
ನವದೆಹಲಿ: ಜಾತಿ ಗಣತಿಯಲ್ಲಿ ತೆಲಂಗಾಣ ರಾಜ್ಯ ಅನುಸರಿಸಿದ ಮಾದರಿಯನ್ನು ಅಳವಡಿಸಿಕೊಳ್ಳಿ, ಮೀಸಲಾತಿ ಮೇಲಿನ ಶೇ 50 ರಷ್ಟು ಮಿತಿಯನ್ನು ತೆಗೆದುಹಾಕಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಂಗಳವಾರ ಆಗ್ರಹಿಸಿದ್ದಾರೆ.
ಈ ಕುರಿತು ಮೋದಿ ಅವರಿಗೆ ಪತ್ರ ಬರೆದಿರುವ ಖರ್ಗೆ, ಜಾತಿ ಗಣತಿ ವಿಚಾರವಾಗಿ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಿ, ತೆಲಂಗಾಣ ರಾಜ್ಯದ ಮಾದರಿಯನ್ನು ಅನುಸರಿಸಿ ಎಂದು ಒತ್ತಾಯಿಸಿದ್ದಾರೆ.
ಜಾತಿ ಗಣತಿಯಲ್ಲಿ ಕೇಂದ್ರ ಸರ್ಕಾರ ತೆಲಂಗಾಣ ರಾಜ್ಯದ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಮೀಸಲಾತಿ ಮೇಲಿನ ಶೇ 50 ರಷ್ಟು ಮಿತಿಯನ್ನು ತೆಗೆದುಹಾಕಿ, ಆರ್ಟಿಕಲ್ 15(5) ತಕ್ಷಣ ಜಾರಿಗೆ ತಂದು ಎಸ್ಸಿ, ಎಸ್ಟಿ, ಮತ್ತು ಒಬಿಸಿ ಸಮುದಾಯಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ನೀಡಬೇಕು.
ನಮ್ಮ ಸಮಾಜದಲ್ಲಿ ಹಿಂದುಳಿದವರು, ತುಳಿತಕ್ಕೊಳಗಾದವರು ಮತ್ತು ಅಳಿವಿನ ಅಂಚಿನಲ್ಲಿರುವ ವರ್ಗಗಳಿಗೆ ಅವರ ಹಕ್ಕುಗಳನ್ನು ನೀಡುವ ಜಾತಿ ಜನಗಣತಿಯಂತಹ ಪ್ರಕ್ರಿಯೆಯನ್ನು ನಡೆಸುವುದನ್ನು ಯಾವುದೇ ರೀತಿಯಲ್ಲಿ ವಿಭಜನೆ ಎಂದು ಪರಿಗಣಿಸಲಾಗುವುದಿಲ್ಲ, ಪರಿಗಣಿಸಲೂ ಬಾರದು ಎಂದು ಹೇಳಿದ್ದಾರೆ.
ನಮ್ಮ ದೇಶದ ಜನರು ವಿಶಾಲ ಹೃದಯದವರು, ಅಗತ್ಯವಿದ್ದಾಗ ಎಲ್ಲರೂ ಒಗ್ಗಟ್ಟಾಗುತ್ತಾರೆ, ಅದಕ್ಕೆ ಪಹಲ್ಗಾಮ್ ಘಟನೆಯನ್ನು ವಿರೋಧಿಸಿ ಒಂದಾಗಿರುವುದೇ ಸಾಕ್ಷಿ. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಪ್ರತಿಜ್ಞೆ ಮಾಡಿದಂತೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಮತ್ತು ಸ್ಥಾನಮಾನ ಮತ್ತು ಅವಕಾಶದ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು, ಮೇಲೆ ಸೂಚಿಸಲಾದ ಸಮಗ್ರ ರೀತಿಯಲ್ಲಿ ಜಾತಿ ಜನಗಣತಿ ನಡೆಸುವುದು ಸಂಪೂರ್ಣವಾಗಿ ಅಗತ್ಯವಾಗಿದೆ.
ನನ್ನ ಸಲಹೆಗಳನ್ನು ನೀವು ಗಂಭೀರವಾಗಿ ಪರಿಗಣಿಸುತ್ತೀರಿ ಎಂದು ನಾನು ನಂಬುತ್ತೇನೆ. ವಾಸ್ತವವಾಗಿ, ಜಾತಿ ಜನಗಣತಿಯ ವಿಷಯದ ಕುರಿತು ಶೀಘ್ರದಲ್ಲೇ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಸಂವಾದ ನಡೆಸಬೇಕೆಂದು ನಾನು ನಿಮ್ಮನ್ನು ವಿನಂತಿಸುತ್ತೇನೆಂದು ತಿಳಿಸಿದ್ದಾರೆ. ಮೇ 5ರಂದು ಈ ಪತ್ರ ಬರೆಯಲಾಗಿದ್ದು, ಈ ಪತ್ರವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆ ಎಕ್ಸ್'ನಲ್ಲಿ ಇಂದು ಪೋಸ್ಟ್ ಮಾಡಿದ್ದಾರೆ.
Advertisement