
ಜಮ್ಮು: ಹಗಲು ಹೊತ್ತಿನಲ್ಲಿ ಸಂಚು ರೂಪಿಸಿ, ರಾತ್ರಿ ವೇಳೆಯಲ್ಲಿ ದಾಳಿ ನಡೆಸುವ 'ರಣಹೇಡಿ ಪಾಕಿಸ್ತಾನ' ಮತ್ತೆ ಜಮ್ಮು ಸೇರಿದಂತೆ ವಿವಿಧೆಡೆ ದಾಳಿ ಆರಂಭಿಸಿದೆ. ಶುಕ್ರವಾರ ಸಂಜೆ ದಕ್ಷಿಣ ಕಾಶ್ಮೀರದ ಶ್ರೀನಗರ ವಿಮಾನ ನಿಲ್ದಾಣ ಮತ್ತು ಆವಂತಿಪೋರಾ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ಡ್ರೋನ್ ದಾಳಿಯನ್ನು ಭದ್ರತಾ ಪಡೆಗಳು ವಿಫಲಗೊಳಿಸಿದವು.
ಈ ಸ್ಥಳಗಳ ಜೊತೆಗೆ, ಉತ್ತರದಲ್ಲಿ ಬಾರಾಮುಲ್ಲಾದಿಂದ ದಕ್ಷಿಣದ ಭುಜ್ವರೆಗಿನ ಅಂತರರಾಷ್ಟ್ರೀಯ ಗಡಿ ಮತ್ತು ಪಾಕಿಸ್ತಾನದ ನಿಯಂತ್ರಣ ರೇಖೆಯ ಉದ್ದಕ್ಕೂ 26 ಸ್ಥಳಗಳಲ್ಲಿ ಡ್ರೋನ್ಗಳನ್ನು ನೋಡಲಾಗಿದೆ.ಇವುಗಳಲ್ಲಿ ಶಂಕಿತ ಶಸ್ತ್ರಸಜ್ಜಿತ ಡ್ರೋನ್ಗಳು ಸೇರಿವೆ . ನಾಗರಿಕ ಮತ್ತು ಮಿಲಿಟರಿ ಸ್ಥಳಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಸೇನೆ ಹೇಳಿಕೆಯೊಂದು ತಿಳಿಸಿದೆ.
ಬಾರಾಮುಲ್ಲಾ, ಶ್ರೀನಗರ, ಅವಂತಿಪೋರಾ, ನಗ್ರೋಟಾ, ಜಮ್ಮು, ಫಿರೋಜ್ಪುರ, ಪಠಾಣ್ಕೋಟ್, ಫಾಜಿಲ್ಕಾ, ಲಾಲ್ಗಢ್ ಜಟ್ಟಾ, ಜೈಸಲ್ಮೇರ್, ಬಾರ್ಮರ್, ಭುಜ್, ಕ್ವಾರ್ಬೆಟ್ ಮತ್ತು ಲಖಿ ನಾಲಾ ಸ್ಥಳಗಳಲ್ಲಿ ದಾಳಿ ನಡೆದಿದೆ.
ಸಾಂಬಾ, ಪಠಾಣ್ ಕೋಟ್ ಮತ್ತು ಜಮ್ಮುವಿನಲ್ಲಿ ಡ್ರೋನ್ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಉರಿಯಲ್ಲಿ ಭಾರಿ ಶೆಲ್ ದಾಳಿಯಾಗಿರುವುದಾಗಿ ತಿಳಿದುಬಂದಿದೆ.ಶ್ರೀನಗರ ವಿಮಾನ ನಿಲ್ದಾಣವು ಡ್ರೋನ್ ದಾಳಿಗೆ ಒಳಗಾಗಿದ್ದು, ಅದನ್ನು ಪುನರಾರಂಭಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಫಿರೋಜ್ ಪುರದಲ್ಲಿ ಒಬ್ಬರಿಗೆ ಗಾಯ: ಪಂಜಾಬಿನ ಫಿರೋಜ್ ಪುರದಲ್ಲಿ ಮನೆಯೊಂದರ ಮೇಲೆ ಪಾಕಿಸ್ತಾನದ ಡ್ರೋನ್ ಒಂದು ಅಪ್ಪಳಿಸಿದ್ದು, ಕುಟುಂಬದ ಸದಸ್ಯರೊಬ್ಬರು ಗಾಯಗೊಂಡಿದ್ದು,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಕಿಸ್ತಾನದಿಂದ ಮತ್ತೆ ಡ್ರೋನ್ ದಾಳಿಯಾಗುತ್ತಿದ್ದಂತೆಯೇ ಜಮ್ಮುವಿನಲ್ಲಿರುವ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದು, ಸ್ಪೋಟದ ಶಬ್ಧಗಳು, ಬಹುಶಃ ಭಾರೀ ಫಿರಂಗಿಗಳ ಸದ್ದು ಈಗ ನಾನಿರುವ ಸ್ಥಳದಿಂದ ಕೇಳಿಬರುತ್ತಿದೆ ಎಂದು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪಂಜಾಬ್, ರಾಜಸ್ಥಾನ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸುತ್ತಿದೆ. S-400 ಭಾರತದ ವಾಯು ರಕ್ಷಣಾ ವ್ಯವಸ್ಥೆಯಿಂದ ಎಲ್ಲಾ ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ.
ಗುರುವಾರ ರಾತ್ರಿ ಪಾಕ್ ಸೇನೆಯು ಎಲ್ಒಸಿ ಉದ್ದಕ್ಕೂ ಭಾರೀ ಕ್ಯಾಲಿಬರ್ ಶಸ್ತ್ರಾಸ್ತ್ರಗಳೊಂದಿಗೆ ಶೆಲ್ ದಾಳಿ ನಡೆಸಿತು. ಲೇಹ್ನಿಂದ ಸರ್ ಕ್ರೀಕ್ವರೆಗಿನ ಅಂತರರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯ ಉದ್ದಕ್ಕೂ 36 ಸ್ಥಳಗಳಲ್ಲಿ 300-400 ಡ್ರೋನ್ಗಳನ್ನು ಬಳಸಿಕೊಂಡು ದಾಳಿಗೆ ಮುಂದಾಗಿತ್ತು. ಅವುಗಳನ್ನು ಹೊಡೆದುರುಳಿಸಿದ್ದೇವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಜಮ್ಮು ಮತ್ತು ಅದರ ಸುತ್ತಮುತ್ತಲಿನ ಪ್ರತಿಯೊಬ್ಬರು ಮುಂದಿನ ಕೆಲವು ಗಂಟೆಗಳ ಕಾಲ ದಯವಿಟ್ಟುಮನೆಯಲ್ಲಿರಿ ಅಥವಾ ನಿಮಗೆ ಆರಾಮದಾಯಕ ಸ್ಥಳದಲ್ಲಿಯೇ ಇರಿ. ವದಂತಿಗಳನ್ನು ನಿರಾಕರಿಸಿ, ಆಧಾರರಹಿತ ಅಥವಾ ದೃಢೀಕರಿಸದ ಸುದ್ದಿಗಳನ್ನು ಹಬ್ಬಿಸಬೇಡಿ. ನಾವು ಇದನ್ನು ಒಟ್ಟಿಗೆ ಹೆದರಿಸೋಣ ಎಂದು ಮನವಿ ಮಾಡಿದ್ದಾರೆ.
ಪಾಕಿಸ್ತಾನ ಸೇನೆಯ ವಿಫಲ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದ ಗುರುವಾರ ರಾತ್ರಿ ಬೆದರಿದ ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರ ಮತ್ತು ಕಣಿವೆಯ ಇತರ ಭಾಗಗಳಲ್ಲಿ ಶುಕ್ರವಾರ ಬೆಳಗ್ಗೆ ಶಾಂತ ಪರಿಸ್ಥಿತಿಯಿತ್ತು. ಆದರೆ ರಾತ್ರಿಯಾಗುತ್ತಿದ್ದಂತೆಯೇ ಪಾಕಿಸ್ತಾನ ಸೇನೆ ಮತ್ತೆ ಡ್ರೋನ್ ಮತ್ತು ಶೆಲ್ ದಾಳಿಯನ್ನು ಆರಂಭಿಸಿವೆ.
Advertisement