
ನವದೆಹಲಿ: 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಭಾಗವಾಗಿ ಭಾರತೀಯ ಸಶಸ್ತ್ರ ಪಡೆಗಳು ನೆರೆಯ ದೇಶದಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯ ನಂತರ ಇಂದು, ಗುರುವಾರ, ಜಮ್ಮು- ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಪಾಕಿಸ್ತಾನಿ ಪಡೆಗಳು ಸತತ ಗಡಿಯಾಚೆಗಿನ ಶೆಲ್ ದಾಳಿ ನಡೆಸಿವೆ.
ಪಾಕಿಸ್ತಾನ ಸೈನಿಕರು ಕರ್ನಾ ಪ್ರದೇಶದ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು, ಮಧ್ಯರಾತ್ರಿಯ ನಂತರ ಶೆಲ್ಗಳು ಮತ್ತು ಮೋರ್ಟಾರ್ಗಳನ್ನು ಹಾರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸಶಸ್ತ್ರ ಪಡೆಗಳು ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿದವು. ಇಲ್ಲಿಯವರೆಗೆ ಯಾವುದೇ ಸಾವುನೋವುಗಳ ವರದಿಗಳಿಲ್ಲ.
ಭಾರತದ 'ಆಪರೇಷನ್ ಸಿಂಧೂರ್' ನಂತರ ಪಾಕಿಸ್ತಾನಿ ಪಡೆಗಳು ಶೆಲ್ ದಾಳಿ ನಡೆಸಿದ ನಂತರ, ಕರ್ನಾದಲ್ಲಿನ ಹೆಚ್ಚಿನ ನಾಗರಿಕರು ನಿನ್ನೆ ಸುರಕ್ಷಿತ ಪ್ರದೇಶಗಳಿಗೆ ತೆರಳಿದರು.
12 ಪಾಕಿಸ್ತಾನ ಸೈನಿಕರು ಸಾವು
ಭಾತದ ಸಿಂದೂರ್ ಕಾರ್ಯಾಚರಣೆ ಬೆನ್ನಲ್ಲೇ ಈಗ ಬಲೂಚಿಸ್ತಾನ ಸೇನೆ ಕೂಡ ಪಾಕಿಸ್ತಾನಕ್ಕೆ ಆಘಾತ ನೀಡಿದೆ. ಪಾಕಿಸ್ತಾನಿ ಸೇನಾ ವಾಹನದ ಮೇಲೆ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ನಡೆಸಿದ ದಾಳಿಯಲ್ಲಿ 12 ಮಂದಿ ಪಾಕಿಸ್ತಾನಿ ಯೋಧರು ಮೃತಪಟ್ಟಿದ್ದಾರೆ. ಐಇಡಿ ಮೂಲಕ ಪಾಕ್ ಸೇನಾ ವಾಹನವನ್ನು ಸ್ಫೋಟಿಸಿರುವುದಾಗಿ ಬಲೂಚಿಸ್ತಾನ ಸೇನೆ ಹೇಳಿಕೊಂಡಿದೆ. ಈ ಘಟನೆ ಬಲೂಚಿಸ್ತಾನದ ಬೋಲಾನ್ನಲ್ಲಿ ನಡೆದಿದೆ. ಬಲೂಚ್ ಲಿಬರೇಶನ್ ಆರ್ಮಿಯ ವಿಶೇಷ ಯುದ್ಧತಂತ್ರದ ಕಾರ್ಯಾಚರಣೆ ಸ್ಕ್ವಾಡ್ (STOS) ಬೋಲನ್ನ ಮಾಚ್ ಕುಂಡ್ ಪ್ರದೇಶದಲ್ಲಿ ರಿಮೋಟ್ ಕಂಟ್ರೋಲ್ಡ್ ಐಇಡಿಯೊಂದಿಗೆ ಬೃಹತ್ ಸ್ಫೋಟ ಮಾಡಿಸಿದೆ. ಪಾಕ್ ಸೈನಿಕರು ಮಿಲಿಟರಿ ಕಾರ್ಯಾಚರಣೆಗೆ ಹೋಗುತ್ತಿದ್ದಾಗ ಈ ದಾಳಿ ನಡೆಸಲಾಗಿದೆ.
ಸೈನಿಕನ ಪ್ರಾಣತ್ಯಾಗ ದೃಢಪಡಿಸಿದ ಸೇನೆ
ಜಮ್ಮು- ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ (LoC) ಪಾಕಿಸ್ತಾನ ಸೇನೆ ನಡೆಸಿದ ಭಾರೀ ಶೆಲ್ ದಾಳಿಯಲ್ಲಿ ಭಾರತೀಯ ಯೋಧ ಹುತಾತ್ಮರಾಗಿದ್ದಾರೆ ಎಂದು ವೈಟ್ ನೈಟ್ ಕಾರ್ಪ್ಸ್ ದೃಢಪಡಿಸಿದೆ.
ನಿನ್ನೆ ಬುಧವಾರ ಬೆಳಗಿನ ಜಾವ ನಡೆದ ಶೆಲ್ ದಾಳಿಯಲ್ಲಿ 5 ಫೀಲ್ಡ್ ರೆಜಿಮೆಂಟ್ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಹುತಾತ್ಮರಾಗಿದ್ದಾರೆ.
ಪಾಕಿಸ್ತಾನ ಸೇನೆಯು ಮೇ 6 ರ ರಾತ್ರಿ ಪೂಂಚ್, ತಂಗ್ಧರ್ ಮತ್ತು ಇತರ ಗಡಿ ಪ್ರದೇಶಗಳಲ್ಲಿ ನಾಗರಿಕ ಪ್ರದೇಶಗಳ ಮೇಲೆ ಶೆಲ್ ದಾಳಿ ನಡೆಸಲು ಪ್ರಾರಂಭಿಸಿತು. ಮೇ 7ರವರೆಗೆ ಗುಂಡಿನ ದಾಳಿಯನ್ನು ಮುಂದುವರೆಸಿತು. ಶೆಲ್ ದಾಳಿಯಿಂದ ಮನೆಗಳಿಗೆ ತೀವ್ರ ಹಾನಿಯಾಯಿತು.
Advertisement