ ಹೇಳಿಕೆ ವೈರಲ್ ಆಗಿದ್ದು, ಇದು ಪ್ರತಿಕೂಲ ಪರಿಸ್ಥಿತಿ ಸೃಷ್ಟಿಸುವ ಸಾಮರ್ಥ್ಯ ಹೊಂದಿತ್ತು ಎಂಬ ಆಧಾರದ ಮೇಲೆ ಇಸ್ಲಾಂ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಎನ್ಎಸ್ನ ಸೆಕ್ಷನ್ 152, 196, 197(1), 113(3), 352 ಮತ್ತು 353 ರ ಅಡಿಯಲ್ಲಿ ಶಾಸಕ ಇಸ್ಲಾಂ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
"ಪಹಲ್ಗಾಮ್ ದಾಳಿಯ ನಂತರ, ಭಯೋತ್ಪಾದಕರು ಹಿಂದೂಗಳ ಮೇಲೆ ಗುಂಡು ಹಾರಿಸಿ ಮುಸ್ಲಿಮರನ್ನು ಬಿಟ್ಟಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಬದುಕುಳಿದವರು ಯಾರ ಹೆಸರನ್ನು ಕೇಳಲಾಗಿಲ್ಲ ಎಂದು ಹೇಳುತ್ತಿದ್ದಾರೆ. ಅವರು ರಹಸ್ಯವಾಗಿ ಅಡಗಿ ಕುಳಿತು ಗುಂಡು ಹಾರಿಸಿದ್ದಾರೆ. ಪಹಲ್ಗಾಮ್ ದಾಳಿಯನ್ನು ಪುಲ್ವಾಮಾದಲ್ಲಿ ದಾಳಿ ಮಾಡಿದವರೇ ನಡೆಸಿದ್ದಾರೆ ಎಂದು ನಾನು ಅನುಮಾನಿಸುತ್ತೇನೆ" ಎಂದು ಇಸ್ಲಾಂ ಹೇಳಿದ್ದರು.
"ಸರ್ಕಾರ ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸದಿದ್ದರೆ ಮತ್ತು ಹಿಂದೂ-ಮುಸ್ಲಿಂ ವಿಭಜಕ ರಾಜಕೀಯ ಮಾಡಿದರೆ, ಕೇಂದ್ರ ಸರ್ಕಾರ ರೂಪಿಸಿದ ಪಿತೂರಿಯಿಂದಾಗಿ ಈ ದಾಳಿ ನಡೆದಿರಬಹುದು ಎಂದು ಅನುಮಾನಿಸುವುದಾಗಿ" ಎಂದು ಇಸ್ಲಾಂ ತಿಳಿಸಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ಪಾಕಿಸ್ತಾನ ಪ್ರಾಯೋಜಿತ ಭೀಕರ ಭಯೋತ್ಪಾದಕ ದಾಳಿಯನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಮರ್ಥಿಸಿಕೊಳ್ಳುವವರ ವಿರುದ್ಧ ಅಸ್ಸಾಂ ಸರ್ಕಾರ ಸಾಧ್ಯವಾದಷ್ಟು ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
Advertisement