INTERVIEW | ಜಲ ಒಪ್ಪಂದ ಸ್ಥಗಿತ ಉತ್ತಮ ನಡೆ; ಉಗ್ರರ ಕೃತ್ಯವನ್ನು ಕಾಶ್ಮೀರಿಗಳು ಖಂಡಿಸಿದ್ದಾರೆ, ಈ ಅವಕಾಶ ಸರ್ಕಾರ ಬಳಸಿಕೊಳ್ಳಬೇಕು: ಲೆಫ್ಟಿನೆಂಟ್ ಜನರಲ್ ದೀಪೇಂದ್ರ ಸಿಂಗ್ ಹೂಡಾ
ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಲ್ಲಿನ ಭಾರತೀಯ ಸೇನೆ ನೆಲೆಯ ಮೇಲೆ ಸೆ. 18ರಂದು ಭೀಕರ ಆತ್ಮಾಹುತಿ ದಾಳಿ ನಡೆಸಿತ್ತು. ಈ ಘಟನೆಯಲ್ಲಿ 19 ಯೋಧರು ಮರಣ ಹೊಂದಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆ ಅತಿ ದೊಡ್ಡ ಸರ್ಜಿಕಲ್ ದಾಳಿ ನಡೆಸಿ, ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ ಇದ್ದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು.
ಪಾಕಿಸ್ತಾನದ ವಿರುದ್ಧ ಸೇಡಿನ ಕ್ರಮವಾಗಿ ನಡೆದ ಈ ಸರ್ಜಿಕಲ್ ದಾಳಿಯನ್ನು ದೇಶದ ಜನರು ಮತ್ತು ಸೇನಾ ಪಡೆಗಳು ಶ್ಲಾಘಿಸಿದ್ದರು. ಸೆ. 18ರಂದು ಸೈನಿಕರ ನೆಲೆಯ ಮೇಲೆ ದಾಳಿ ನಡೆದ 11 ದಿನಗಳಲ್ಲಿಯೇ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು. ಇಷ್ಟು ಕಡಿಮೆ ಅವಧಿಯಲ್ಲಿ ಬಹುದೊಡ್ಡ ಸಾಹಸ ಕಾರ್ಯಕ್ಕೆ ಭಾರತೀಯ ಸೇನೆ ಸಜ್ಜುಗೊಂಡಿದ್ದು ವಿಶೇಷವಾಗಿತ್ತು. ಪಾಕಿಸ್ತಾನ ಆಕ್ರಮಿಕ ಕಾಶ್ಮೀರದಲ್ಲಿ ರಾತ್ರಿ ವೇಳೆ ಸರ್ಜಿಕಲ್ ದಾಳಿ ನಡೆಸಿದ್ದ ಸೇನಾ ಪಡೆಯು ಭಾರಿ ಪ್ರಮಾಣದ ಉಗ್ರರ ಸಾವು ನೋವುಗಳಿಗೆ ಕಾರಣವಾಗಿತ್ತು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 35-40 ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಈ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದರು.
ಭಾರತೀಯ ಸೇನೆ ಈ ಸರ್ಜಿಕಲ್ ಸ್ಟೈಕ್ ನಡೆಸಿದಾಗ ದೀಪೇಂದ್ರ ಸಿಂಗ್ ಹೂಡಾ ಅವರು, ಭಾರತೀಯ ಸೇನೆಯ ಉತ್ತರ ಕಮಾಂಡ್ನ ಮಾಜಿ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿದ್ದರು.
ನಾಲ್ಕು ದಶಕಗಳ ಕಾಲ ಪಾಕಿಸ್ತಾನ ಮತ್ತು ಚೀನಾ ರಾಷ್ಟ್ರಗಳೊಂದಿಗೆ ಭಾರತದ ಗಡಿಗಳಲ್ಲಿ ಭದ್ರತಾ ಸವಾಲುಗಳನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಲೆಫ್ಟಿನೆಂಟ್ ಜನರಲ್ ಹೂಡಾ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಉಂಟಾಗುವ ಸಮಸ್ಯೆಗಳ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಪಹಲ್ಗಾಮ್ನಲ್ಲಿ ಉಗ್ರರು 26 ಮಂದಿ ಪ್ರವಾಸಿಗರನ್ನು ಕೊಂದು 10 ದಿನಗಳಿಗಿಂತ ಹೆಚ್ಚು ಸಮಯವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಿನ ಪರಿಸ್ಥಿತಿ ಬಗ್ಗೆ ನಿಮ್ಮ ಅವಲೋಕನವೇನು?
ಕಾಶ್ಮೀರದಲ್ಲಿ ಪರಿಸ್ಥಿತಿ ಉತ್ತಮವಾಗುತ್ತಿವೆ. ಒಂದೆರಡು ವರ್ಷಗಳಿಂದ ಭಯೋತ್ಪಾದಕ ಘಟನೆಗಳು ಜಮ್ಮು ಪ್ರದೇಶಕ್ಕೆ ಸ್ಥಳಾಂತರಗೊಂಡಿತ್ತು. ಹಾಗೆಂದು ಕಾಶ್ಮೀರದಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ ಎಂದು ನಾನು ಹೇಳುತ್ತಿಲ್ಲ, ಆದರೆ, ಒಟ್ಟಾರೆ ಹಿಂಸಾಚಾರ ಕಡಿಮೆಯಾಗುತ್ತಿದೆ. ಹೀಗಾಗಿಯೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ. ಹಾಗೆಂದು ಪಾಕಿಸ್ತಾನ ಎಲ್ಲವನ್ನೂ ಕೈಬಿಟ್ಟು ಸುಮ್ಮನೆ ಕುಳಿತಿದೆ ಎಂದು ಹೇಳುತ್ತಿಲ್ಲ.
ಹಾಗಾದರೆ, ಕಣಿವೆ ರಾಜ್ಯದಲ್ಲಿ ಮೊದಲಿನಂತೆಯೇ ಪರಿಸ್ಥಿತಿ ಬದಲಾಗುತ್ತದೆಯೇ?
ಹೌದು, ಪಹಲ್ಗಾಮ್ ಉಗ್ರರ ದಾಳಿ ಘಟನೆ ದೊಡ್ಡದಾಗಿದೆ. ಆದರೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲವನ್ನೂ ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದು ನಾನು ಹೇಳುವುದಿಲ್ಲ. ಈ ಘಟನೆಯ ನಂತರ, ಭಯೋತ್ಪಾದಕರು ಮತ್ತೆ ಕಾಶ್ಮೀರಕ್ಕೆ ಹಿಂತಿರುಗುವ ಸಾಧ್ಯತೆಗಳಿವೆ. ಹಾಗೆಂದು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತದೆ, ಭಯೋತ್ಪಾದಕರು ಹೆಚ್ಚಿನ ದಾಳಿಗಳನ್ನು ನಡೆಸುತ್ತಾ ಮುಕ್ತವಾಗಿ ಓಡಾಡುತ್ತಾರೆ ಅಥವಾ ಕಳೆದ ನಾಲ್ಕರಿಂದ ಐದು ವರ್ಷಗಳಲ್ಲಿ ಹಿಂಸಾಚಾರ ಮತ್ತು ದಾಳಿಗಳನ್ನು ಹತ್ತಿಕ್ಕುವಲ್ಲಿನ ಯಶಸ್ಸ ರದ್ದುಗೊಳ್ಳುತ್ತದೆ ಎಂದು ಭಾವಿಸಿದರೆ, ಅದು ತಪ್ಪು, ಆ ರೀತಿ ಆಗುವುದಿಲ್ಲ.
ಪ್ರಸ್ತುತದ ಪರಿಸ್ಥಿತಿಯ ಪರಿಣಾಮ ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳು ನಿಧಾನವಾಗಬಹುದು. ಕಣಿವೆಯಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಬಹುದು, ಇದು ಸ್ಥಳೀಯ ಉದ್ಯಮಕ್ಕೆ ಅಡ್ಡಿಯಾಗುತ್ತದೆ. ಸ್ಥಳೀಯರು ಆರ್ಥಿಕ ಕುಸಿತವನ್ನು ಎದುರಿಸಬಹುದು. ಪಹಲ್ಗಾಮ್ ಘಟನೆ ನಿಜಕ್ಕೂ ಭಯಾನಕವಾದದ್ದು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಏನಾದರೂ ಲಾಭವಾಗುತ್ತದೆಯೇ?
ಪಾಕಿಸ್ತಾನದ ಪ್ರಯತ್ನ ಯಾವಾಗಲೂ ಇಡೀ ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯನ್ನು ಅಂತರರಾಷ್ಟ್ರೀಯೀಕರಿಸುವುದಾಗಿದೆ. ಪಹಲ್ಗಾಮ್ ದಾಳಿಯು ಕಾಶ್ಮೀರ ವಿಚಾರ ಮತ್ತೆ ಬೆಳಕಿಗೆ ಬರುವಂತೆ ಮಾಡಿದೆ, ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಕುರಿತು ಹೆಚ್ಚಿನ ಸುದ್ದಿ ಪ್ರಸಾರವಾಗಿದೆ. ಆದರೆಸ ಕಾಶ್ಮೀರವನ್ನು ಹಿಂದಿನಂತೆ ಹೆಚ್ಚು ಗಮನ ಸೆಳೆಯುವ ವಿಷಯವಾಗಿದೆ ಎಂಬುದು ಕಾಣಿಸುತ್ತಿಲ್ಲ,
ಪ್ರಸ್ತುತ ಉದ್ವಿಗ್ನ ಪರಿಸ್ಥಿತಿ ಕುರಿತು ನಿಮ್ಮ ಸಲಹೆ ಏನು?
ದಾಳಿಯ ನಂತರದ ಅವ್ಯವಸ್ಥೆಯ ನಡುವೆ, ನಾವು ಕೆಲವು ಸಕಾರಾತ್ಮಕ ವಿಷಯಗಳನ್ನು ಸಹ ನೋಡಿದ್ದೇವೆ. ನಾವು ಅವುಗಳನ್ನು ವ್ಯರ್ಥ ಮಾಡಬಾರದು; ಅವುಗಳನ್ನು ಅವಕಾಶಗಳಾಗಿ ಬಳಸಿಕೊಳ್ಳಬೇಕು. ಸ್ಥಳೀಯರು ಹತ್ಯೆಗಳನ್ನು ಖಂಡಿಸಿ ಹೊರಬಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ದಾಳಿಯನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದೆ. ಇವುಗಳನ್ನು ಬಲಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಗೊಂದಲಕ್ಕೊಳಗಾಗಬಾರದು. ಸರ್ಕಾರವು ಅದನ್ನು ಹೇಗೆ ಬಳಸಿಕೊಳ್ಳಬೇಕೆಂದು ನೋಡಬೇಕು. ನಾವು ಆಗಾಗ್ಗೆ ಕಠಿಣ ಕ್ರಮಗಳನ್ನು ಆರಿಸಿಕೊಂಡಿದ್ದೇವೆ, ಆದರೆಕ ಈಗ ಭಯೋತ್ಪಾದಕರ ವಿರುದ್ಧ ಜನರಲ್ಲಿ ಭಾವನೆಗಳನ್ನು ಬಲಪಡಿಸಲು ಉತ್ತಮ ಸಂಪರ್ಕದ ಅಗತ್ಯವಿದೆ. ಆಂತರಿಕವಾಗಿ ನಾವು ಜನರನ್ನು ತಲುಪಬೇಕು. ಈ ಹಿಂದೆ ಸ್ಥಳೀಯ ರಾಜಕಾರಣಿಗಳು ಪಾಕಿಸ್ತಾನದೊಂದಿಗೆ ಮಾತನಾಡಿ ಎಂದು ಹೇಳುತ್ತಿದ್ದರು. ಇನ್ನು ಮುಂದೆ ಅದನ್ನು ನಾವು ಕೇಳಲು ಸಾಧ್ಯವಿಲ್ಲ. ಸ್ಥಳೀಯರಲ್ಲಿಯೂ ಆಂತರಿಕವಾಗಿ ಸಂಪರ್ಕ ಸಾಧಿಸಲು ಇದು ಒಂದು ಅವಕಾಶವಾಗಿದೆ.
ಸರ್ಕಾರವು ಕಾಶ್ಮೀರಿ ಜನತೆಗೆ ಆರ್ಥಿಕವಾಗಿ ಸಹಾಯ ಮಾಡಲು ಮುಂದಾಗಬೇಕು, ಈ ಮೂಲಕ ಸ್ಥಳೀಯರಿಗೆ ನಿಮ್ಮೊಂದಿಗೆ ನಾವಿದ್ದೇವೆಂಬ ಸಂದೇಶವನ್ನು ರವಾನಿಸಬೇಕು. ಎಲ್ಲಾ ರೀತಿಯಿಂದಲೂ ಪಾಕಿಸ್ತಾನಕ್ಕೆ ಕಠಿಣ ವಿಧಾನದೊಂದಿಗೆ ಬಲವಾದ ಸಂದೇಶವನ್ನು ಕಳುಹಿಸಬೇಕು.
ಇತರ ದೇಶಗಳ ನಾಯಕರಿಂದ ಭಾರತಕ್ಕೆ ಬೆಂಬಲದ ಸಂದೇಶಗಳು ಬಂದಿವೆ...?
ಖಂಡಿತವಾಗಿಯೂ ಇತರೆ ರಾಷ್ಟ್ರಗಳು ಭಾರತಕ್ಕೆ ಬೆಂಬಲವಾಗಿ ಬಂದಿವೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಜೈಶಂಕರ್ ಮತ್ತು ಶೆಹಬಾಜ್ ಷರೀಫ್ ಅವರೊಂದಿಗೆ ಮಾತನಾಡಿದ್ದಾರೆ, ಆದರೆ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಅವರ ಸಂದೇಶವು ಬಹುತೇಕ ಹೋಲುತ್ತದೆ. ಭಾರತಕ್ಕೆ ಅಂತರರಾಷ್ಟ್ರೀಯ ಬೆಂಬಲವಿದೆ, ಆದರೆ, ಯಾರೂ ಯುದ್ಧವನ್ನು ಬಯಸುವುದಿಲ್ಲ.
ಭಯೋತ್ಪಾದಕರು ಮತ್ತು ಪಾಕಿಸ್ತಾನದ ವಿರುದ್ಧದ ಕ್ರಮಕ್ಕೆ ಭಾರತದ ಮುಂದಿರುವ ಆಯ್ಕೆಗಳೇನು?
ಕಠಿಣ ಕ್ರಮಕ್ಕೆ ದೇಶದ ಜನತೆ ಒತ್ತಾಯಿಸುತ್ತಿದ್ದಾರೆ. ಇದು ನನಗೆ ಅರ್ಥವಾಗುತ್ತದೆ. ನಾವು ಅಭಿವೃದ್ಧಿಯ ಹಾದಿಯಲ್ಲಿದ್ದೇವೆ. ಇದೀಗ ಭಾರತ ಕೈಗೊಂಡಿರುವ ಜಲ ಒಪ್ಪಂದ ಸ್ಥಗಿತ ನಿರ್ಧಾರ ಉತ್ತಮವಾಗಿದೆ. ಇಂತಹ ಕ್ರಮಗಳ ಕೈಗೊಂಡು ಭಾರತ ಒತ್ತಡ ಮುಂದುವರೆಸಬೇಕು. ಆದರೆ, ಸರ್ಕಾರದ ಮೇಲೆ ರಾಜಕೀಯ ನಾಯಕತ್ವದ ಒತ್ತಡವಿರುತ್ತದೆ. ಸಮಯ ಕಳೆದಂತೆ, ಏನನ್ನಾದರೂ ಮಾಡಲು ಸರ್ಕಾರದ ಮೇಲಿನ ಒತ್ತಡವೂ ಕಡಿಮೆಯಾಗಲಿದೆ.
ಸೇನಾಪಡೆ ಬಳಸುವ ಆಯ್ಕೆ ಇದೆಯೇ?
ಈ ಕುರಿತು ಅಂತಿಮವಾಗಿ ನಿರ್ಧಾರವನ್ನು ಸರ್ಕಾರವೇ ತೆಗೆದುಕೊಳ್ಳಬೇಕು. ಸೇನಾ ದೃಷ್ಟಿಕೋನದಿಂದ ನೋಡುವುದಾದರೆ 2016 ರ ಸೇನಾ ದಾಳಿ ಮತ್ತು 2019 ರ ವೈಮಾನಿಕ ದಾಳಿಯ ನಂತರ, ಪಾಕಿಸ್ತಾನ ಈಗ ಹೆಚ್ಚು ಸಿದ್ಧವಾಗಿರಬೇಕಿದೆ. 2016ರ ಸರ್ಜಿಕಲ್ ಸ್ಟ್ರೈಕ್ ಪಾಕಿಸ್ತಾನವನ್ನು ಆಘಾತಗೊಳಿಸಿದ್ದು. 2019 ರ ವೈಮಾನಿಕ ದಾಳಿಯು ಅವರನ್ನು ಸಿದ್ಧವಿಲ್ಲದವರನ್ನಾಗಿ ಮಾಡಿತ್ತು. ಆದ್ದರಿಂದ ಈಗ, ಎರಡೂ ಕಡೆಗಳಲ್ಲಿ ಉತ್ತಮ ಸಿದ್ಧತೆ ಇದೆ, ಪಹಲ್ಗಾಮ್ ದಾಳಿ ನಡೆದು ಈಗಾಗಲೇ 10 ದಿನಗಳು ಕಳೆದಿವೆ. ಏನು ಮಾಡಬೇಕು? ಯಾವಾಗ ಮತ್ತು ಹೇಗೆ ಮಾಡಬೇಕು ಎಂಬುದನ್ನು ನಾವು ನೋಡಬೇಕಾಗುತ್ತದೆ. ಈ ನಿರ್ಧಾರವನ್ನು ಸರ್ಕಾರವೇ ತೆಗೆದುಕೊಳ್ಳಬೇಕು., ಸೇನೆ ತನ್ನ ಸಲಹೆ ನೀಡುತ್ತದೆ ಎಂದು ಹೇಳಿದ್ದಾರೆ.